ಕರ್ನಾಟಕ

karnataka

By ETV Bharat Karnataka Team

Published : Sep 4, 2024, 8:04 AM IST

ETV Bharat / state

ಕುವೆಂಪು ವಿವಿ ಸಮಸ್ಯೆಗಳ ಪರಿಹಾರಕ್ಕೆ ಹಂತಹಂತವಾಗಿ ಕ್ರಮ: ಸಚಿವ ಮಧು ಬಂಗಾರಪ್ಪ - Kuvempu University

ಕುವೆಂಪು ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಬೇಕಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರುತ್ತೇನೆ ಎಂದು ಶಿವಮೊಗ್ಗದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಪ್ರಗತಿ ಪರಿಶೀಲನಾ ಸಭೆ
ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ (ETV Bharat)

ಶಿವಮೊಗ್ಗ: "ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಮಸ್ಯೆಗಳು, ಅಂಕಪಟ್ಟಿ ಪಡೆಯುವಿಕೆ ವಿಳಂಬ, ಕೇಂದ್ರೀಕೃತ ಯುಯುಸಿಎಂಎಸ್ ಪೋರ್ಟಲ್​ನಿಂದ ಆಗುತ್ತಿರುವ ತೊಡಕುಗಳು ಸೇರಿದಂತೆ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಇರುವ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು" ಎಂದು ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಮಂಗಳವಾರ ಕುವೆಂಪು ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

"ವಿವಿ ಹಣಕಾಸು ವಿಷಯದಲ್ಲಿ ಸಂಕಷ್ಟದಲ್ಲಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಆಡಳಿತವನ್ನು ವಿವಿ ನಿಯಮಾವಳಿ ಪ್ರಕಾರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೊಳಿಸಬೇಕು. ತ್ವರಿತವಾಗಿ ಕೈಗೊಳ್ಳಬೇಕಾದ ಹಣಕಾಸು ವಿಷಯಗಳನ್ನು ಕೈಗೆತ್ತಿಕೊಳ್ಳಬೇಕು.‌ ಏನೇ ಸಮಸ್ಯೆ ಇದ್ದರೂ ನನ್ನನ್ನು ಕರೆಯಿರಿ. ವಿವಿ ಅಭಿವೃದ್ದಿಯಲ್ಲಿ ನಾವೆಲ್ಲ ಭಾಗಿಯಾಗೋಣ" ಎಂದರು.

ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಶರತ್​ ಅನಂತಮೂರ್ತಿ ಮಾತನಾಡಿ, "ವಿವಿ‌ ಸಂಪೂರ್ಣವಾಗಿ ಸರ್ಕಾರಿ ಹಣದ ಮೇಲೆಯೇ ಅವಲಂಬಿಸದೆ ಸಕ್ರಿಯರಾಗಿ ಸಿಎಸ್​ಆರ್​ ನಿಧಿ ಹಾಗೂ ಇತರೆ ಚಟುವಟಿಕೆ ಮೂಲಕ ಅಭಿವೃದ್ಧಿಗೆ ಶ್ರಮಿಸಲಾಗುವುದು. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ವಿವಿ ವ್ಯಾಪ್ತಿಗೆ ಬರುತ್ತದೆ. ಪ್ರಥಮ ದರ್ಜೆ ಕಾಲೇಜುಗಳ ಅಫಿಲಿಯೇಷನ್​ಗಾಗಿ ಸರ್ಕಾರಕ್ಕೆ ಅರ್ಜಿ 35 ಪ್ರಸ್ತಾವನೆ ಕಳುಹಿಸಿದ್ದೆವು. ಅಫಿಲಿಯೇಷನ್​ ದೊರಕದೆ ಕಾಲೇಜು ಆರಂಭಿಸಲು ಸಾಧ್ಯವಿಲ್ಲ. 17 ಸರ್ಕಾರಿ ಕಾಲೇಜು ಅನುಮೋದನೆ ಆಗಿದೆ. 18 ಕಾಲೇಜು ಅನುಮೋದನೆಯಾಗದ ಕಾರಣ ದಾಖಲಾತಿ ಸಾಧ್ಯವಾಗುತ್ತಿಲ್ಲ" ಎಂದು ಹೇಳಿದರು.

ಕುವೆಂಪು ವಿಶ್ವವಿದ್ಯಾಲಯದಿಂದ ಸಚಿವ ಮಧು ಬಂಗಾರಪ್ಪನವರಿಗೆ ಗೌರವ ಸಮರ್ಪಣೆ (ETV Bharat)

