ಬೆಳಗಾವಿ:ಕಿತ್ತೂರು ಉತ್ಸವ ನಿಮಿತ್ತ ಇಲ್ಲಿನ ಕೋಟೆ ಆವರಣದಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಸ್ತು ಪ್ರದರ್ಶನ ವೀಕ್ಷಿಸಿ ಖುಷಿಪಟ್ಟರು.
ಜಿಲ್ಲಾ ಕೈಗಾರಿಕಾ ಇಲಾಖೆಯಿಂದ ಹಮ್ಮಿಕೊಂಡಿರುವ ವಸ್ತು ಪ್ರದರ್ಶನದಲ್ಲಿ 140 ವಸ್ತು ಮಳಿಗೆಗಳನ್ನು ತೆರೆಯಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳು, ಹೊಸ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರು ಪಡೆದುಕೊಂಡರು. ಜೊತೆಗೆ, ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿದರು. ಖಾದಿ ಉತ್ಪನ್ನಗಳು, ದೈನಂದಿನ ಬಳಕೆ ವಸ್ತುಗಳು, ಅಲಂಕಾರಿಕ ಸಾಮಗ್ರಿ, ಸಿದ್ಧ ಉಡುಪುಗಳು, ಮಕ್ಕಳ ಆಟಿಕೆಗಳು ಸೇರಿದಂತೆ ವಿವಿಧ ವಸ್ತುಗಳನ್ನು ಪ್ರದರ್ಶಿಸಲಾಗಿತ್ತು.
ಜಮೀನು ಉಳುಮೆ ಮಾಡಲು ರೈತರಿಗೆ ಅಗತ್ಯವಿರುವ ನೇಗಿಲು, ಕುಂಟೆ, ಬಿತ್ತುವ ಕೂರಿಗೆ, ರೂಟರ್ ಸೇರಿ ಹಲವು ಬಗೆಯ ಸಲಕರಣೆಗಳನ್ನು ಖರೀಸಲು ರೈತ ಸಂಪರ್ಕ ಕೇಂದ್ರದಿಂದ ಸಬ್ಸಿಡಿ ಇರುವ ಬಗ್ಗೆ ತಿಳಿಸಲಾಯಿತು. ಮಹಿಳೆಯರ ಅಲಂಕಾರಿಕ ವಸ್ತುಗಳ ಮಳಿಗೆಗಳ ಜೊತೆಗೆ ಮನೆ ಅಲಂಕಾರಿಕ ವಸ್ತುಗಳು, ಸಾವಯವ ಎಣ್ಣೆ, ಖಾದಿ ಬಟ್ಟೆಗಳು, ಸುವಾಸನೆಭರಿತ ಅಗರಬತ್ತಿಗಳು, ಮಣ್ಣಿನಿಂದ ತಯಾರಿಸಿದ ವಿವಿಧ ವಸ್ತುಗಳು ಮಳಿಗೆಗಳಲ್ಲಿ ಕಂಡುಬಂದವು. ಒಂದಿಷ್ಟು ಜನರು ವಸ್ತುಗಳನ್ನು ಕೇವಲ ನೋಡಿ ಮುಂದೆ ಸಾಗಿದರೆ, ಮತ್ತೊಂದಿಷ್ಟು ಮಂದಿ ಖರೀದಿಸಿದರು.
ಖಾದ್ಯಪ್ರಿಯರಿಗಾಗಿ ಈ ಬಾರಿ ವಿಶೇಷವಾಗಿ ತಿನಿಸುಕಟ್ಟೆಯನ್ನು ಸಹ ಮಳಿಗೆಗಳ ಪಕ್ಕದಲ್ಲೇ ನಿರ್ಮಿಸಲಾಗಿತ್ತು. ಪಾನಿಪುರಿ, ಪಾವ್ ಬಾಜಿ ಜೊತೆ ಜೊತೆಗೆ ಹತ್ತು ಹಲವು ಬಗೆಯ ವಿಶೇಷ ಖಾದ್ಯಗಳನ್ನು ಜನರು ಸವಿದರು.