ಬೆಂಗಳೂರು:ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿ, ಸಿಬ್ಬಂದಿಯ ಗಮನ ಬೇರೆಡೆ ಸೆಳೆದು 75 ಲಕ್ಷ ಮೌಲ್ಯದ ವಜ್ರದ ಉಂಗುರ ಕದ್ದು ಪರಾರಿಯಾಗಿದ್ದಾನೆ. ನಗರದ ಎಂ.ಜಿ.ರಸ್ತೆಯ ಜೋಯಲುಕ್ಕಾಸ್ ಆಭರಣ ಮಳಿಗೆಯಲ್ಲಿ ಘಟನೆ ನಡೆದಿದೆ.
ಫೆಬ್ರವರಿ 18ರಂದು ಸಂಜೆ ಗ್ರಾಹಕನ ಸೋಗಿನಲ್ಲಿ ಬಂದಿದ್ದ ಆರೋಪಿ, ಆಭರಣ ನೋಡುವ ನೆಪದಲ್ಲಿ ಸಿಬ್ಬಂದಿಗೆ ತಿಳಿಯದಂತೆ ನಕಲಿ ಉಂಗುರ ಇರಿಸಿ ಅಸಲಿ ವಜ್ರದ ಉಂಗುರ ಎಗರಿಸಿದ್ದಾನೆ. ಬಳಿಕ ಆಭರಣ ಹಿಡಿಸದವನಂತೆ ನಿಧಾನವಾಗಿ ಎದ್ದು ತೆರಳಿದ್ದಾನೆ. ಮರುದಿನ ಆಭರಣಗಳನ್ನು ಪರಿಶೀಲಿಸುವಾಗ ನಕಲಿ ಉಂಗುರ ಪತ್ತೆಯಾಗಿತ್ತು. ಬಳಿಕ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದಾಗ ಆರೋಪಿಯ ಕಳ್ಳತನದ ಕೃತ್ಯ ಬಯಲಾಗಿದೆ.