ಕರ್ನಾಟಕ

karnataka

ETV Bharat / state

ರಾಣಿ ಚನ್ನಮ್ಮನ ಬಗ್ಗೆ ಯುವಪೀಳಿಗೆಗೆ ತಿಳಿಸಿಕೊಡಲು ಕ್ರಮ: ಸಿಎಂ ಸಿದ್ದರಾಮಯ್ಯ

ರಾಯಣ್ಣ ಮತ್ತು ಬಾಳಪ್ಪನವರು ಚನ್ನಮ್ಮಾಜಿ ಹೋರಾಟದಲ್ಲಿ ಜೊತೆಗಿದ್ದವರು. ದೇಶಪ್ರೇಮ ಬೆಳೆಸಲು ಯುವಜನತೆಗೆ ಇವರ ಹೋರಾಟ ಸ್ಫೂರ್ತಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕಿತ್ತೂರು ಉತ್ಸವದ ಸಮಾರೋಪ ಸಮಾರಂಭ
ಕಿತ್ತೂರು ಉತ್ಸವದ ಸಮಾರೋಪ ಸಮಾರಂಭ (ETV Bharat)

By ETV Bharat Karnataka Team

Published : 5 hours ago

ಬೆಳಗಾವಿ: ಬಲಿಷ್ಠ ಬ್ರಿಟಿಷರ ವಿರುದ್ಧ ಹೋರಾಟದ‌ ಕಹಳೆ ಮೊಳಗಿಸಿದ ರಾಣಿ ಚನ್ನಮ್ಮನ ಬಗ್ಗೆ ಯುವಪೀಳಿಗೆಗೆ ತಿಳಿಸಿಕೊಡಲು ಕ್ರಮ ಕೈಗೊಳ್ಳಲಾಗಿದೆ. ರಾಯಣ್ಣ ಮತ್ತು ಬಾಳಪ್ಪನವರು ಚನ್ನಮ್ಮಾಜಿ ಹೋರಾಟದಲ್ಲಿ ಜೊತೆಗಿದ್ದವರು. ಯುವಜನತೆಯಲ್ಲಿ ದೇಶಪ್ರೇಮ ಬೆಳೆಸಲು ಇವರ ಹೋರಾಟ ಸ್ಫೂರ್ತಿಯಾಗಿದೆ. ಜಾತಿ, ಧರ್ಮ ಬದಿಗಿಟ್ಟು ಪ್ರತಿಯೊಬ್ಬರೂ ಪರಸ್ಪರ ಪ್ರೀತಿಸುವ ಮೂಲಕ ದೇಶಪ್ರೇಮವನ್ನು ಪ್ರದರ್ಶಿಸುವಂತೆ ಸಿಎಂ ಸಿದ್ದರಾಮಯ್ಯ ಕರೆ ನೀಡಿದರು‌.

ಕಿತ್ತೂರಿನ ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಕಿತ್ತೂರು ಉತ್ಸವ ಮತ್ತು ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಾಣಿ ಚನ್ನಮ್ಮ ಕಪ್ಪ ಕಾಣಿಕೆ ಏಕೆ ಕೊಡಬೇಕು ಎಂದು ಪ್ರಶ್ನಿಸುವುದರ ಜೊತೆಗೆ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆ ವಿರುದ್ಧ ಮೊಟ್ಟಮೊದಲ‌ ಬಾರಿಗೆ ಯುದ್ಧ ಸಾರಿ ಜಯ ಗಳಿಸಿದವರು. ವಿಜಯೋತ್ಸವದ 200ನೇ ವರ್ಷಾಚರಣೆ ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಲು ಶಾಸಕ ಬಾಬಾಸಾಹೇಬ್ ಪಾಟೀಲರ ಒತ್ತಾಯದ ಮೇರೆಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಚನ್ನಮ್ಮನವರ ಜಯಂತ್ಯೋತ್ಸವವನ್ನು ಸರ್ಕಾರದ ವತಿಯಿಂದ ಆಚರಿಸಲು ಆದೇಶ ಮಾಡಿದ್ದು ನಮ್ಮ ಸರ್ಕಾರ. ಅದು ಸಿದ್ದರಾಮಯ್ಯ ಸರ್ಕಾರ ಎಂದು ಹೇಳಿದರು.

