ಕರ್ನಾಟಕ

karnataka

ETV Bharat / state

ಕಾವೇರಿ ನೀರಿಗಾಗಿ ಮಧ್ಯವರ್ತಿಗಳ ಮೊರೆ ಹೋಗದೇ ನೇರವಾಗಿ ಅರ್ಜಿ ಸಲ್ಲಿಸಿ: ರಾಮ್‌ ಪ್ರಸಾತ್‌ ಮನೋಹರ್‌

ಜಲಮಂಡಳಿ ಹೆಸರು ದುರಪಯೋಗಪಡಿಸಿಕೊಳ್ಳುವ ಹಾಗೂ ನಿಯಮಬಾಹಿರವಾಗಿ ಹೆಚ್ಚಿನ ಹಣ ಕೇಳುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ ಎಚ್ಚರಿಕೆ ನೀಡಿದ್ದಾರೆ.

ರಾಮ್‌ ಪ್ರಸಾತ್‌ ಮನೋಹರ್‌
ರಾಮ್‌ ಪ್ರಸಾತ್‌ ಮನೋಹರ್‌ (ETV Bharat)

By ETV Bharat Karnataka Team

Published : 5 hours ago

ಬೆಂಗಳೂರು:ಕಾವೇರಿ ನೀರಿನ ಸಂಪರ್ಕ ಪಡೆಯಲು ಮಧ್ಯವರ್ತಿಗಳ ಮೊರೆ ಹೋಗದೇ ನೇರವಾಗಿ ಬೆಂಗಳೂರು ಜಲಮಂಡಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಜಲಮಂಡಳಿ ಹೆಸರು ದುರುಪಯೋಗಪಡಿಸಿಕೊಳ್ಳುವ ಹಾಗೂ ನಿಯಮಬಾಹಿರವಾಗಿ ಹೆಚ್ಚಿನ ಹಣ ಕೇಳುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ಡಾ ರಾಮ್‌ ಪ್ರಸಾತ್‌ ಮನೋಹರ್‌ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾವೇರಿ ನೀರಿನ ಸಂಪರ್ಕ ಪಡೆಯುವ ಪ್ರಕ್ರಿಯೆ ಬಹಳ ಸುಲಭವಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದಲ್ಲಿ ಸಂಬಂಧಪಟ್ಟ ವಿಭಾಗದ ಅಧಿಕಾರಿಗಳು ಮುಂದಿನ ಕ್ರಮವಹಿಸಲಿದ್ದಾರೆ. ಹೊಸ ಸಂಪರ್ಕ ಪಡೆಯಲು ಮನೆಗಳಿಗೆ, ಅಪಾರ್ಟ್‌ಮೆಂಟ್‌ಗಳಿಗೆ, ವಾಣಿಜ್ಯ ಕಟ್ಟಡಗಳಿಗೆ ನಿಯಮಗಳ ಪ್ರಕಾರ ಹಣ ನಿಗದಿಪಡಿಸಿ ಡಿಮ್ಯಾಂಡ್‌ ನೋಟಿಸ್​ ನೀಡಲಾಗುವುದು. ಡಿಮ್ಯಾಂಡ್‌ ನೋಟಿಸ್​ಗಿಂತ ಹೆಚ್ಚಿನ ಹಾಗೂ ನಿಯಮಬಾಹಿರವಾಗಿ ಹಣ ಕೇಳುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಾವೇರಿ ಸಂಪರ್ಕ ನೀಡಲು ನಿಯಮಬಾಹಿರವಾಗಿ ಹಣ ಕೇಳುವ, ಬಿಡಬ್ಲೂಎಸ್‌ಎಸ್‌ಬಿ ಹೆಸರು ಹೇಳಿಕೊಂಡು ಬರುವ ಮಧ್ಯವರ್ತಿಗಳಾಗಲಿ, ಜಲಮಂಡಳಿ ಸಿಬ್ಬಂದಿಗಳಾಗಲಿ ಅಥವಾ ಅಸೋಷಿಯೇಷನ್‌ ಸದಸ್ಯರು ಹಾಗೂ ಮಧ್ಯವರ್ತಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ಇಂತಹ ಪ್ರಕರಣಗಳನ್ನು ಕ್ಷಿಪ್ರ ರೀತಿಯಲ್ಲಿ ತನಿಖೆ ಮಾಡಿ ಪರಿಹಾರ ನೀಡುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಮುಖ್ಯ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ವಿಜಿಲೆನ್ಸ್‌ ತಂಡ ರಚಿಸಲಾಗಿದೆ. ಸಾರ್ವಜನಿಕರು bwssbvigilance@gmail.comಗೆ ಅಗತ್ಯ ಮಾಹಿತಿಯ ಮೂಲಕ ದೂರನ್ನು ಸಲ್ಲಿಸಿದಲ್ಲಿ 24 ಗಂಟೆಯ ಒಳಗಾಗಿ ಕ್ರಮ ಕೈಗೊಳ್ಳುಲಾಗುವುದು ಎಂದಿದ್ದಾರೆ.

ಬೆಂಗಳೂರು ಜಲಮಂಡಳಿಯ ವತಿಯಿಂದ ಪಾರದರ್ಶಕವಾಗಿ ಹಾಗೂ ನ್ಯಾಯಯುತವಾಗಿ ನಿಯಮಾನುಸಾರ ಕಾವೇರಿ ನೀರು ಸರಬರಾಜು ಸಂಪರ್ಕ ನೀಡುವಂತೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಕಾವೇರಿ ನೀರಿನ ಸಂಪರ್ಕ ಪಡೆಯುವ ಸಂಧರ್ಭದಲ್ಲಿ ಜಲಮಂಡಳಿಯ ಹೆಸರು ದುರುಪಯೋಗಪಡಿಸಿಕೊಳ್ಳುವ ಹಾಗೂ ಹೆಚ್ಚಿನ ಹಣ ಕೇಳುವ ವ್ಯಕ್ತಿಗಳ ವಿರುದ್ಧ ಜಲಮಂಡಳಿಯ ವಿಜಿಲೆನ್ಸ್‌ ತಂಡಕ್ಕೆ ದೂರನ್ನು ನೀಡಬಹುದಾಗಿದೆ. ದೂರು ಸಲ್ಲಿಸುವವರ ಗುರುತನ್ನು ಗೌಪ್ಯವಾಗಿಡಲಾಗುವುದಲ್ಲದೆ, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ತೂಕದಲ್ಲಿ ಮೋಸ ಆರೋಪ ; ಪಾಂಡವಪುರದ ಮೂರು ಜ್ಯುವೆಲ್ಲರ್ಸ್ ಸೀಜ್ ಮಾಡಿದ ಅಧಿಕಾರಿಗಳು

ABOUT THE AUTHOR

...view details