ಕರ್ನಾಟಕ

karnataka

ETV Bharat / state

ಕಲ್ಮಂಜ ಮನೆಯವರನ್ನು ಕಟ್ಟಿ ಹಾಕಿ ದರೋಡೆ ಪ್ರಕರಣ: ಚಿನ್ನಾಭರಣ ಸಹಿತ ಆರೋಪಿಗಳ ಬಂಧನ - Accused arrested for robbery case

ಮನೆಯವರನ್ನು ಕಟ್ಟಿಹಾಕಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

By ETV Bharat Karnataka Team

Published : May 27, 2024, 10:42 PM IST

police
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು (ETV Bharat)

ಬೆಳ್ತಂಗಡಿ (ದಕ್ಷಿಣ ಕನ್ನಡ) : ನಾಲ್ಕು ವರ್ಷದ ಹಿಂದೆ ಕಲ್ಮಂಜ ಗ್ರಾಮದ ನಿವಾಸಿ ಅಡಕೆ ವ್ಯಾಪಾರಿ ಅಚ್ಚುತ ಭಟ್ ಮನೆಗೆ ನುಗ್ಗಿ ಮನೆಯವರನ್ನು ಕಟ್ಟಿ ಹಾಕಿ, ದರೋಡೆ ನಡೆಸಿದ ಪ್ರಕರಣದ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿ, ಅವರಿಂದ ದರೋಡೆ ಮಾಡಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಧರ್ಮಸ್ಥಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ ರಿಷ್ಯಂತ್ ಅವರು, ಈ ಬಗ್ಗೆ ಮಾಹಿತಿ ನೀಡಿದರು. ಬಂಧಿತ ಆರೋಪಿಗಳು ಮುಂಡಾಜೆ ಗ್ರಾಮದ‌ ನಿವಾಸಿಗಳಾದ ನವಾಜ್ (38) ರಿಯಾಜ್ ಹಾಗೂ ಬೆಂಗಳೂರಿನ ಕೃಷ್ಣ ಎಂಬುವವರಾಗಿದ್ದಾರೆ. ಬಂಧಿತ ಆರೋಪಿಗಳಿಂದ ಕಳ್ಳತನ ಮಾಡಲಾಗಿದ್ದ 104ಗ್ರಾಂ ಚಿನ್ನಾಭರಣಗಳನ್ನು, 288 ಗ್ರಾಂ ಬೆಳ್ಳಿಯ ವಸ್ತುಗಳನ್ನು ಹಾಗೂ ರೂ. 25,000 ನಗದನ್ನು ಹಾಗೂ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಘಟನೆಯ ಹಿನ್ನೆಲೆ : 2020 ಜೂನ್ 6ರಂದು ಕಲ್ಮಂಜ ಗ್ರಾಮದ ನಿವಾಸಿಯಾಗಿರುವ ಅಚ್ಯುತಭಟ್ ಎಂಬವರ ಮನೆಗೆ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದ ಅಚ್ಯುತ ಭಟ್ ಅವರನ್ನು, ಅವರ ತಾಯಿ ಹಾಗೂ ತಮ್ಮನ ಪತ್ನಿಯನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ ಚಿನ್ನ, ಬೆಳ್ಳಿಯ ಆಭರಣಗಳನ್ನು ಹಾಗೂ ನಗದನ್ನು ದರೋಡೆ ಮಾಡಿ ಪರಾರಿಯಾಗಿದ್ದರು.

ಆರೋಪಿಗಳು ಸುಮಾರು 30 ರಿಂದ 35 ಪವನ್ ಚಿನ್ನಾಭರಣಗಳನ್ನು, ಒಂದು ಕೆ.ಜಿ ಬೆಳ್ಳಿಯ ಆಭರಣಗಳನ್ನು ದರೋಡೆ ಮಾಡಿರುವುದಾಗಿ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿತ್ತು. ನಿರಂತರವಾಗಿ ತನಿಖೆ ನಡೆಸಿದರೂ ಪೊಲೀಸರಿಗೆ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ಬಿ ರಿಪೋರ್ಟ್ ಹಾಕಲಾಗಿತ್ತು.

ಚಿನ್ನ ಮಾರುವ ವೇಳೆ ಲಭ್ಯವಾದ ಸುಳಿವು : ಕಳ್ಳತನ ಮಾಡಿದ್ದ ಆರೋಪಿಗಳು ಜಾಗರೂಕತೆಯಿಂದ ಚಿನ್ನಾಭರಣಗಳನ್ನು ಸ್ವಲ್ಪ ಸ್ವಲ್ಪ ಮಾರಾಟ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ. ಈ ನಡುವೆ ಮೇ 22ರಂದು ಆರೋಪಿ ರಿಯಾಜ್ ಎಂಬಾತನು ದಾಖಲೆಯಿಲ್ಲದ ಚಿನ್ನ ಮಾರಾಟಮಾಡಲು ಮುಂದಾಗುತ್ತಿದ್ದಾನೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.