ಕಿತ್ತೂರು ಉತ್ಸವದ ಸಮಾರೋಪ ಸಮಾರಂಭ (ETV Bharat)

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಮಹಾಪುರುಷರ ಸ್ಮರಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ. ಕಿತ್ತೂರು ಚನ್ಮಮ್ಮನವರ ವಿಜಯೋತ್ಸವವನ್ನು ಅದ್ಧೂರಿ ಮತ್ತು ಅರ್ಥಪೂರ್ಣ ಆಚರಣೆಗೆ ಕ್ರಮ ಕೈಗೊಂಡಿದ್ದಾರೆ. ಇನ್ನು ಶಾಸಕ ಬಾಬಾಸಾಹೇಬ ಪಾಟೀಲ ಓರ್ವ ಅತ್ಯುತ್ತಮ ಕೆಲಸಗಾರ. ಕಿತ್ತೂರು ವಸತಿ ಶಾಲೆಗೆ‌ ಇಲಾಖೆಯ ವತಿಯಿಂದ 22 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.

2 ವರ್ಷದಲ್ಲಿ ಕೋಟೆಯ ಚಿತ್ರಣ ಬದಲಾಗಲಿದೆ:ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಸ್ವಾಭಿಮಾನದ ರಕ್ತ ಮೈಯಲ್ಲಿ ಹರಿಯುತ್ತಿದ್ದರಿಂದ ಸೂರ್ಯ ಮುಳುಗದ ಸಾಮ್ರಾಜ್ಯದ ವಿರುದ್ಧ ಸೆಟೆದು ನಿಂತು ಹೋರಾಟ ಮಾಡಿ ಗೆಲುವು ಸಾಧಿಸಿದ್ದಕ್ಕೆ ಇಂದು ವಿಜಯೋತ್ಸವ ಆಚರಿಸುತ್ತಿದ್ದೇವೆ. ಕೋಟೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪ್ರಾಧಿಕಾರಕ್ಕೆ ಈಗ 50 ಕೋಟಿಗೂ ಅಧಿಕ ಹಣ ಸಿಎಂ ನೀಡಿದ್ದಾರೆ. ಥೀಮ್ ಪಾರ್ಕ್ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದಾರೆ. ನೀರಾವರಿ ಸೇರಿ ನಾವು ಕೇಳಿದ ಕೆಲಸಕ್ಕೆ ಹಣ ನೀಡಿದ್ದು, ಪ್ರವಾಸಿಗರನ್ನು ಆಕರ್ಷಿಸುವ ಕೆಲಸ ಆಗಬೇಕಿದೆ. ಎರಡು ವರ್ಷಗಳಲ್ಲಿ ಕೋಟೆ ಆವರಣದ ಸಂಪೂರ್ಣ ಚಿತ್ರಣ ಬದಲಾಗಲಿದೆ ಎಂದರು ಹೇಳಿದರು.

