ಕರ್ನಾಟಕ

karnataka

ETV Bharat / state

ಮುಡಾ ಹಗರಣ ಆರೋಪ: ಸಿಎಂ ರಾಜೀನಾಮೆ ನೀಡಲಿ, ಸಿಬಿಐ ತನಿಖೆ ನಡೆಸಲಿ- ಬಿ.ವೈ.ವಿಜಯೇಂದ್ರ - MUDA Case

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮುಡಾ ಪ್ರಕರಣದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದಾಖಲೆ ಬಿಡುಗಡೆಗೊಳಿಸಿ ಮಾತನಾಡಿದರು.

By ETV Bharat Karnataka Team

Published : Jul 10, 2024, 12:22 PM IST

ಮಲ್ಲೇಶ್ವರಂದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ
ಮಲ್ಲೇಶ್ವರಂದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ (ETV Bharat)

ಮಲ್ಲೇಶ್ವರಂದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿ (ETV Bharat)

ಬೆಂಗಳೂರು:"ಮುಡಾ ಹಗರಣದ ತನಿಖೆಗೆ ಯಾವುದೇ ಕಾರಣಕ್ಕೂ ಎಸ್ಐಟಿ ರಚಿಸಬಾರದು. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಹಗರಣದ ವಿರುದ್ಧ ಶುಕ್ರವಾರ ಮೈಸೂರಿನಲ್ಲಿ ಬೃಹತ್ ಹೋರಾಟ ನಡೆಸಿ ನಂತರ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಲಿದ್ದೇವೆ"ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

"ಮುಡಾ ಹಗರಣದ ಮೂಲಕ ಸಿಎಂ ಮುಖವಾಡ ಕಳಚಿಬಿದ್ದಿದೆ. ಹೇಗಾದರೂ ಸರಿ ಬೆಲೆ ಬಾಳುವ ಭೂಮಿ ಕಬಳಿಕೆ ಮಾಡಬೇಕು ಎಂದು ನಿಯಮ‌ಗಾಳಿಗೆ ತೂರಿ ಅಧಿಕಾರ ದರ್ಬಳಕೆ ಮಾಡಿಕೊಂಡಿದ್ದಾರೆ. ಇದರ ನೇರ ಹೊಣೆ ಹೊರಬೇಕು, ನುಡಿದಂತೆ ನಡೆದಿದ್ದೇವೆ ಎಂದಿದ್ದಾರೆ. ಮಹಾದೇವಪ್ಪ, ಕಾಕಾಸಾಹೇಬ್ ನಿನ್ನ ಪತ್ನಿಗೂ ಫ್ರೀ ನನ್ನ ಪತ್ನಿಗೂ ಫ್ರೀ ಎಂದಿದ್ದರು. ರಾಜ್ಯದ ಬಡ ಹೆಣ್ಣುಮಕ್ಕಳಿಗೆ 2 ಸಾವಿರ ಕೊಟ್ಟು ತಮ್ಮ ಪತ್ನಿಗೆ ತಲಾ 2 ಕೋಟಿಗೂ ಹೆಚ್ಚು ಬೆಲೆ ಬಾಳುವ 14 ನಿವೇಶನಗಳನ್ನು ಮಂಜೂರಿ ಮಾಡಿಸಿದ್ದಾರೆ" ಎಂದು ಆರೋಪಿಸಿದರು.