ಆತನಿಂದ ಲಭಿಸಿದ ಮಾಹಿತಿಗಳ‌ ಮೇರೆಗೆ ಪೊಲೀಸರು ಇನ್ನಿಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.‌ ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಭಾಗಿಗಳಾಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದಿದ್ದಾರೆ.

ಬಂಧಿತ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದ ಪತ್ತೆ ಬಗ್ಗೆ ಮಾನ್ಯ ಸಿ. ಬಿ ರಿಷ್ಯಂತ್ ಪೊಲೀಸ್‌ ಅಧೀಕ್ಷಕರು, ದ. ಕ ಜಿಲ್ಲೆ, ಮಾನ್ಯ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರುಗಳಾದ ಶ್ರೀ ಎಂ. ಜಗದೀಶ್‌ ಮತ್ತು ಶ್ರೀ ರಾಜೇಂದ್ರ ಡಿ. ಎಸ್ ಮತ್ತು ಪೊಲೀಸ್‌ ಉಪಾಧೀಕ್ಷಕರು ಬಂಟ್ವಾಳ ಶ್ರೀ ವಿಜಯ ಪ್ರಸಾದ್‌ ಎಸ್‌ ಅವರ ನಿರ್ದೆಶನದಂತೆ, ಶ್ರೀ ವಸಂತ್‌ ಆರ್‌. ಆಚಾರ್‌ ಪೊಲೀಸ್‌ ವೃತ್ತ ನಿರೀಕ್ಷಕರು, ಬೆಳ್ತಂಗಡಿ ಗ್ರಾಮಾಂತರ ವೃತ್ತ, ಶ್ರೀ ನಾಗರಾಜ್ ಹೆಚ್. ಇ, ಪೊಲೀಸ್ ನಿರೀಕ್ಷಕರು, ವಿಟ್ಲ ಪೊಲೀಸ್ ಠಾಣೆ ಮತ್ತು ಶ್ರೀ ಸುಬ್ಬಾಪುರ ಮಠ, ಪೊಲೀಸ್ ನಿರೀಕ್ಷಕರು ಬೆಳ್ತಂಗಡಿ ಪೊಲೀಸ್ ಠಾಣೆ ಅವರ ಮಾರ್ಗದರ್ಶದಂತೆ ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ-ನಿರೀಕ್ಷಕರುಗಳಾದ ಅನೀಲ್‌ ಕುಮಾರ ಡಿ, ಸಮರ್ಥ ಗಾಣಿಗೇರ ಹಾಗೂ ಸಿಬ್ಬಂದಿಗಳಾದ ಹೆಚ್. ಸಿ ರಾಜೇಶ್ ಎನ್‌, ಹೆಚ್. ಸಿ ಪ್ರಶಾಂತ್‌ ಎಂ, ಹೆಚ್. ಸಿ ಸತೀಶ್‌ ನಾಯ್ಕ್ , ಹೆಚ್. ಸಿ ಪ್ರಮೋದಿನಿ , ಹೆಚ್. ಸಿ ಶೇಖರ್‌ ಗೌಡ , ಹೆಚ್‌ ಸಿ ಕೃಷ್ಣಪ್ಪ, ಅನಿಲ್‌ ಕುಮಾರ್‌, ಜಗದೀಶ್‌, ಮಲ್ಲಿಕಾರ್ಜುನ್‌, ವಿನಯ್‌ ಪ್ರಸನ್ನ , ಗೋವಿಂದರಾಜ್‌, ಭಿಮೇಶ್‌, ನಾಗರಾಜ್‌ ಬುಡ್ರಿ ಹಾಗೂ ಹುಲಿರಾಜ್‌ ಪತ್ತೆ ಕಾರ್ಯಕ್ಕೆ ಸಹಕರಿಸಿರುತ್ತಾರೆ ಎಂದು ಎಸ್​ಪಿ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ಕವಿವಿಯಲ್ಲಿ ಹಲ್ಲೆ, ಸರಗಳ್ಳತನ ಯತ್ನ ಪ್ರಕರಣ ಬೆಳಕಿಗೆ, ತನಿಖೆ ಆರಂಭ: ಭದ್ರತೆ ಹೆಚ್ಚಿಸಲು ಸೂಚನೆ - Karnataka University

ABOUT THE AUTHOR

...view details