ಕರ್ನಾಟಕ

karnataka

ಪರಿಷತ್​ನಲ್ಲಿ ಪ್ರತಿಧ್ವನಿಸಿದ 'ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸು': ಸದನದ ಬಾವಿಗಿಳಿದು ಬಿಜೆಪಿ ಧರಣಿ

By ETV Bharat Karnataka Team

Published : Feb 19, 2024, 1:46 PM IST

Updated : Feb 19, 2024, 2:58 PM IST

ಸರ್ಕಾರಿ ಹಾಸ್ಟೆಲ್ ಮೇಲಿನ 'ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು' ವಿಷಯ ಪರಿಷತ್​​ನಲ್ಲಿ ಸದ್ದು ಮಾಡಿತು. ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಆಕ್ರೋಶ ಹೊರ ಹಾಕಿದರು.

Etv Bharat
Etv Bharat

ಬೆಂಗಳೂರು: 'ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ' ಎನ್ನುವ ಘೋಷ ವಾಕ್ಯವನ್ನು 'ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು' ಎಂದು ಮಾರ್ಪಾಡು ಮಾಡಿರುವ ವಿಷಯ ವಿಧಾನ ಪರಿಷತ್​​ನಲ್ಲಿ ಪ್ರತಿಧ್ವನಿಸಿತು. ಕೂಡಲೇ ಸರ್ಕಾರ ಈ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಮತ್ತು ಸರ್ಕಾರದ ಉತ್ತರ ಖಂಡಿಸಿ ಸದನದ ಬಾವಿಗಿಳಿದು ಬಿಜೆಪಿ ಸದಸ್ಯರು ಧರಣಿ ನಡೆಸಿದರು.

ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎನ್ನುವ ಘೋಷ ವಾಕ್ಯವನ್ನು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು ಎನ್ನುವ ಮಾರ್ಪಾಡು ಕುರಿತು ಬಿಜೆಪಿ‌ ಸಚೇತಕ ರವಿಕುಮಾರ್ ಪ್ರಸ್ತಾಪಿಸಿದರು. ಕುವೆಂಪು ಅವರ ಸಾಲಿನ ಪ್ರೇರೇಪಣೆ ಪಡೆದು ಈ ಸಾಲು ಹಾಕಲಾಗಿದೆ. ಇದನ್ನ ಮಾರ್ಪಾಡು ಮಾಡಿ ಕುವೆಂಪು ಅವರಿಗೆ ಅವಮಾನ ಮಾಡಲಾಗಿದೆ ಎಂದರು.

ಈ ವೇಳೆ ಶೂನ್ಯವೇಳೆಯಲ್ಲಿ ಚರ್ಚೆಗೆ ಅವಕಾಶ ಇಲ್ಲ ಎಂದ ಸಭಾನಾಯಕ ಬೋಸರಾಜ್, ಸಂಬಂಧಿಸಿದ ಸಚಿವರಿಂದ ಉತ್ತರ ಕೊಡಿಸುವ ಭರವಸೆ ನೀಡಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಭಾಪತಿ ಪೀಠದಲ್ಲಿದ್ದ ತೇಜಸ್ವಿನಿಗೌಡ, ಚರ್ಚೆಗೆ ಅವಕಾಶವಿಲ್ಲ, ಬೇರೆ ರೂಪದಲ್ಲಿ ತರುವಂತೆ ಮನವಿ ಮಾಡಿದರು. ಸಭಾಪತಿ ಪೀಠದ ಸೂಚನೆ ಒಪ್ಪದ ಬಿಜೆಪಿ ಸಚೇತಕ ರವಿಕುಮಾರ್, ಕೂಡಲೇ ಸರ್ಕಾರ ಈ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಸರ್ಕಾರ ಒಪ್ಪದ ಕಾರಣದಿಂದಾಗಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಬೇರೆ ರೂಪದಲ್ಲಿ ನೋಟಿಸ್ ಕೊಡಿ ಎಂದರೆ ನಾವು ಈಗಾಗಲೇ ಬಾವಿಯಲ್ಲಿದ್ದೇವೆ, ಈಗ ಏನು ಮಾಡಬೇಕು, ಬಾವಿಯಲ್ಲೇ ಇರಬೇಕಾ? ಬಾವಿಯಲ್ಲಿ ಇರುವವರನ್ನು ಸಮಾಧಾನ ಮಾಡದೇ ಹೊರಬನ್ನಿ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ ಪಾಯಿಂಟ್ ಆಫ್ ಆರ್ಡರ್ ಎತ್ತಿದರು. ಶೂನ್ಯವೇಳೆಯಲ್ಲಿ ಚರ್ಚೆಗೆ ಅವಕಾಶವಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ತೇಜಸ್ವಿನಿಗೌಡ ಚರ್ಚೆಗೆ ಅವಕಾಶ ನೀಡಲ್ಲ ಹಾಗಾಗಿ ಪಾಯಿಂಟ್ ಆಫ್ ಆರ್ಡರ್ ಪ್ರಶ್ನೆ ಬರಲ್ಲ ಎಂದರು. ನಿಯಮದ ಪ್ರಕಾರ ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶವಿಲ್ಲ, ಬೇರೆ ರೂಪದಲ್ಲಿ ನೋಟಿಸ್ ಕೊಡಿ ಚರ್ಚೆಗೆ ಅವಕಾಶ ನೀಡಲಾಗುತ್ತದೆ, ಧರಣಿ ನಿಲ್ಲಿಸಿ ಎಂದು ಮನವಿ ಮಾಡಿದರು.

ಆದರೆ ಪಟ್ಟು ಸಡಿಲಿಸದ ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿದರು. ಈ ಸಮಸ್ಯೆ ಪರಿಹಾರಕ್ಕೆ ಸಚಿವರನ್ನ ಕರೆಸಿ ಉತ್ತರ ಕೊಡಿಸಿ ಎಂದು ಆಗ್ರಹಿಸಿದರು. ಇದಕ್ಕೆ ಛೇಡಿಸಿದ ಕಾಂಗ್ರೆಸ್ ಸದಸ್ಯರು, ಹೇಡಿಗಳಂತೆ ವರ್ತಿಸಬೇಡಿ ಚರ್ಚೆಗೆ ಬನ್ನಿ ಎಂದು ಸವಾಲೆಸೆದರು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ ನಡೆಯಿತು, ವಾಗ್ವಾದ ನಡೆಯಿತು, ಕಲಾಪ ಸಹಜ ಸ್ಥಿತಿಗೆ ಬಾರದ ಹಿನ್ನೆಲೆಯಲ್ಲಿ ಸಭಾಪತಿ ಪೀಠದಲ್ಲಿದ್ದ ತೇಜಸ್ವಿನಿಗೌಡ ಕಲಾಪವನ್ನು ಐದು ನಿಮಿಷಗಳ ಕಾಲ ಮುಂದೂಡಿಕೆ ಮಾಡಿದರು.