ತಮ್ಮ ಅವಧಿಯಲ್ಲಿ ಅವ್ಯವಹಾರ ನಡೆಸಿ ತಮ್ಮದೇ ಸರ್ಕಾರದಿಂದ ಪರಿಹಾರ ಕೇಳಿದ ಸಿಎಂ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ. 3.16 ಎಕರೆ ಭೂಮಿಗೆ ಬದಲಾಗಿ 14 ನಿವೇಶನ ಮಂಜೂರಾಗಿದೆ. ಅದು 17-18 ಕೋಟಿ ಮೌಲ್ಯ ಮಾತ್ರ ವಾಸ್ತವವಾಗಿ ನಮಗೆ 60 ಕೋಟಿ ಪರಿಹಾರ ನೀಡಬೇಕು ಎಂದಿದ್ದಾರೆ. 2022ರ ಜನವರಿ 12 ರಂದು ಕ್ರಯಪತ್ರವಾಗಿದೆ. ಇದರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಭೂಮಿಯನ್ನು ಸ್ವ ಇಚ್ಚೆಯಿಂದ ಬಿಟ್ಟುಕೊಡಲು ಪ್ರೋತ್ಸಾಹಕವಾಗಿ ನಿಯಮ 1991 ರ ಪ್ರಕಾರ 14 ನಿವೇಶನ ಕೊಡಲಾಗಿದೆ ಎಂದಿದೆ. ಆದರೆ 1991ರ ಕಾನೂನು ಪ್ರಕಾರ ಬರಬೇಕಾದ ಒಟ್ಟು ನಿವೇಶನ ಒಂದು ಎಕರೆಗೆ 1 ನಿವೇಶನ, 3-4 ಎಕರೆಯಾದರೆ 4,800 ಅಡಿ ಮಾತ್ರ ಅಂದರೆ 2 ನಿವೇಶನ ಮಾತ್ರ ಕೊಡಬೇಕಿದೆ. ಆದರೆ ಇವರು ಕೊಟ್ಟಿರುವುದು 40x60ರ ಎರಡು ನಿವೇಶನ ಬದಲು 14 ಕೊಟ್ಟಿರುವುದು ಸಂಪೂರ್ಣ ಕಾನೂನು ಬಾಹಿರವಾಗಿದೆ. ಬಡವರಿಗೆ ಸಿಗಬೇಕಾದ ನಿವೇಶನ ಸಿಎಂ ಪತ್ನಿಗೆ ಸಿಕ್ಕಿದೆ."

"2004 ರಲ್ಲಿ ಸಿದ್ದರಾಮಯ್ಯ ಪತ್ನಿಯ ಸಹೋದರ ಖರೀದಿ ಮಾಡುವಾಗ ಮುಡಾ ಸ್ವಾಧೀನದಲ್ಲಿದೆ ಎಂದಿದೆ, ಮುಡಾ ಸ್ವಾಧೀನದಲ್ಲಿ ಇದ್ದಿದ್ದನ್ನು ಇವರು ಹೇಗೆ ಖರೀದಿ ಮಾಡಿದರು?. 2009 ರಲ್ಲಿ ಉಡುಗೊರೆಯಾಗಿ ಸಿದ್ದರಾಮಯ್ಯ ಪತ್ನಿಗೆ ನೀಡಿದ್ದು ಹೇಗೆ?. ಆರ್.ಟಿ.ಸಿ ಯಲ್ಲಿಯೇ ಇದು ಮುಡಾ ಸ್ವಾಧೀನದಲ್ಲಿದೆ ಎಂದಿದೆ ಆದರೂ ಸಹ ಭೂಮಿ ಖರೀದಿ, ಗಿಫ್ಟ್ ಡೀಡ್, ಭೂ ಪರಿವರ್ತನೆಯಾಗಿದೆ, ಕೃಷಿ ಭೂಮಿ ಎಂದು ಗಿಫ್ಡ್ ಡೀಡ್ ಮಾಡಿದ್ದಾರೆ. ಆದರೆ ಅದು ಪರಿವರ್ತಿತ ಜಾಗವಾಗಿತ್ತು, ಇನ್ನು ಸಿದ್ದರಾಮಯ್ಯ 2013 ರ ಪ್ರಮಾಣಪತ್ರದಲ್ಲಿ 3.16 ಎಕರೆ ಜಾಗದ ಉಲ್ಲೇಖವನ್ನೇ ಮಾಡಿಲ್ಲ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಪ್ರಜಾಪ್ರತಿನಿಧಿ ಕಾಯ್ದೆಯ ಉಲ್ಲಂಘನೆಯಾಗಿದೆ, ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ಕೊಡಲಿದ್ದೇವೆ" ಎಂದರು.

