ಕರ್ನಾಟಕ

karnataka

ಘಟಪ್ರಭಾ ಆರ್ಭಟಕ್ಕೆ ಬೆಚ್ಚಿ ಬಿದ್ದ ಗೋಕಾಕ್: ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಸಂತ್ರಸ್ತರು - rain effect in belagavi

By ETV Bharat Karnataka Team

Published : Jul 29, 2024, 2:40 PM IST

Updated : Jul 29, 2024, 3:59 PM IST

ಬೆಳಗಾವಿಯಲ್ಲಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ಕೃಷಿ, ಮನೆ ಕಳೆದುಕೊಂಡು ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

BELAGAVI  FLOOD IN KARNATAKA  GHATAPRABHA RIVER  ಗೋಕಾಕ್
ಘಟಪ್ರಭಾ ನದಿ ಸೃಷ್ಟಿಸಿರುವ ಅವಾಂತರ (ETV Bharat)

ಘಟಪ್ರಭಾ ನದಿ ಸೃಷ್ಟಿಸಿರುವ ಅವಾಂತರ (ETV Bharat)

ಬೆಳಗಾವಿ:ಘಟಪ್ರಭಾ ನದಿ ಸೃಷ್ಟಿಸಿರುವ ಅವಾಂತರಕ್ಕೆ ಗೋಕಾಕ್ ಹಾಗೂ ಮೂಡಲಗಿ ತಾಲ್ಲೂಕಿನ ಜನ ತತ್ತರಿಸಿ ಹೋಗಿದ್ದಾರೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಘಟಪ್ರಭಾ ಆರ್ಭಟಕ್ಕೆ ಅನೇಕ ಹಳ್ಳಿಗಳು ನಲುಗಿ ಹೋಗಿವೆ. ಸೇತುವೆ, ದೇವಸ್ಥಾನ, ಬ್ಯಾಂಕ್ ಮತ್ತು ಮನೆಗಳು ಹೀಗೆ ಎಲ್ಲವೂ ಜಲಾವೃತವಾಗಿದ್ದು, ಜನರ ಬದುಕನ್ನೇ ಪ್ರವಾಹ ಕಸಿದುಕೊಂಡಿದೆ.

ಹೌದು, ಘಟಪ್ರಭಾ ಪ್ರವಾಹ ಕೇವಲ ಗೋಕಾಕ್​ ತಾಲೂಕಿಗೆ ಸಿಮೀತವಾಗಿಲ್ಲ. ಮೂಡಲಗಿ ತಾಲೂಕಿಗೂ ತನ್ನ ವಕ್ರದೃಷ್ಟಿ ಬೀರಿದ್ದು, ಇಲ್ಲಿನ ಮಸಗುಪ್ಪಿ ಒಂದೇ ಗ್ರಾಮದಲ್ಲಿ 600ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಗ್ರಾಮಕ್ಕೆ ರಾತ್ರೋರಾತ್ರಿ ನೀರು ನುಗ್ಗಿದ್ದರಿಂದ ಜನ ಜಾನುವಾರುಗಳೊಟ್ಟಿಗೆ ಕಾಳಜಿ ಕೇಂದ್ರಕ್ಕೆ ಶಿಫ್ಟ್ ಆಗಿದ್ದಾರೆ.

ಘಟಪ್ರಭಾ ನದಿ ಸೃಷ್ಟಿಸಿರುವ ಅವಾಂತರ (ETV Bharat)

ಗ್ರಾಮದ ಮನೆಗಳಲ್ಲಿ ನೀರು ತುಂಬಿಕೊಂಡು ಜನರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳ ಸಮೇತ ಊರು ತೊರೆಯುತ್ತಿರುವ ಜನರು, ಟ್ರ್ಯಾಕ್ಟರ್‌ನಲ್ಲಿ ಅಗತ್ಯ ವಸ್ತುಗಳ ಜೊತೆಗೆ ಗ್ರಾಮವನ್ನೇ ತೊರೆಯುತ್ತಿದ್ದಾರೆ. ಇನ್ನು ಇಲ್ಲಿನ ರೈತರು ನೂರಾರು ಎಕರೆಯಲ್ಲಿ ಬೆಳೆದಿದ್ದ ಕಬ್ಬು ಸೇರಿ ಮತ್ತಿತರ ಬೆಳೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ.

ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮಕ್ಕೆ ಘಟಪ್ರಭಾ ನದಿಯ ನೀರು ನುಗ್ಗಿದ್ದು, ಸುಣಧೋಳಿ ಗ್ರಾಮದ ಜಡಿಸಿದ್ದೇಶ್ವರ ದೇವಸ್ಥಾನ ಜಲಾವೃತವಾಗಿದೆ. ದೇವಸ್ಥಾನ ಆವರಣದ ಮಳಿಗೆಗಳಿಗೂ ನದಿ ನೀರು ನುಗ್ಗಿದ್ದು, ಹಲವು ಮನೆಗಳಿಗೆ ನೀರು ನುಗ್ಗುವ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ. ಉದಗಟ್ಟಿ ಉದ್ದಮ್ಮ ದೇವಿ ದೇವಸ್ಥಾನಗಳಿಗೆ ನೀರು ನುಗ್ಗಿ ನದಿಯ ನೀರಲ್ಲಿಯೇ ದೇವಿಗೆ ಇಂದು ಪೂಜೆ ನೆರವೇರಿಸಲಾಗಿದೆ.

ಘಟಪ್ರಭಾ ನದಿ ಸೃಷ್ಟಿಸಿರುವ ಅವಾಂತರ (ETV Bharat)

ಮೂಡಲಗಿ ತಾಲೂಕಿನ ಕೊನೆ ಹಳ್ಳಿಗಳಾದ ಹುಣಶ್ಯಾಳ ಮತ್ತು ಢವಳೇಶ್ವರ ಗ್ರಾಮಗಳು ಘಟಪ್ರಭಾ ನದಿಯ ಪ್ರವಾಹಕ್ಕೆ ನಡುಗಡ್ಡೆಗಳಾಗಿವೆ. ಹುಣಶ್ಯಾಳ ಪಿವೈ ಗ್ರಾಮದ ಹಣಮಂತ ದೇವರ ದೇವಾಲಯವು ಜಲಾವೃತಗೊಂಡಿದೆ. ಶನಿವಾರ ಸಂಜೆಯಿಂದ ನದಿಯ ನೀರಿನ ಪ್ರಮಾಣ ಏರುತ್ತಿರುವುದರಿಂದ ಇಡೀ ಊರಿನ ಜನ, ಜಾನುವಾರು, ಅಗತ್ಯ ಸಾಮಗ್ರಿಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ. ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಕಾಳಜಿ ಕೇಂದ್ರ ತೆರೆದಿದ್ದು 200ಕ್ಕೂ ಹೆಚ್ಚು ಸಂತ್ರಸ್ತರು ಆಶ್ರಯ ಪಡೆದಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ವೇದಗಂಗಾ, ದೂಧಗಂಗಾ, ಮಾರ್ಕಂಡೇಯ, ಹಿರಣ್ಯಕೇಶಿ ಒಟ್ಟು 40ಕ್ಕೂ ಅಧಿಕ ಸಂಪರ್ಕ ಸೇತುವೆಗಳು ಜಲಾವೃತವಾಗಿದ್ದು, ಸುಮಾರು 40 ಗ್ರಾಮಗಳಲ್ಲಿ ಸಪ್ತ ನದಿಗಳ ಪ್ರವಾಹದಿಂದ ಜನರು ಅತಂತ್ರರಾಗಿದ್ದಾರೆ. ಇನ್ನು 38 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 6 ಸಾವಿರಕ್ಕೂ ಅಧಿಕ ಜನರು ಆಶ್ರಯ ಪಡೆದಿದ್ದಾರೆ. ಅಲ್ಲದೇ ಸಂಬಂಧಿಕರ ಮನೆಗಳಿಗಳಲ್ಲೂ ಕೆಲ ಸಂತ್ರಸ್ಥರು ವಾಸ್ತವ್ಯ ಹೂಡಿದ್ದಾರೆ.

ಘಟಪ್ರಭಾ ನದಿ ಸೃಷ್ಟಿಸಿರುವ ಅವಾಂತರ (ETV Bharat)

ಇದನ್ನೂ ಓದಿ:ಸತತ ಮಳೆಯಿಂದ ರಾಜ್ಯದ ಬಹುತೇಕ ಜಲಾಶಗಳು ಭರ್ತಿ; ಹೀಗಿದೆ ನೀರಿನ ಮಟ್ಟದ ಮಾಹಿತಿ - Karnataka Dams

Last Updated : Jul 29, 2024, 3:59 PM IST

ABOUT THE AUTHOR

...view details