ಚನ್ನಮ್ಮ, ರಾಯಣ್ಣನ ಖಡ್ಗ ವಾಪಸ್​ ತನ್ನಿ:ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಕಿತ್ತೂರು ಉತ್ಸವವನ್ನು ದಸರಾ ಮಾದರಿಯಲ್ಲಿ ಕಿತ್ತೂರು ಕರ್ನಾಟಕದ ನಾಡಹಬ್ಬವಾಗಿ ಸರ್ಕಾರ ಘೋಷಣೆ ಮಾಡಬೇಕು. ಝಾನ್ಸಿ ರಾಣಿ ಕ್ಷೇತ್ರ ರಾಷ್ಟ್ರೀಯ ಸ್ಮಾರಕವಾಗಿದೆ‌. ಅದೇ ರೀತಿ ಚನ್ನಮ್ಮನ ಸಮಾಧಿ ಸ್ಥಳವಿರುವ ಬೈಲಹೊಂಗಲವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಕ್ರಮ ವಹಿಸಬೇಕು. ಚನ್ನಮ್ಮ ಮತ್ತು ರಾಯಣ್ಣನ ಖಡ್ಗವನ್ನು ಭಾರತಕ್ಕೆ ತರಲು ಸರ್ಕಾರ ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿ, 2022ರಲ್ಲಿ ಕೇಂದ್ರ ಸರ್ಕಾರ ಬೆಳಕಿಗೆ ಬಾರದ ಸ್ವಾತಂತ್ರ್ಯ ಹೋರಾಟಗಾರರ ಕುರಿತು 22 ಭಾಷೆಗಳಲ್ಲಿ ಕೃತಿ ರಚಿಸುವ ಯೋಜನೆ ಜಾರಿಗೆ ತಂದಿತು. ಸಂಶೋಧನೆ ಕೈಗೊಂಡು ಕೃತಿ‌ ರಚಿಸುವ ಜವಾಬ್ದಾರಿಯನ್ನು ಯುವಕರಿಗೆ ನೀಡಿದ್ದರಿಂದ ಉತ್ಕೃಷ್ಟ ಕೃತಿ ರಚನೆ ಸಾಧ್ಯವಾಗಲಿಲ್ಲ. ಮೂರ್ನಾಲ್ಕು ಸಾವಿರ ವರ್ಷಗಳ ಕೃತಿಗಳು, ರಾಮಾಯಣ, ಮಹಾಭಾರತ‌ ತಿಳಿದುಕೊಂಡಿರುವ ಜನರಿಗೆ 200 ವರ್ಷಗಳ ಕಿತ್ತೂರು ಚನ್ನಮ್ಮಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.

ಕಿತ್ತೂರು ಉತ್ಸವ (ETV Bharat)

ರಾಜಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಿಕಿ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಕಾದರವಳ್ಳಿ ಸೀಮಿಮಠದ ಡಾ.ಫಾಲಾಕ್ಷ ಶಿವಯೋಗೀಶ್ವರರು ಆಶೀರ್ವಚನ ನೀಡಿದರು. ಶಾಸಕರಾದ ಅಶೋಕ ಪಟ್ಟಣ, ಮಹಾಂತೇಶ ಕೌಜಲಗಿ, ವಿಶ್ವಾಸ ವೈದ್ಯ, ಆಸೀಫ್ ಸೇಠ್, ಗಣೇಶ ಹುಕ್ಕೇರಿ, ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ‌ ಗುಳೇದ ಸೇರಿ ಮತ್ತಿತರರು ಇದ್ದರು.

ಕಾರ್ಯಕ್ರಮಕ್ಕೂ ಮೊದಲು ಕಿತ್ತೂರು ಪಟ್ಟಣದ ರಾಣಿ ಚನ್ನಮ್ಮನವರ ಪುತ್ಥಳಿಗೆ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು‌. ಈ ವೇಳೆ ಸಚಿವ ಶಿವರಾಜ ತಂಗಡಗಿ, ಶಾಸಕ ಬಾಬಾಸಾಹೇಬ ಪಾಟೀಲ ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ:ಕಿತ್ತೂರು ಉತ್ಸವದಲ್ಲಿ ಜನಸಾಗರ: ವೀರರಾಣಿ ಚೆನ್ನಮ್ಮನ ನಾಡಿಗೆ ನುಗ್ಗಿ ಬಂದ‌ ಲಕ್ಷಾಂತರ ಜನ

ABOUT THE AUTHOR

...view details