ಕರ್ನಾಟಕ

karnataka

ಬೆಂಗಳೂರು: ಪಿಜಿಯೊಳಗೆ ನುಗ್ಗಿ ಯುವತಿ ಹತ್ಯೆಗೈದಿದ್ದ ಆರೋಪಿ ಮಧ್ಯಪ್ರದೇಶದಲ್ಲಿ ಬಂಧನ - PG Murder Case

By ETV Bharat Karnataka Team

Published : Jul 27, 2024, 11:17 AM IST

ಬೆಂಗಳೂರಿನ ಪಿಜಿಯಲ್ಲಿ ಯುವತಿ ಹತ್ಯೆ ಪ್ರಕರಣದ ಆರೋಪಿ ಅಭಿಷೇಕ್​ನನ್ನು ಪೊಲೀಸರು ಮಧ್ಯಪ್ರದೇಶದಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆತರುತ್ತಿದ್ದಾರೆ.

ಪಿಜಿಯೊಳಗೆ ನುಗ್ಗಿ ಯುವತಿ ಹತ್ಯೆಗೈದಿದ್ದ ಆರೋಪಿ ಮಧ್ಯಪ್ರದೇಶದಲ್ಲಿ ಬಂಧನ
ಪಿಜಿಯೊಳಗೆ ನುಗ್ಗಿ ಯುವತಿ ಹತ್ಯೆಗೈದಿದ್ದ ಆರೋಪಿ ಮಧ್ಯಪ್ರದೇಶದಲ್ಲಿ ಬಂಧನ (ETV Bharat)

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ (ETV Bharat)

ಬೆಂಗಳೂರು:ನಗರದಪಿ.ಜಿಯೊಂದರೊಳಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆ ಮಾಡಿದ್ದ ಆರೋಪಿಯನ್ನ ಕೋರಮಂಗಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶ ಮೂಲದ ಅಭಿಷೇಕ್ ಬಂಧಿತ ಆರೋಪಿ.

ಜುಲೈ 23ರಂದು ಕೋರಮಂಗಲದ ವಿ.ಆರ್. ಲೇಔಟ್‌ನಲ್ಲಿರುವ ಪಿಜಿಯಲ್ಲಿ ಬಿಹಾರ ಮೂಲದ ಕೃತಿ ಕುಮಾರಿ‌ (24) ಎಂಬ ಯುವತಿಯನ್ನು ಹತ್ಯೆಗೈದು ಆರೋಪಿ ಅಭಿಷೇಕ್ ಊರಿಗೆ ಹೋಗಿ, ತನ್ನ ಪೋಷಕರನ್ನು ಸಂಪರ್ಕಿಸಿದ್ದ. ಯುವತಿಯೊಬ್ಬಳನ್ನು ಹತ್ಯೆಗೈದಿರುವುದಾಗಿ ತಿಳಿಸಿದ್ದ. ಮತ್ತೊಂದೆಡೆ ಆರೋಪಿಯ ಪೋಷಕರನ್ನು ಸಂಪರ್ಕಿಸಿದ್ದ ಪೊಲೀಸರು, ಮಧ್ಯಪ್ರದೇಶದ ಸ್ಥಳೀಯ ‌ಪೊಲೀಸರ ಸಹಾಯದಿಂದ ಆತನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರುತ್ತಿದ್ದಾರೆ.

ಕೃತಿ ಕುಮಾರಿಯ ಸಹೋದ್ಯೋಗಿ ಮತ್ತು ರೂಮ್‌ಮೇಟ್‌ ಆಗಿದ್ದ ಯುವತಿ ಹಾಗೂ ಅಭಿಷೇಕ್​ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಭಿಷೇಕ್​ ಮಧ್ಯಪ್ರದೇಶದ ಭೋಪಾಲ್​ನಲ್ಲಿ ಯಾವುದೇ ಕೆಲಸವಿಲ್ಲದೆ ಖಾಲಿಯಿದ್ದ. ಈತ ಆಗಾಗ ಬೆಂಗಳೂರಿಗೆ ಬಂದು ಪ್ರೇಯಸಿಯನ್ನ ಭೇಟಿಯಾಗಿ ಹೋಗುತ್ತಿದ್ದ. ಕೆಲಸವಿಲ್ಲದೆ ಸುತ್ತಾಡುತ್ತಿದ್ದ ಅಭಿಷೇಕ್ ಹಾಗೂ ಆತನ ಪ್ರೇಯಸಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದರ ಮಧ್ಯೆ ಕೆಲಸಕ್ಕೆ ಸೇರುವಂತೆ ಪ್ರೇಯಸಿ ಒತ್ತಾಯಿಸಿದಾಗ, ಕೆಲಸಕ್ಕೆ ಸೇರಿಕೊಂಡಿರುವುದಾಗಿ ಅಭಿಷೇಕ್ ಸುಳ್ಳು ಹೇಳಿದ್ದನಂತೆ. ಸುಳ್ಳು ಹೇಳಿರುವುದನ್ನ ತಿಳಿದ ಬಳಿಕ ಅಭಿಷೇಕ್‌ನನ್ನ ಆತನ ಪ್ರೇಯಸಿ ನಿರ್ಲಕ್ಷ್ಯಿಸಲಾರಂಭಿಸಿದ್ದಳು. ಇದರಿಂದ ಸಿಟ್ಟಾಗಿದ್ದ ಅಭಿಷೇಕ್ ಆಗಾಗ ಪಿ.ಜಿ ಬಳಿ ಬಂದು ಗಲಾಟೆ ಮಾಡುತ್ತಿದ್ದ. ಹೀಗಾಗಿ ಕೆಲವು ದಿನಗಳ ಹಿಂದಷ್ಟೇ ಕೃತಿ ಕುಮಾರಿಯು ತನ್ನ ಗೆಳತಿಯನ್ನು ಬೇರೊಂದು ಪಿ.ಜಿಗೆ ಶಿಫ್ಟ್ ಮಾಡಿಸಿದ್ದಳು. ಇದರಿಂದ ಅಭಿಷೇಕ್ ಕೃತಿ ಕುಮಾರಿ ಮೇಲೆ ಸಿಟ್ಟಾಗಿದ್ದ.

