ಪುತ್ತೂರು(ದಕ್ಷಿಣ ಕನ್ನಡ):ಭಾರತವನ್ನು ಜಗತ್ತಿಗೇ ನಾಯಕತ್ವ ಸ್ಥಾನದಲ್ಲಿ ನಿಲ್ಲಿಸಿರುವ ನರೇಂದ್ರ ಮೋದಿಯವರ ವಿಚಾರದಲ್ಲಿ ಮೈಮರೆವು ಬೇಡ. ನಮ್ಮ ಗುರಿ, ಉದ್ದೇಶ, ಸಂಕಲ್ಪ, ಶ್ರಮ ಮೋದಿಯವರನ್ನು ಮತ್ತಷ್ಟು ವರ್ಷಗಳ ಕಾಲ ಪ್ರಧಾನಿಯಾಗಿಸುವುದೇ ಆಗಿರಬೇಕು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ್ದಾರೆ. ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ ಮಂಗಳವಾರ ನಡೆದ ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಾದ್ಯಂತ ಬಿಜೆಪಿಗೆ ಒಳ್ಳೆಯ ವಾತಾವರಣವಿದೆ. 1998 ರಲ್ಲಿ ಪರಮಾಣು ಪರೀಕ್ಷೆ ಮಾಡಿದ, ಸರ್ವಶಿಕ್ಷಣ, ಗ್ರಾಮೀಣ ಸಡಕ್ ರಸ್ತೆಗಳು, ಅನ್ನಭಾಗ್ಯ, ಅಂತ್ಯೋದಯ ಯೋಜನೆ ಸೇರಿದಂತೆ ಭಾರತವನ್ನು ಅಭಿವೃದ್ಧಿಯ ಉತ್ತುಂಗಕ್ಕೇರಿಸಿದ ವಾಜಪೇಯಿ ವಿಚಾರದಲ್ಲಿ ನಾವು ತಪ್ಪು ಮಾಡಿದ್ದೇವೆ. ಭವಿಷ್ಯದ ಭಾರತಕ್ಕಾಗಿ ನರೇಂದ್ರ ಮೋದಿಯವರನ್ನು ಗೆಲ್ಲಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಾವು ಮಾಡಲೇ ಬೇಕು ಎಂದರು.
ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ಹಾಗೂ ದ.ಕ. ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಸ್ವಾಮಿ ವಿವೇಕಾನಂದ ಕಂಡ ಭಾರತದ ಕನಸು ಈಗ ನನಸಾಗುತ್ತಿದೆ. ಈ ಹಿಂದೆ ಎನ್ಡಿಎ, ಯುಪಿಎಗಳು ಎಷ್ಟು ಸ್ಥಾನಗಳನ್ನು ಪಡೆಯುತ್ತವೆ ಎಂಬ ವಿಚಾರಗಳೇ ಲೋಕಸಭಾ ಚುನಾವಣೆ ಸಂದರ್ಭದ ಪ್ರಮುಖ ಚರ್ಚೆಯಾಗುತ್ತಿದ್ದರೆ ಇಂದು ಮುಂದಿನ ಬಾರಿ ಮತ್ತೆ ಮೋದಿ ಪ್ರಧಾನಿ ಎಂಬುದೇ ಪ್ರಮುಖ ವಿಚಾರವಾಗಿದೆ. ಸಾಮಾನ್ಯ ಕಾರ್ಯಕರ್ತನೂ ಲೋಕಸಭಾ ಸದಸ್ಯನಾಗಬಲ್ಲ ಮಾಡಬಲ್ಲ ಏಕೈಕ ಪಕ್ಷ ಬಿಜೆಪಿ ಎಂದು ಹೇಳಿದರು.