ಬೆಂಗಳೂರು : ರಾಜಕೀಯ ವಲಯದಲ್ಲಿ ಸಾಕಷ್ಟು ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ ಜೆ. ಜೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಂದ್ರು ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಸಿಐಡಿ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಆರೋಪಿಗಳಾದ ಶಾಹೀದ್ ಪಾಶಾ ಅಲಿಯಾಸ್ ನ್ಯಾರೋ, ಶಾಹೀದ್ ಪಾಶಾ ಅಲಿಯಾಸ್ ಗೇಣಾ ಎಂಬಾತನಿಗೆ ಐಪಿಸಿ 304ರಡಿ ಅಪರಾಧಕ್ಕಾಗಿ 7 ವರ್ಷಗಳ ಶಿಕ್ಷೆ ಮತ್ತು ತಲಾ ರೂ. 10 ಸಾವಿರ ರೂ. ದಂಡ, ಐಪಿಸಿ 506ರಡಿ ಅಪರಾಧಕ್ಕಾಗಿ 3 ವರ್ಷಗಳ ಶಿಕ್ಷೆ ಮತ್ತು ತಲಾ 5 ಸಾವಿರ ರೂ ದಂಡ ಹಾಗೂ ಐಪಿಸಿ 27 (1) ಆಯುಧ ಕಾಯ್ದೆಯ ಅಪರಾಧಕ್ಕಾಗಿ 3 ವರ್ಷಗಳ ಶಿಕ್ಷೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಲಾಗಿದೆ. 2022ರ ಏಪ್ರಿಲ್ 4 ರಂದು ರಾತ್ರಿ ಜೆ. ಜೆ ನಗರ ಠಾಣೆ ವ್ಯಾಪ್ತಿಯಲ್ಲಿ ವಿ. ಚಂದ್ರು ಎಂಬ ಯುವಕನ ಹತ್ಯೆ ನಡೆದಿತ್ತು.
ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ಸ್ನೇಹಿತ ಸೈಮನ್ ರಾಜ್ ಜೊತೆ ಚಿಕನ್ ರೋಲ್ ತಿನ್ನಲು ಚಂದ್ರು ಹೊರಟಿದ್ದ. ಹಳೇಗುಡ್ಡದಹಳ್ಳಿ ಆರೋಪಿಗಳ ಬೈಕ್ ಹಾಗೂ ಸೈಮನ್ ರಾಜ್ ಚಲಾಯಿಸುತ್ತಿದ್ದ ಸ್ಕೂಟರ್ಗೆ ಡಿಕ್ಕಿಯಾಗಿತ್ತು. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿತ್ತು.