ಬೆಂಗಳೂರು : ಸ್ವಚ್ಛ ಆಡಳಿತದ ಭರವಸೆಯೊಂದಿಗೆ ಅಧಿಕಾರ ಪಡೆದಿದ್ದ ಆಮ್ ಆದ್ಮಿ ಪಾರ್ಟಿಯ ಬಣ್ಣ ದೆಹಲಿಯ ಮತದಾರರ ಮುಂದೆ ಬಯಲಾಗಿದೆ. ದೆಹಲಿಯ ಪ್ರಬುದ್ಧ ಮತದಾರರು ಮತ್ತೊಮ್ಮೆ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ತಿಳಿಸಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿದ ಬೆನ್ನಲ್ಲೇ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದ ಮುಂಭಾಗದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ವಿಜಯೋತ್ಸವದಲ್ಲಿ ಭಾಗಿಯಾದ ಬಳಿಕ ಅವರು ಮಾತನಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿದರು (ETV Bharat) ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕ ಅಧಿಕಾರ ಪಡೆದಿದ್ದ ಅರವಿಂದ್ ಕೇಜ್ರಿವಾಲ್ ಅವರ ಮುಖವಾಡ ಕಳಚಿ ಬಿದ್ದಿದೆ. ಲಿಕ್ಕರ್ ಹಗರಣ, ಶೀಶ್ ಮಹಲ್ ಹಗರಣಗಳಲ್ಲಿ ಆಮ್ ಆದ್ಮಿಯ ಸಚಿವರುಗಳು ಜೈಲಿಗೆ ಹೋದರು. ಸ್ವತಃ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲಿಗೆ ಹೋದರು. ಅಭಿವೃದ್ಧಿಯ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ದೆಹಲಿಯ ಮತದಾರರು ಬಿಜೆಪಿಗೆ ಆಶೀರ್ವದಿಸಿದ್ದಾರೆ ಎಂದು ತಿಳಿಸಿದರು.
ಸಂಭ್ರಮಿಸಿದ ಬಿಜೆಪಿ ಮುಖಂಡರು (ETV Bharat) ಕಾಂಗ್ರೆಸ್ ಪಕ್ಷ ಸತತ ಮೂರನೇ ಬಾರಿಗೆ ಗೆಲುವಿನ ಖಾತೆ ತೆರೆಯಲು ವಿಫಲವಾಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ. ನರೇಂದ್ರ ಮೋದಿಯವರಿಗೆ ಪರ್ಯಾಯ ನಾಯಕತ್ವ ಕೊಡುತ್ತೇವೆ ಎನ್ನುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮುಖಭಂಗವಾಗಿದೆ. ಹರಿಯಾಣ, ಮಹಾರಾಷ್ಟ್ರದಲ್ಲಿಯೂ ಮುಖಭಂಗವಾಗಿತ್ತು. ಇದೀಗ ದೆಹಲಿ ಮತದಾರರೂ ಸಹ ಕಾಂಗ್ರೆಸ್ ಪಕ್ಷದ ಸ್ಥಾನ ಏನೆಂದು ತೋರಿಸಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿ ಮುಖಂಡರು (ETV Bharat) ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಕೇವಲ ತಾತ್ಕಾಲಿಕ. ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಕಂಪನಿಗಳಿಂದ ಜನರು ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನ ನೋಡುತ್ತಿದ್ದೇವೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಗ್ಯಾರಂಟಿಗಳ ಪಾಡೇನು ಎಂಬುದಕ್ಕೆ ಇದು ಸಾಕ್ಷಿ :ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, "ರಾಜ್ಯದ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು ತಮ್ಮನ್ನ ತಾವು ಗ್ಯಾರಂಟಿಗಳ ಬ್ರ್ಯಾಂಡ್ ಅಂಬಾಸಿಡರ್ ಎನ್ನುತ್ತಿದ್ದರು. ಈಗ ಯಾವ ದೇಶಕ್ಕೆ ಹೋಗುತ್ತಾರೋ ಗೊತ್ತಿಲ್ಲ. ಗ್ಯಾರಂಟಿಗಳಿಂದ ಅರವಿಂದ್ ಕೇಜ್ರಿವಾಲ್ ಅವರನ್ನೇ ಗೆಲ್ಲಿಸಲು ಆಗಲಿಲ್ಲ. ಗ್ಯಾರಂಟಿಗಳ ಪಾಡೇನು ಎಂಬುದಕ್ಕೆ ಇದೇ ಸಾಕ್ಷಿ" ಎಂದರು.
ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ ಮುಖಂಡರು (ETV Bharat) ಖಾತೆ ತೆರೆಯಲು ವಿಫಲವಾದ ಕಾಂಗ್ರೆಸ್ ಕ್ಯಾತೆ ತೆಗೆಯುವುದನ್ನ ನಿಲ್ಲಿಸಲಿ : ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, "ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ ಅಧಿಕಾರ ಪಡೆದ ಕೇಜ್ರಿವಾಲ್ ಅವರೇ ಭ್ರಷ್ಟಾಚಾರದಲ್ಲಿ ಸಿಲುಕಿ ಅಧಿಕಾರ ಕಳೆದುಕೊಂಡಿದ್ದಾರೆ. ಭಾರತೀಯ ಜನತಾ ಪಕ್ಷ ದೇಶದಲ್ಲಿ ಎಲ್ಲಿಯೂ ಭ್ರಷ್ಟಾಚಾರದ ಆರೋಪ ಹೊತ್ತಿಲ್ಲ. ಕರ್ನಾಟಕದಲ್ಲಿ ಬಿಜೆಪಿಯ ವಿರುದ್ಧ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ನವರು ಪುರಾವೆಯೇ ಇರದೆ ನಮ್ಮ ವಿರುದ್ಧ ಭ್ರಷ್ಟಾಚಾರದ ವಿವಿಧ ಆರೋಪಗಳನ್ನ ಮಾಡಿದರು. ಅದಕ್ಕೆ ಇಂದು ಕಾಂಗ್ರೆಸ್ಗೆ ಶೂನ್ಯ ಸಂಪಾದನೆ ಸಿಕ್ಕಿದೆ ಎಂದಿದ್ದಾರೆ.
ಪಟಾಕಿ ಸಿಡಿಸಿ ಸಂಭ್ರಮಿಸಿದ ಬಿಜೆಪಿ ಮುಖಂಡರು (ETV Bharat) ಕಾಂಗ್ರೆಸ್ ಖಾತೆ ತೆರೆಯದೇ ಇದ್ದರೂ ಸಹ ಕ್ಯಾತೆ ತೆಗೆಯುವುದನ್ನ ನಿಲ್ಲಿಸಲ್ಲ. ಈ ಫಲಿತಾಂಶವನ್ನು ಎಲ್ಲಾ ಸಮೀಕ್ಷೆಗಳೂ ಮೊದಲೇ ಹೇಳಿದ್ದವು. ಆದ್ದರಿಂದ, ಕಾಂಗ್ರೆಸ್ನವರು ಇನ್ನಾದರೂ ಇವಿಎಂಗಳ ವಿರುದ್ಧ ಮಾತನಾಡುವುದನ್ನ ನಿಲ್ಲಿಸಬೇಕು. ಇನ್ನು ಮುಂದೆಯೂ ಇವಿಎಂಗಳ ಕುರಿತು ಮಾತನಾಡಿದರೆ ದೇಶದಲ್ಲಿ ಅಪಮಾನಕ್ಕೀಡಾಗುತ್ತೀರಿ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಬರ್ಮುಡಾ ಬಿಟ್ಟರೆ ಇನ್ಯಾವ ವೇಷವೂ ಉಳಿದಿಲ್ಲ. ದಯವಿಟ್ಟು ರಾಜಕೀಯ ನಿವೃತ್ತಿ ಪಡೆದು ಉಳಿಯುವುದು ಒಳಿತು ಎಂದರು.
ಈ ಸಂದರ್ಭದಲ್ಲಿ ಬಿಜೆಪಿಯ ಮಾಜಿ ಸಚಿವರು ಹಾಗೂ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು, ಬೆಂಗಳೂರು ನಗರ ಜಿಲ್ಲಾಧ್ಯಕ್ಷರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡು ಪರಸ್ಪರ ಸಿಹಿ ತಿನ್ನಿಸಿ, ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.
ಇದನ್ನೂ ಓದಿ :ಕೇಜ್ರಿವಾಲ್ಗಿದ್ದ ಹಣದ ದುರಾಸೆಯೇ ಎಎಪಿ ಹಿನ್ನಡೆಗೆ ಕಾರಣ; ಅಣ್ಣಾ ಹಜಾರೆ ಆಕ್ರೋಶ - DELHI ELECTION 2025