"62 ಕೋಟಿ ಪರಿಹಾರ ಬರಬೇಕಿತ್ತು 18 ಕೋಟಿ ಮೌಲ್ಯದ ನಿವೇಶನ ಮಾತ್ರ ಬಂದಿದೆ ಎಂದು ಸಿಎಂ ಹೇಳಿದ್ದಾರೆ. ಇದು ಕೂಡ ತಪ್ಪು ಮಾಹಿತಿಯಾಗಿದೆ. 1991ರ ನಿಯಮದ ಪ್ರಕಾರ 2 ನಿವೇಶನ ಮಾತ್ರ? ಇದು ಕೂಡ ತಪ್ಪು ಮಾಹಿತಿಯಾಗಿದೆ. ಮುಡಾದಲ್ಲಿ ಎರಡು ಪ್ರಕರಣ ಇದೆ. ಸಿಎಂ ಪತ್ನಿಗೆ 14 ನಿವೇಶನ ಕೊಟ್ಟಿದ್ದು ಒಂದು ಪ್ರಕರಣವಾದರೆ, ಅಕ್ರಮದ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಆತುರ ಆತುರವಾಗಿ ಮೈಸೂರಿಗೆ ಹೋಗಿ ಅಧಿಕಾರಿಗಳ ಸಭೆ ಕರೆದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಏಕಾಏಕಿ ಅಧಿಕಾರಿಗಳ ವರ್ಗಾವಣೆ ಮಾಡಿದ್ದಾರೆ. ಯಾರಿಗೆ ಶಿಕ್ಷೆಯಾಗಬೇಕೋ ಅವರನ್ನು ವರ್ಗಾವಣೆ ಮಾಡಿದ್ದಾರೆ. ಕಠಿಣ ಕ್ರಮದ ಬದಲು ವರ್ಗಾವಣೆ ಮಾಡಿದ್ದಾರೆ. ಮುಡಾ ಹಗರಣದ ಕುರಿತು ತನಿಖೆ ನಡೆಸಿ ವರದಿ ನೀಡಿದ್ದ ಜಿಲ್ಲಾಧಿಕಾರಿಯನ್ನೂ ವರ್ಗಾವಣೆ ಮಾಡಿದ್ದಾರೆ. ಸಿಎಂ ತವರು ಜಿಲ್ಲೆಯಲ್ಲಿ ಸಂಬಂಧಪಟ್ಟ ಸಚಿವರು ಪ್ರಕರಣ ಮುಚ್ಚಿಹಾಕಲು ಪ್ರಯತ್ನ ಮಾಡಿದ್ದಾರೆ. ಮೈಸೂರಿನಿಂದ ಎಲ್ಲ ಕಡತ ಸ್ವತಃ ಸಚಿವರೇ ತೆಗೆದುಕೊಂಡು ಬೆಂಗಳೂರಿಗೆ ಬಂದಿದ್ದಾರೆ. ದೊಡ್ಡ ಭ್ರಷ್ಟಾಚಾರದ ಪ್ರಕರಣ ಹೊರಗೆ ಬಾರದಿರಲಿ ಎಂದು ಮುಚ್ಚಿಡಲು ಕಡತ ತೆಗೆದುಕೊಂಡು ಬಂದಿದ್ದಾರೆ" ಎಂದು ಆರೋಪಿಸಿದರು.

"14 ನಿವೇಶನಗಳ ಗೈಡ್ ಲೈನ್ ವ್ಯಾಲ್ಯೂ 3 ಸಾವಿರ ಪ್ರತಿ ಅಡಿ ಇದ್ದರೆ ಮಾರುಕಟ್ಟೆ ಬೆಲೆ 9 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ನಿವೇಶನ ಇದಾಗಿದೆ. 50:50 ಅನುಪಾತದಲ್ಲಿ ನಿವೇಶನ ಹಂಚಿಕೆಗೆ ಅರ್ಹ ಎನ್ನುತ್ತಿದ್ದಾರೆ. ಆದರೆ ವಾಸ್ತವವಾಗಿ ಸಿಎಂ ಪತ್ನಿ 2 ನಿವೇಶನ ಮಾತ್ರ ಪಡೆಯಲು ಅರ್ಹರಿದ್ದಾರೆ. ಮುಡಾದಲ್ಲಿ ಇಷ್ಟೊಂದು ಅಕ್ರಮ ನಡೆಯುತ್ತಿದೆ. ಹರಾಜು ಆಗಬೇಕಿದ್ದ ನಿವೇಶನ ಮನಬಂದಂತೆ ಹಂಚಿಕೆ ಮಾಡುತ್ತಿರುವ ಕುರಿತು ಜಿಲ್ಲಾಧಿಕಾರಿ ವರದಿ ನೀಡಿದ್ದರೂ ಹಗರಣ ಬಯಲಿಗೆ ಬರುವ ವಾರಕ್ಕೆ ಮೊದಲು 42 ನಿವೇಶನಗಳನ್ನು ಒಬ್ಬರಿಗೆ ಹಂಚಿಕೆ ಮಾಡಿದ್ದಾರೆ. ಈ ರೀತಿ ಸಾವಿರಾರು ನಿವೇಶನವನ್ನು ಕಾನೂನುಬಾಹಿರವಾಗಿ ಇವರು ನೀಡಿದ್ದಾರೆ. ಅಕ್ರಮವಾಗಿ ನಿವೇಶನ ಹಂಚಿಕೆ, ಸಾವಿರಾರು ನಿವೇಶನಗಳನ್ನು ಬೇಕಾಬಿಟ್ಟಿ ಹಂಚಿಕೆ ಮಾಡಿದ್ದಾರೆ.

