ಮೈಸೂರು: ದುಷ್ಟರ ಶಿಕ್ಷೆ, ಶಿಷ್ಟರ ರಕ್ಷೆ ದಸರೆಯ ಪ್ರತೀಕ. ವಿಜಯನಗರ ಅರಸರ ಜಯದ ಸಂಕೇತವಾಗಿ ಪ್ರಾರಂಭಿಸಲಾದ ಆಯುಧಪೂಜೆ, ದಸರಾ ಉತ್ಸವವನ್ನು ಮೈಸೂರು ಒಡೆಯರ್ ಅವರು ಮುಂದುವರೆಸಿದ್ದು, ಇಂದಿಗೂ ಆ ಪರಂಪರೆಯನ್ನು ಪಾಲಿಸಲಾಗುತ್ತಿದೆ ಎಂದು ದಸರಾ ಉತ್ಸವದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ಸರ್ಕಾರದ ಜಾಹೀರಾತಿನ ಕುರಿತ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಿದರು.
ದುಷ್ಟರ ಸಂಹಾರ ಆಗಬೇಕಿದೆ ಎಂಬ ಜಾಹಿರಾತಿನ ಬಗ್ಗೆ ವ್ಯಂಗ್ಯವಾಡಿದ ಸಂಸದೆ ಶೋಭಾ ಕರಂದ್ಲಾಜೆಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಸಂಸದೀಯ ಮಂಡಳಿಯ ಸದಸ್ಯತ್ವದಿಂದ ತೆಗೆದುಹಾಕಲು ಚಿಂತಿಸುವ ಬದಲು, ಈ ರೀತಿ ಸುಳ್ಳು ಮಾತನಾಡುವುದು ತಪ್ಪು. ಕೋರ್ಟ್ನ ಕೃಪೆಯಿಂದಾಗಿ ಅವರು ಜೈಲುಪಾಲಾಗದೆ ಹೊರಗಿದ್ದಾರೆ ಎಂದು ಟೀಕಿಸಿದರು.
ರಾಜ್ಯದ ಜನತೆಗೆ ದಸರಾ ಹಬ್ಬದ ಶುಭ ಕೋರಿದ ಸಿಎಂ, ನಾಳೆ ಮೈಸೂರಿನಲ್ಲಿ ನಡೆಯುವ ಜಂಬೂಸವಾರಿ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ರಾಜಕೀಯದಲ್ಲಿ ತೆಗಳುವವರು, ಹೊಗಳುವವರು ಇರುತ್ತಾರೆ. ಶತ್ರುಗಳು, ಅಭಿಮಾನಿಗಳೂ ಇರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ನನ್ನನ್ನು ಸಹಮತಿಸಲೇಬೇಕೆಂಬ ಭಾವನೆ ನನಗಿಲ್ಲ. ಆರೋಗ್ಯಕರ ಚರ್ಚೆ, ಟೀಕೆಗಳು ನಡೆದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದರು.