ಕರ್ನಾಟಕ

karnataka

ಜೇಡಿಮಣ್ಣು, ಹಿಟ್ಟು ಅಥವಾ ಅರಿಶಿಣದಿಂದ ಪುಟ್ಟ ಗಣೇಶನ ತಯಾರಿಸಿ ಮನೆಯಲ್ಲೇ ನಿಮಜ್ಜನ ಮಾಡಿ: ಪರಿಸರ ಅಧಿಕಾರಿ ಕರೆ - Eco friendly Ganesh Festival

By ETV Bharat Karnataka Team

Published : Aug 31, 2024, 6:24 PM IST

ಜೇಡಿಮಣ್ಣು, ಹಿಟ್ಟು ಅಥವಾ ಅರಿಶಿಣದಿಂದ ಪುಟ್ಟ ಗಣೇಶನ ಮೂರ್ತಿ ತಯಾರಿಸಬೇಕು. ನಿಮ್ಮ ಸಂಪ್ರದಾಯದಂತೆ ಗಣಪನಿಗೆ ಪೂಜಿಸಿ, ಬಳಿಕ ಮನೆಯಲ್ಲಿ‌ ನಿಮಜ್ಜನ ಮಾಡಬೇಕು ಎಂದು ಪರಿಸರ ಅಧಿಕಾರಿ ಸಲಹೆ ನೀಡಿದರು.

ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಅಧಿಕಾರಿ ಶೋಭಾ ಪೋಳ ಕರೆ
ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಅಧಿಕಾರಿ ಶೋಭಾ ಪೋಳ ಕರೆ (ETV Bharat)

ಪರಿಸರ ಅಧಿಕಾರಿ ಶೋಭಾ ಪೋಳ (ETV Bharat)

ಬೆಳಗಾವಿ: ಗಣೇಶೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಅದ್ಧೂರಿ ಹಬ್ಬದ ಆಚರಣೆಗೆ ಸಕಲೆ ಸಿದ್ಧತೆ ಕೂಡ ನಡೆದಿದೆ. ಇನ್ನು ಗಣೇಶ ಮೂರ್ತಿಗಳಿಗೆ ಮೂರ್ತಿಕಾರರು ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಬೆಳಗಾವಿಯ ಪರಿಸರ ಮಂಡಳಿ ಅಧಿಕಾರಿ ಶೋಭಾ ಪೋಳ ಅವರು ಪರಿಸರ ಸ್ನೇಹಿ ಗಣೇಶ ಹಬ್ಬ ಯಾವ ರೀತಿ ಆಚರಿಸಬೇಕು..? ಗಣೇಶ ಹಬ್ಬದಲ್ಲಿ ಯಾವ ನಿಯಮಗಳನ್ನು ಪಾಲಿಸಬೇಕೆಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು, ಎರಡು ಕೈಯಲ್ಲಿ ಹಿಡಿಯುವಷ್ಟು ಮಣ್ಣಿನಲ್ಲಿ ಗಣೇಶ ಮೂರ್ತಿ ತಯಾರಿಸಿ, ಪೂಜಿಸುವಂತೆ ಶಾಸ್ತ್ರವು ಹೇಳುತ್ತದೆ. ಆದರೆ, ಇಂದು ನಾವೆಲ್ಲಾ ದೊಡ್ಡ ದೊಡ್ಡ ಪಿಓಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಪೈಪೋಟಿಗೆ ಇಳಿದಿದ್ದೇವೆ. ಇಂಥ ಪಿಓಪಿ ಗಣೇಶ ಮೂರ್ತಿಗಳನ್ನು ನದಿ, ಕೆರೆ, ಭಾವಿಗಳಲ್ಲಿ ನಿಮಜ್ಜನ ಮಾಡಿ ಜಲ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದೇವೆ ಎಂದರು.

ಪಿಓಪಿ ಗಣೇಶ ಮೂರ್ತಿಗಳನ್ನು ಯಾವುದೇ ಜಲಮೂಲಗಳಲ್ಲಿ ನಿಮಜ್ಜನ ಮಾಡಬಾರದು ಎಂದು ಪರಿಸರ ಮಂಡಳಿ ಆದೇಶ ಹೊರಡಿಸಿದೆ. ಈ ಆದೇಶ ಪಾಲನೆಯಿಂದ ಜಲ ಮಾಲಿನ್ಯ ತಡೆಗಟ್ಟಬಹುದಾಗಿದೆ. ಜೇಡಿಮಣ್ಣು, ಹಿಟ್ಟು ಅಥವಾ ಅರಿಶಿಣದಿಂದ ಪುಟ್ಟ ಗಣೇಶನ ಮೂರ್ತಿ ತಯಾರಿಸಬೇಕು. ನಿಮ್ಮ ಸಂಪ್ರದಾಯದಂತೆ ಗಣಪನಿಗೆ ಪೂಜಿಸಿ, ಬಳಿಕ ಮನೆಯಲ್ಲಿ‌ ನಿಮಜ್ಜನ ಮಾಡಬೇಕು ಎಂದು ಸಲಹೆ ನೀಡಿದರು.

ಪಟಾಕಿಗೆ ನಿರ್ಬಂಧ: ರಾಸಾಯನಿಕಯುಕ್ತ ಪಟಾಕಿಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು. ಮಾರುಕಟ್ಟೆಗಳಲ್ಲಿ ಲಭ್ಯವಿರುವ ಹಸಿರು ಪಟಾಕಿಗಳನ್ನೇ ಬಳಸಬೇಕು. ಪಟಾಕಿ ಬಾಕ್ಸ್ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಹಸಿರು ಪಟಾಕಿ ಗುರುತಿಸಬಹುದು. ಹಾಗಾಗಿ, ಪ್ರತಿಯೊಬ್ಬರೂ ಹಸಿರು ಪಟಾಕಿಗಳನ್ನೇ ಹಾರಿಸಬೇಕು. ಇದರಿಂದ ವಾಯು ಮತ್ತು ಶಬ್ದ ಮಾಲಿನ್ಯ ತಡೆಗಟ್ಟಬಹುದು. ಇನ್ನು ರಾತ್ರಿ 8 ಗಂಟೆಯಿಂದ 10 ಗಂಟೆಯೊಳಗೆ ಮಾತ್ರ ಪಟಾಕಿ ಹೊಡೆಯಲು ಸಮಯ ನಿಗದಿಪಡಿಸಲಾಗಿದೆ. ಈ ನಿರ್ದೇಶನಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಕೋರಿದರು.

ಹಬ್ಬಗಳ ಆಚರಣೆ ವೇಳೆ ಏಕ ಬಳಕೆ ಪ್ಲಾಸ್ಟಿಕ್ ಹೆಚ್ಚಾಗಿ ಬಳಸುತ್ತಿರೋದರಿಂದ ತ್ಯಾಜ್ಯದ ಉತ್ಪಾದನೆ ಪ್ರಮಾಣ ಹೆಚ್ಚಾಗಿದೆ. ಅಲ್ಲದೇ ಪ್ಲಾಸ್ಟಿಕ್ ತ್ಯಾಜ್ಯ ಸರಿಯಾಗಿ ವಿಲೇವಾರಿ ಆಗದೇ ಚರಂಡಿಯಲ್ಲಿ ಬೀಸಾಕುತ್ತಿದ್ದು, ನೀರು ಸರಾಗವಾಗಿ ಹರಿಯಲು ಸಮಸ್ಯೆಯಾಗುತ್ತಿದೆ. ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಏಕ ಬಳಕೆಗಿಂತ ಮರು ಬಳಕೆಗೆ ಆದ್ಯತೆ ಕೊಟ್ಟಿದ್ದಾರೆ. ಹಾಗಾಗಿ, ಹಿಂದಿನ ಹಳೆಯ ಸಂಸ್ಕೃತಿಯಲ್ಲೇ ನಾವು ಜೀವಿಸಬೇಕು. ಮಡಿಕೆ, ಕುಡಿಕೆ, ಸ್ಟೀಲ್, ಹಿತ್ತಾಳೆ ವಸ್ತುಗಳನ್ನು ಬಳಕೆ ಮಾಡುವ ಅವಶ್ಯಕತೆಯಿದೆ ಎಂದು ಸಾರ್ವಜನಿಕರಿಗೆ ಶೋಭಾ ಪೋಳ ಕಿವಿಮಾತು ಹೇಳಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗಣೇಶ ಪ್ರತಿಷ್ಠಾಪನೆಗೆ ಮಾರ್ಗಸೂಚಿ ಪ್ರಕಟ: ಈ ನಿಯಮಗಳ ಪಾಲನೆ ಕಡ್ಡಾಯ - guidlines for Ganesh Festival

ABOUT THE AUTHOR

...view details