ಕರ್ನಾಟಕ

karnataka

ಅಧಿವೇಶನಕ್ಕೆ ಶಾಸಕರ ಹಾಜರಾತಿ ಹೆಚ್ಚಿಸಲು ಹೊಸ ಹೊಸ ಪ್ರಯೋಗ: ಉಚಿತ ಉಪಹಾರ, ಭೋಜನ ಆಯ್ತು, ಈಗ ಕಿರು ನಿದ್ದೆಗೂ ವಿಶೇಷ ಖುರ್ಚಿ! - SPL CHAIR ARRANGEMENT TO MLAS

By ETV Bharat Karnataka Team

Published : Jul 19, 2024, 9:31 PM IST

ಶಾಸಕರಿಗೆ ಮಧ್ಯಾಹ್ನದ ಊಟದ ನಂತರ ಕಿರು ನಿದ್ರೆಗೆ ವಿಧಾನಸಭೆ ಮೊಗಸಾಲೆಯಲ್ಲಿ ವಿಶೇಷ ಖುರ್ಚಿಯ ವ್ಯವಸ್ಥೆ ಮಾಡಲಾಗಿದೆ.

chair
ಖುರ್ಚಿ (ETV Bharat)

ಬೆಂಗಳೂರು :ವಿಧಾನಮಂಡಲ ಅಧಿವೇಶನಕ್ಕೆ ಶಾಸಕರ ಹಾಜರಾತಿ ಹೆಚ್ಚಿಸುವ ನಿಟ್ಟಿನಲ್ಲಿ ಸ್ಪೀಕರ್ ಹೊಸ ಹೊಸ ಪ್ರಯೋಗಗಳ ಮೊರೆ ಹೋಗುತ್ತಿದ್ದಾರೆ. ಅದರ ಭಾಗವಾಗಿ ಶಾಸಕರಿಗೆ ಉಚಿತ ರುಚಿಕರ ಉಪಹಾರ, ಮಧ್ಯಾಹ್ನದ ಊಟವನ್ನು ಈಗಾಗಲೇ ವ್ಯವಸ್ಥೆ ಮಾಡಿದ್ದಾರೆ. ಅದರ ಜೊತೆಗೆ ಶಾಸಕರಿಗೆ ಮಧ್ಯಾಹ್ನದ ಕಿರು ನಿದ್ರೆಗಾಗಿ ವಿಧಾನಸಭೆ ಮೊಗಸಾಲೆಯಲ್ಲಿ ವಿಶೇಷ ಖುರ್ಚಿಯ ವ್ಯವಸ್ಥೆ ಮಾಡಲಾಗಿದೆ.

ವಿಧಾನಮಂಡಲ ಅಧಿವೇಶನದಲ್ಲಿ ಶಾಸಕರ ಹಾಜರಾತಿ ಹೆಚ್ಚಿಸಲು ಸ್ಪೀಕರ್ ಯು. ಟಿ ಖಾದರ್ ನಾನಾ ಕಸರತ್ತು ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಅಧಿವೇಶನಕ್ಕೆ ಶಾಸಕರು ಗೈರಾಗುವ ಮೂಲಕ ತಮ್ಮ ನಿರಾಸಕ್ತಿ ಪ್ರದರ್ಶಿಸುತ್ತಿರುತ್ತಾರೆ‌. ಮಹತ್ವದ ಚರ್ಚೆಗಳಲ್ಲಿ ಪಾಲ್ಗೊಳ್ಳಲು ಶಾಸಕರುಗಳು ಹಿಂದೇಟು ಹಾಕುತ್ತಾರೆ. ಪ್ರತಿ ಬಾರಿಯೂ ಶಾಸಕರ ಹಾಜರಾತಿ ಅತ್ಯಲ್ಪವಾಗಿರುವುದು ಅಧಿವೇಶನದ ಸಾಮಾನ್ಯ ನೋಟವಾಗಿದೆ. ಈ ಹಾಜರಾತಿ ಹೆಚ್ಚಿಸಲು ಸ್ಪೀಕರ್ ಯು. ಟಿ ಖಾದರ್ ಹೊಸ ಹೊಸ ಪ್ರಯೋಗಗಳ ಮೊರೆ ಹೋಗುತ್ತಿದ್ದಾರೆ.