ಅಂತೆಯೇ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಪಿಜಿ ಬಳಿ ಬಂದಿದ್ದ ಅಭಿಷೇಕ್​ನನ್ನು ಅಲ್ಲಿನ ಸೆಕ್ಯುರಿಟಿ ತಡೆದಿದ್ದ. ರಾತ್ರಿ 11ರ ಸುಮಾರಿಗೆ ಮತ್ತೆ ಬಂದಿದ್ದ ಅಭಿಷೇಕ್ ನೇರವಾಗಿ 3ನೇ ಫ್ಲೋರ್‌ಗೆ ತೆರಳಿ ರೂಮ್‌ನ ಬಾಗಿಲು ತೆರೆಯುತ್ತಿದ್ದಂತೆ ಕೃತಿ ಕುಮಾರಿಯ ಕತ್ತು ಕೊಯ್ದು ಪರಾರಿಯಾಗಿದ್ದ. ಸದ್ಯ ಆರೋಪಿಯನ್ನ ಬಂಧಿಸಿ ಕೋರಮಂಗಲ ಠಾಣಾ ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದಾರೆ.

ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ಪಿ.ಜಿಯಲ್ಲಿ ನಡೆದಿದ್ದ ಯುವತಿ ಹತ್ಯೆ ಪ್ರಕರಣದ ಆರೋಪಿಯ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಮಧ್ಯಪ್ರದೇಶದಲ್ಲಿದ್ದ ಆರೋಪಿಯ ಮಾಹಿತಿ ಕಲೆಹಾಕಿ ಬಂಧಿಸಲಾಗಿದ್ದು, ಟ್ರಾನ್ಸಿಟ್ ವಾರೆಂಟ್ ಪಡೆದು ಬೆಂಗಳೂರಿಗೆ ಕರೆತರಲಾಗುತ್ತಿದೆ. ಆರೋಪಿಯ ಹಿನ್ನೆಲೆ, ಹತ್ಯೆಗೆ ಕಾರಣವೇನು ಎಂದು ಬೆಂಗಳೂರಿಗೆ ಕರೆತಂದು ವಿಚಾರಣೆಗೊಳಪಡಿಸಿದ ನಂತರ ತಿಳಿಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ - ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್

ಪ್ರಕರಣಕ್ಕೆ ಟ್ವಿಸ್ಟ್;ಕೊಲೆಗೀಡಾದ ಯುವತಿ ಅಭಿಷೇಕನ ಪ್ರಿಯತಮೆ ಎಂದು ಹೇಳಲಾಗಿತ್ತು. ಆದ್ರೆ ಪೊಲೀಸರ ತನಿಖೆಯಲ್ಲಿ ಕೃತಿ ಕುಮಾರಿಯು ಅಭಿಷೇಕನ ಪ್ರಿಯತಮೆಯ ರೂಮ್​ಮೇಟ್​ ಅನ್ನೋದು ತಿಳಿದುಬಂದಿದೆ. ​

ಇದನ್ನೂ ಓದಿ:ತನ್ನ ಪ್ರಿಯತಮೆಯನ್ನ ದೂರ ಮಾಡಲು ಈ ಯುವತಿಯೇ ಕಾರಣವೆಂದು ಹತ್ಯೆ: ತನಿಖೆ ಚುರುಕುಗೊಳಿಸಿದ ಪೊಲೀಸರು - Murder case of young woman in PG

ABOUT THE AUTHOR

...view details