ಮತ್ತೆ ಗದ್ದಲ:ಮುಂದೂಡಿಕೆಯಾಗಿದ್ದ ಪರಿಷತ್ ಕಲಾಪ ಪುನರಾರಂಭಗೊಳ್ಳುತ್ತಿದ್ದಂತೆ ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿದರು. ಸಭಾನಾಯಕ ಬೋಸರಾಜ್ ಮಾತನಾಡಿ, ಎರಡು ದಿನದಲ್ಲಿ ಉತ್ತರ ಕೊಡಿಸುವ ಹೇಳಿಕೆ ನೀಡಿದರು. ಇದನ್ನು ಒಪ್ಪದ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಇದು ಗಂಭೀರ ವಿಷಯ ಹಾಗಾಗಿ ಶೂನ್ಯವೇಳೆಯಲ್ಲಿ ತಂದಿದ್ದೇವೆ ಎಂದರು. ಈ ವೇಳೆ ಚರ್ಚೆಗೆ ಅವಕಾಶವಿಲ್ಲ ಎಂದ ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಆಗ ಸದನ ಸಹಜ ಸ್ಥಿತಿಗೆ ತರಲು ಯತ್ನಿಸಿದ ಸಭಾಪತಿ ಬಸವರಾಜ ಹೊರಟ್ಟಿ, ನಿಯಮದಲ್ಲಿ ಚರ್ಚೆಗೆ ಅವಕಾಶ ಇದೆಯಾ? ನೀವೇ ಹೇಳಿ? ಇಲ್ಲ ಎಂದ ಮೇಲೆ ಚರ್ಚೆ ಬಿಡಿ ಎಂದರು. ಆದರೂ, ಬಿಜೆಪಿ ಸದಸ್ಯರು ಗದ್ದಲ ನಿಲ್ಲಿಸದ ಕಾರಣ ನಾಳೆ ಉತ್ತರ ಕೊಡಿಸುತ್ತೀರಾ ಸಭಾನಾಯಕರೇ? ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಭಾನಾಯಕ ಬೋಸರಾಜ್, ಎರಡು ದಿನದ ಕಾಲಾವಕಾಶವಿದೆ, ಅಷ್ಟರಲ್ಲಿ ಕೊಡಿಸುತ್ತೇನೆ ಎಂದು ತಿಳಿಸಿದರು.

ಇದನ್ನು ಒಪ್ಪದ ಕೋಟಾ ಶ್ರೀನಿವಾಸ ಪೂಜಾರಿ, ಸಮಾಜ ಕಲ್ಯಾಣ ಸಚಿವರದ್ದು ಇಂದು ಕಡ್ಡಾಯ ಉಪಸ್ಥಿತಿ ಇತ್ತು ಯಾವುದೋ ಕಾರಣಕ್ಕೆ ಹೋಗಿರಬಹುದು ಹಾಗಾಗಿ ಕರೆಸಿ ಉತ್ತರ ಕೊಡಿಸಿ ಎಂದು ಕೇಳಿದ್ದೇವೆ ಅಷ್ಟೆ. ಈಗ ನಾವು ಬಾವಿಯಲ್ಲಿದ್ದೇವೆ, ಭೋಜನ ವಿರಾಮದ ನಂತರ ಉತ್ತರ ಕೊಡಿಸುವ ಭರವಸೆ ಕೊಡಿಸಿ ಎಂದು ಕೋರಿದರು. ಬಿಜೆಪಿ ಬೇಡಿಕೆಗೆ ಸಚಿವ ದಿನೇಶ್ ಗುಂಡೂರಾವ್ ಆಕ್ಷೇಪ ವ್ಯಕ್ತಪಡಿಸಿದರು, ಪ್ರಶ್ನೆ ಅವರೇ ಕೇಳಿ, ಅವರೇ ಬಾವಿಗೆ ಬಂದು, ಅವರೇ ಸಚಿವರು ಇಂತಹ ಸಮಯ ಬಂದು ಉತ್ತರ ಕೊಡಿ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.

ಆಗ ಸಭಾಪತಿ ಬಸವರಾಜ ಹೊರಟ್ಟಿ ಗದ್ದಲ ತಿಳಿಗೊಳಿಸಲು ಪ್ರಯತ್ನಿಸಿದರೂ ಬಿಜೆಪಿ ಕಾಂಗ್ರೆಸ್ ಸದಸ್ಯರು ಮಾತಿಗೆ ಮಾತು ಮುಂದುವರೆಸಿದರು. ಸದನ ಸಹಜ ಸ್ಥಿತಿಗೆ ಬಾರದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ ಮಾಡಿದರು.

ಇದನ್ನೂ ಓದಿ:ಮಕ್ಕಳ ಮನಸಲ್ಲೂ ಸಂಘರ್ಷ ಉಂಟು ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲಾಗುತ್ತಿದೆ: ಬಸವರಾಜ ಬೊಮ್ಮಾಯಿ ಕಿಡಿ

Last Updated : Feb 19, 2024, 2:58 PM IST

ABOUT THE AUTHOR

...view details