ಕಳೆದ ಬಾರಿಯ ಅಧಿವೇಶನದಲ್ಲಿ ಶಾಸಕರ ಸಕಾಲ ಹಾಜರಾತಿ ಹೆಚ್ಚಿಸಲು ಉಚಿತ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಿದ್ದರು. ಅದೇ ರೀತಿ ಮಧ್ಯಾಹ್ನ ಶಾಸಕರಿಗೆ ರುಚಿಕರವಾದ ಭೋಜನ ವ್ಯವಸ್ಥೆ ಮಾಡಿದ್ದಾರೆ. ಇದೀಗ ಸ್ಪೀಕರ್ ಯು. ಟಿ ಖಾದರ್ ಮತ್ತೊಂದು ಹೊಸ ಪ್ರಯೋಗದ ಮೊರೆ ಹೋಗಿದ್ದಾರೆ.

ಕಿರು ನಿದ್ರೆಗಾಗಿ ವಿಶೇಷ ಖುರ್ಚಿ ವ್ಯವಸ್ಥೆ:ಉಪಹಾರ, ಭೋಜನದ ಬಳಿಕ ಶಾಸಕರಿಗಾಗಿ ಮಧ್ಯಾಹ್ನದ ಕಿರು ನಿದ್ರೆ ಮಾಡುವ ಸಲುವಾಗಿ ವಿಶೇಷ ಖುರ್ಚಿಯ ವ್ಯವಸ್ಥೆ ಮಾಡಲಾಗಿದೆ. ಸ್ಪೀಕರ್ ಯು. ಟಿ ಖಾದರ್ ವಿಧಾನಸಭೆಯ ಮೊಗಸಾಲೆಯಲ್ಲಿ ರಿಕ್ಲೈನರ್ ಸೋಫಾ ಸೆಟ್​ನ ವ್ಯವಸ್ಥೆ ಮಾಡುತ್ತಿದ್ದಾರೆ. ಸದ್ಯ ಪ್ರಾಯೋಗಿಕವಾಗಿ ಈ ವಿಲಾಸಿ ಖುರ್ಚಿಯನ್ನು ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಅಳವಡಿಸಲಾಗಿದೆ.

''ಮುಂದೆ ಈ ರೀತಿಯ ಇನ್ನಷ್ಟು ಖುರ್ಚಿಯನ್ನು ಮೊಗಸಾಲೆಯಲ್ಲಿ ಹಾಕಲಾಗುವುದು, ಮಧ್ಯಾಹ್ನದ ಭೋಜನದ ಬಳಿಕ ಹಲವರು ಕಿರು ನಿದ್ರೆಗೆ ಹೋಗುತ್ತಾರೆ. ಈ ಕಿರು ನಿದ್ದೆಗೆ ಶಾಸಕರು ಹೊರ ಹೋಗುವುದನ್ನು ತಪ್ಪಿಸಲು ಮೊಗಸಾಲೆಯಲ್ಲೇ ವಿಶೇಷ ಸೋಫಾಸೆಟ್​ನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ'' ಎಂದು ಸ್ಪೀಕರ್ ಯು. ಟಿ ಖಾದರ್ ತಿಳಿಸಿದ್ದಾರೆ.

ಸದನವನ್ನು ಬೇಗ ಆರಂಭಿಸುವ ಸಲುವಾಗಿ ಶಾಸಕರಿಗೆ ಮೊಗಸಾಲೆಯಲ್ಲೇ ಬೆಳಗ್ಗೆ ಉಚಿತ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಇನ್ನು ಮಧ್ಯಾಹ್ನದ ಊಟಕ್ಕಾಗಿ ಶಾಸಕರು ಹೊರಗಡೆ ಹೋಗುವುದನ್ನು ತಪ್ಪಿಸಲು ಮೊಗಸಾಲೆಯಲ್ಲೇ ರುಚಿಕರ ಭೋಜನ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಸದನ ಕಲಾಪದಲ್ಲಿ ಕೋರಂ ಹೆಚ್ಚಿಸಿ ಹೆಚ್ಚು ಶಾಸಕರು ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಇದರ ಉದ್ದೇಶವಾಗಿದೆ.

ಈಗ ಮಧ್ಯಾಹ್ನದ ಊಟ ಮಾಡಿದ ಬಳಿಕ ಕೆಲ ಶಾಸಕರು ಕಿರು ನಿದ್ದೆ ಮಾಡುವ ಅಭ್ಯಾಸ ಹೊಂದಿದ್ದಾರೆ. ಅದಕ್ಕಾಗಿ ವಿಧಾನಸೌಧದ ಹೊರಗಡೆ ಹೋಗುವುದರಿಂದ ಕಲಾಪಕ್ಕೆ ತಡವಾಗಿ ಆಗಮಿಸುತ್ತಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಇದೀಗ ವಿಧಾನಸಭೆಯ ಮೊಗಸಾಲೆಯಲ್ಲಿ ರಿಕ್ಲೈನರ್ ಖುರ್ಚಿಯನ್ನು ಹಾಕಲು ನಿರ್ಧಾರ ಮಾಡಿದ್ದಾರೆ.

ಹಾಜರಾತಿ ದಾಖಲೆಗೆ ಎಐ ಕ್ಯಾಮೆರಾ ತಂತ್ರಜ್ಞಾನ :ಇನ್ನು ಸದನದಲ್ಲಿ ಶಾಸಕರ ಹಾಜರಾತಿ ದಾಖಲೆ ಮಾಡಿಕೊಳ್ಳಲು ಎಐ ತಂತ್ರಜ್ಞಾನ ಆಧಾರಿತ ಕ್ಯಾಮೆರಾ ಬಳಕೆ ಮಾಡಲಾಗಿದೆ. ಶಾಸಕರು ಸದನಕ್ಕೆ ಬರುವಾಗ ಕ್ಯಾಮರಾ ಮುಂದೆ ಕೆಲ ಕ್ಷಣ ನಿಲ್ಲಬೇಕು‌. ಶಾಸಕರ ಮುಖವನ್ನು ಎಐ ಕ್ಯಾಮೆರಾ ದಾಖಲಿಸುತ್ತದೆ.

ಎಐ ಆಧಾರಿತ ಕ್ಯಾಮೆರಾದ ಮೂಲಕ ಶಾಸಕರು ಸದನದ ಒಳ ಬರುವುದು, ಹೊರ ಹೋಗುವುದು ನಿಖರವಾಗಿ ದಾಖಲಾಗುತ್ತದೆ. ಇದರಿಂದ ಶಾಸಕರು ಸದನದಲ್ಲಿದ್ದ ಸಮಯವನ್ನು ಎಐ ತಂತ್ರಜ್ಞಾನ ದಾಖಲು ಮಾಡುತ್ತದೆ.

ಕಲಾಪಕ್ಕೆ ಹಾಜರಾಗುವುದು ಶಾಸಕರ ಜವಾಬ್ದಾರಿ ಹಾಗೂ ಕರ್ತವ್ಯ. ಶಾಸಕರು ತಮ್ಮ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸುವುದು ಅವರ ಆದ್ಯ ಕರ್ತವ್ಯವಾಗಿದೆ‌. ಹೀಗಿರುವಾಗ ಅಧಿವೇಶನಕ್ಕೆ ಶಾಸಕರನ್ನು ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಶಾಸಕರಿಗೆ ಉಚಿತ ರುಚಿಕರ ಉಪಹಾರ, ಭೋಜನ ಜೊತೆಗೆ ನಿದ್ರೆಗೂ ಅವಕಾಶ ಕಲ್ಪಿಸುವ ಮೂಲಕ ಸಾರ್ವಜನಿಕರ ಹಣ ಪೋಲು ಮಾಡುವುದು ಎಷ್ಟು ಸರಿ? ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ‌.

ಇದನ್ನೂ ಓದಿ :ಶಾಸಕರು, ಸಚಿವರ ಆಪ್ತ ಸಹಾಯಕರಿಗೆ ಮೊಗಸಾಲೆಯ ಪ್ರವೇಶ ಇಲ್ಲ: ಸ್ಪೀಕರ್ ಯು.ಟಿ.ಖಾದರ್ - Speaker U T Khader

ABOUT THE AUTHOR

...view details