ವಿಜಯಪುರ: "ವಕ್ಫ್ ಆಸ್ತಿಗಳ ಬಗ್ಗೆ ಜಿಲ್ಲೆಯಲ್ಲಿ ಅನವಶ್ಯಕವಾಗಿ ಗೊಂದಲ ಸೃಷ್ಟಿಯಾಗಿದೆ. ಹಳೆಯ ಗೆಜೆಟ್ ಅಧಿಸೂಚನೆಯಲ್ಲಿನ ದೋಷದ ಹಿನ್ನೆಲೆ ವಕ್ಫ್ ಕಾಯ್ದೆಯಡಿ ಜಿಲ್ಲೆಯ ಹೊನವಾಡ ಗ್ರಾಮದ ಜನರಿಗೆ ತಮ್ಮ ಪೂರ್ವಜರ ಜಮೀನುಗಳಿಂದ ತೆರವಾಗುವಂತೆ ನೋಟಿಸ್ ನೀಡಲಾಗಿದೆ. ಆದರೆ ಗ್ರಾಮದಲ್ಲಿರುವ 1,200 ಎಕರೆ ರೈತರ ಜಮೀನಿನ ಮೇಲೆ ಕರ್ನಾಟಕ ವಕ್ಫ್ ಮಂಡಳಿ ಹಕ್ಕು ಪಡೆಯಲು ಸಾಧ್ಯವಿಲ್ಲ" ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್ ಭಾನುವಾರ ಹೇಳಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿದ ಅವರು, "1974ರಲ್ಲಿ ಗೆಜೆಟ್ ನೋಟಿಫಿಕೇಶನ್ನಲ್ಲಿ ಹೊನವಾಡ ಗ್ರಾಮ ಎಂದು ತಪ್ಪಾಗಿ ಬರೆಯಲಾಗಿತ್ತು. ಅಲ್ಲಿನ ಜಮೀನು ಮೂಲತಃ ಮಹಲ್ ಬಾಗ್ ಸರ್ವೆ ನಂಬರ್ ನ ಭಾಗವಾಗಿದೆ. 1977 ರಲ್ಲಿ, ವಕ್ಫ್ ಮಂಡಳಿ ತನ್ನ ದಾಖಲೆಗಳನ್ನು ಸರಿಪಡಿಸಿದ್ದು, ಕೇವಲ 10 ಎಕರೆ ಸ್ಮಶಾನ ಭೂಮಿ ಸೇರಿದೆ ಎಂದು ಸ್ಪಷ್ಟಪಡಿಸಿದೆ. ಉಳಿದ 1,200 ಎಕರೆ ಭೂಮಿ (ವಕ್ಫ್ದು ಎಂದು ಹೇಳಲಾಗುತ್ತಿರುವ) ರೈತರಿಗೆ ಸೇರಿದ್ದು, ಹೀಗಾಗಿ ರೈತರಿಗೆ ಸೇರಿದ ಒಂದು ಇಂಚು ಭೂಮಿಯೂ ವಕ್ಫ್ ಆಸ್ತಿ ಅಲ್ಲ" ಎಂದು ಸಚಿವರು ವಿವರಿಸಿದರು.
10 ಎಕರೆ 29 ಗುಂಟೆ ಮಾತ್ರ ನೋಟಿಫಿಕೇಷನ್ ಆಗಿದೆ. ಜಿಲ್ಲೆಯಲ್ಲಿ 124 ಮಂದಿ ರೈತರಿಗೆ ನೋಟಿಸ್ಗಳು ಹೋಗಿವೆ. ಮ್ಯುಟೇಷನ್ ಕಾಲಂ 9ರಲ್ಲಿ ಒಂದು ಎಕರೆ ಆಸ್ತಿಯೂ ದಾಖಲಾಗಿಲ್ಲ. ಕಾಲಂ 11ರಲ್ಲಿ ಇಂಡಿಯಲ್ಲಿ 41 ಸರ್ವೇ ನಂಬರ್ಗಳು ಯಾವುದೇ ನೋಟಿಸ್ ನೀಡದೆ, ವಕ್ಫ್ ಆಸ್ತಿ ಎಂದು ಇಂಡೀಕರಣ ಮಾಡಲಾಗಿದೆ. ಎಸಿಯವರು ಅದನ್ನು ಈಗ ಸುಮೋಟೊ ತೆಗೆದುಕೊಂಡು ಪರಿಶೀಲನೆ ಮಾಡುತ್ತಿದ್ದಾರೆ. ಚಡಚಣದಲ್ಲಿ ಇಂತಹ 3 ಪ್ರಕರಣಗಳು ಇವೆ ಎಂದರು.