"ಈ ಹಗರಣವನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದೆ, ಶುಕ್ರವಾರ ಪ್ರತಿಪಕ್ಷದ ನಾಯಕ ಅಶೋಕ್‌ ಸೇರಿ ಬಿಜೆಪಿ ಶಾಸಕರು, ನಾಯಕರನ್ನೊಳಗೊಂಡ ಬೃಹತ್​ ಪ್ರತಿಭಟನಾ ಸಭೆ ಆಯೋಜನೆ ಮಾಡಿದ್ದೇವೆ. ಬಡವರಿಗೆ ಸಿಗಬೇಕಾದ ನಿವೇಶನ ಅವರಿಗೇ ಸಿಗಬೇಕು, ಪ್ರಭಾವಿಗಳಿಗೆ ಹಂಚಿಕೆ ಮಾಡಿರುವುದನ್ನು ವಾಪಸ್ ಪಡೆಯಬೇಕು. ಈ ಕೇಸ್ ತನಿಖೆಗೆ ಎಸ್ಐಟಿ ರಚಿಸಬೇಡಿ, ಸಿಎಂ, ಸಚಿವರ ವಿರುದ್ಧ ಆರೋಪವಿದೆ, ನೀವು ಪ್ರಾಮಾಣಿಕರಾಗಿದ್ದರೆ ಸಿಬಿಐ ತನಿಖೆಗೆ ಕೊಡಿ' ಎಂದು ವಿಜಯೇಂದ್ರ ಆಗ್ರಹಿಸಿದರು.

"ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಭಾಷಣ ಮಾಡುವ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಬಡವರು, ಎಸ್ಸಿಎಸ್ಟಿಗಳಿಗೆ ನೀಡಬೇಕಾದ ನಿವೇಶನಗಳನ್ನು ತಮಗೆ ಬೇಕಾದಂತೆ ಕಾನೂನು ಸಡಿಲಿಸಿರುವುದು ಅಕ್ಷಮ್ಯ ಅಪರಾಧ. ಕೂಡಲೇ ಸಿಎಂ ರಾಜೀನಾಮೆ ನೀಡಬೇಕು. ಪ್ರಕರಣ ಸಿಬಿಐಗೆ ವಹಿಸಬೇಕು. ಮೈಸೂರಿನಲ್ಲಿ ಪ್ರತಿಭಟನೆ ನಂತರ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಾಗುತ್ತದೆ" ಎಂದರು.

"ಖಾಸಗಿ ದೂರು ಸಲ್ಲಿಕೆ, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸೇರಿದಂತೆ ಮುಂದಿನ ಹೋರಾಟದ ಬಗ್ಗೆ ನಾಯಕರೆಲ್ಲ ಸೇರಿ ಚರ್ಚಿಸಿ ನಿರ್ಧಾರ ಮಾಡುತ್ತೇವೆ. ಆದರೆ ಯಾರ ಅವಧಿಯಲ್ಲಿ ಅಕ್ರಮವಾದರೂ ಅಕ್ರಮ ಅಕ್ರಮವೇ. ಹಾಗಾಗಿ ಸಮಗ್ರ ತನಿಖೆಯಾಗಬೇಕು, ಈ ಹಗರಣ ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ" ಎಂದು ಹೇಳಿದರು.

ಇದನ್ನೂ ಓದಿ:ಮುಡಾ ಹಗರಣ ಪ್ರಕರಣ: ಸಿಎಂ ರಾಜೀನಾಮೆ ನೀಡಬೇಕು, ನ್ಯಾಯಾಂಗ ತನಿಖೆಯಾಗಬೇಕು: ಸಿಟಿ ರವಿ ಆಗ್ರಹ - C T Ravi

ABOUT THE AUTHOR

...view details