"ಫಲಿತಾಂಶ ಬೇಗ ನೀಡಲು ಸ್ವಲ್ಪ ತೊಡಕಿದೆ.‌ ಯುಯುಸಿಎಂಎಸ್​ ಸೆಂಟ್ರಲೈಸ್ಡ್ ಸಾಫ್ಟ್​ವೇರ್​ನಿಂದ ಸಣ್ಣಪುಟ್ಟ ಬದಲಾವಣೆ ಕೂಡ ಅತ್ಯಂತ ಕಷ್ಟವಾಗುತ್ತಿದೆ. 3 ವರ್ಷದಿಂದ ಸ್ನಾತಕೋತ್ತರ ಪದವಿ ಅಂಕಪಟ್ಟಿ ಸಹ ಬಂದಿಲ್ಲ. ವಿಕೇಂದ್ರೀಕರಣ ಆದರೆ ಅನುಕೂಲವಾಗುತ್ತದೆ. ಯುಯುಸಿಎಂಎಸ್ ಪೋರ್ಟಲ್​ನಲ್ಲಿ ದಾಖಲಾತಿ ಹಾಗೂ ಅಂಕಪಟ್ಟಿ ಪಡೆಯುವಲ್ಲಿ ಅನೇಕ ತೊಂದರೆಗಳಿವೆ. ಪಿಯು ಫಲಿತಾಂಶ ಬಂದು 4 ತಿಂಗಳಾದರೂ ದಾಖಲಾತಿ ಸಾಧ್ಯವಾಗಿಲ್ಲ" ಎಂದು ಅವರು ವಿಶ್ವವಿದ್ಯಾಲಯದಲ್ಲಿನ ಸಮಸ್ಯೆಗಳನ್ನು ವಿವರಿಸಿದರು.

ಪ್ರಾಧ್ಯಾಪಕರು ಮಾತನಾಡಿ, "ಅಫಿಲಿಯೇಷನ್​​​ ದೊರಕದ ಪ್ರಥಮ ದರ್ಜೆ ಕಾಲೇಜುಗಳಿಗೆ ದಾಖಲಾತಿ ಆಗುತ್ತಿಲ್ಲ. ಸರ್ಕಾರದ ಕೆಲವು ನೀತಿಗಳಿಂದಾಗಿ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣ ನಿಲ್ಲಿಸಲಾಗಿದ್ದು, ವಿದ್ಯಾರ್ಥಿಗಳು ಮತ್ತು ವಿವಿಗೆ ಹಿನ್ನಡೆಯಾಗಿದೆ" ಎಂದರು.

ಸಿಂಡಿಕೇಟ್ ಸದಸ್ಯರಾದ ಶ್ರೀಪಾಲ್ ಮತ್ತು ಇತರೆ ಪ್ರಾಧ್ಯಾಪಕರು, "ಕರ್ನಾಟಕ ಮತ್ತು‌ ಮಹಾರಾಷ್ಟ್ರದಲ್ಲಿ‌ ಮಾತ್ರ ಈ ಸೆಂಟ್ರಲೈಸ್ಡ್ ಪೋರ್ಟಲ್ ಇದ್ದು, ರಾಜ್ಯಾದ್ಯಂತ ವಿವಿಗಳಲ್ಲಿ ಈ ಸಮಸ್ಯೆಗಳಿವೆ" ಎಂದು ಹೇಳಿದರು.

ಮತ್ತೊಂದು ಸಭೆಗೆ ಸಚಿವರ ಸೂಚನೆ: "ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸಮಸ್ಯೆಗಳು ಗಂಭೀರವಾಗಿದ್ದು, ಸಮಸ್ಯೆಗಳ ಪಟ್ಟಿ ನೀಡಿ ಈ ವಿಷಯವಾಗಿ ಆದ್ಯತೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಮಾತನಾಡುತ್ತೇನೆ. ಈ ತಿಂಗಳ ಅಂತ್ಯದೊಳಗೆ ಮತ್ತೊಂದು ಸಭೆ ನಡೆಸೋಣ. ಹೊರಗುತ್ತಿಗೆ ನೌಕರರಿಗೆ ವೇತನ‌ ನೀಡುವುದು ವಿಳಂಬವಾಗುತ್ತಿದ್ದು, ನಿಗದಿತ ಸಮಯದೊಳಗೆ ವೇತನ ನೀಡಬೇಕು" ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಕುಲಸಚಿವ ಮಂಜುನಾಥ್ ಎ.ಎಲ್. ಪಿಪಿಟಿ ಮೂಲಕ ವಿಶ್ವವಿದ್ಯಾಲಯದ ಹಣಕಾಸು, ಹುದ್ದೆಗಳ ವಿವರ, ಮೂಲಭೂತ ಸೌಕರ್ಯಗಳು, ಇತರೆ ಪ್ರಗತಿ ಕುರಿತು ಮಾಹಿತಿ ನೀಡಿದರು. ಡಾ.ಸಂತೋಷ್ ಟಿಶ್ಯು ಕಲ್ಚರ್, ಬಾಳೆ ಗಿಡ ಉತ್ಪಾದನಾ ಘಟಕ ಕುರಿತು ಮಾಹಿತಿ ನೀಡಿದರು.

ಭದ್ರಾವತಿ ನಗರಸಭಾ ಸದಸ್ಯ ಮೋಹನ್ ಕುಮಾರ್, ಮಾಜಿ ವಿಧಾನ ಪರಿಷತ್ ಶಾಸಕ ಪ್ರಸನ್ನ ಕುಮಾರ್ ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಪ್ರೊ ಎಸ್.ಎಂ.ಗೋಪಿನಾಥ್​ ಹಾಗು ಇತರೆ ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ:ಎಐ ಕೌಶಲ್ಯ ಕುರಿತು ರಾಜ್ಯ ಸರ್ಕಾರದ ಜತೆ ಒಡಂಬಡಿಕೆಗೆ ಮೈಕ್ರೋಸಾಫ್ಟ್ ಒಲವು: ಸಚಿವ ಎಂ‌.ಬಿ.ಪಾಟೀಲ್ - Microsoft Agreement

ABOUT THE AUTHOR

...view details