ಕರ್ನಾಟಕ

karnataka

ETV Bharat / international

ಇಸ್ರೇಲ್ ನಾಗರಿಕರು, ವಿದೇಶಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಸಾಧ್ಯತೆ: ಶ್ರೀಲಂಕಾದಲ್ಲಿ ಕಟ್ಟೆಚ್ಚರ

ಶ್ರೀಲಂಕಾದಲ್ಲಿ ವಿದೇಶಿ ಪ್ರಯಾಣಿಕರ ಮೇಲೆ ಉಗ್ರರು ದಾಳಿ ನಡೆಸಬಹುದು ಎಂದು ಗುಪ್ತಚರ ವರದಿಗಳು ಹೇಳಿವೆ.

ಶ್ರೀಲಂಕಾದಲ್ಲಿ ಕಟ್ಟೆಚ್ಚರ
ಶ್ರೀಲಂಕಾದಲ್ಲಿ ಕಟ್ಟೆಚ್ಚರ (IANS)

By ETV Bharat Karnataka Team

Published : 5 hours ago

ಕೊಲಂಬೊ: ಶ್ರೀಲಂಕಾ ಕರಾವಳಿಯ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ವಿದೇಶಿ ಪ್ರವಾಸಿಗರ ಮೇಲೆ, ಅದರಲ್ಲೂ ವಿಶೇಷವಾಗಿ ಇಸ್ರೇಲಿ ನಾಗರಿಕರ ಮೇಲೆ ಭಯೋತ್ಪಾದಕ ದಾಳಿಗಳು ನಡೆಯಬಹುದು ಎಂಬ ಗುಪ್ತಚರ ವರದಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ವಿಶ್ವದ ಹಲವಾರು ರಾಷ್ಟ್ರಗಳು ಶ್ರೀಲಂಕಾಗೆ ತೆರಳದಂತೆ ತಮ್ಮ ನಾಗರಿಕರಿಗೆ ಸೂಚನೆ ನೀಡಿರುವುದು ಇಲ್ಲಿ ಗಮನಾರ್ಹ.

ಏತನ್ಮಧ್ಯೆ, ಶ್ರೀಲಂಕಾದ ಪೂರ್ವ ಪ್ರಾಂತ್ಯದ ಅರುಗಮ್ ಕೊಲ್ಲಿ ಪ್ರದೇಶದಲ್ಲಿ ಇಸ್ರೇಲಿ ಪ್ರಜೆಗಳ ಮೇಲೆ ದಾಳಿ ಸಂಚಿನ ಆರೋಪದ ಮೇಲೆ ಮೂವರು ಶಂಕಿತರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾದ ವಿದೇಶಾಂಗ ಮತ್ತು ಸಾರ್ವಜನಿಕ ಭದ್ರತಾ ಸಚಿವ ವಿಜಿತಾ ಹೆರಾತ್ ಗುರುವಾರ ಬಹಿರಂಗಪಡಿಸಿದ್ದಾರೆ. ಗುರುವಾರ ಸಿಕ್ಕಿಬಿದ್ದ ಶಂಕಿತರೆಲ್ಲರೂ ಶ್ರೀಲಂಕಾ ಪ್ರಜೆಗಳಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಸ್ತುತ ಅವರನ್ನು ಪ್ರಶ್ನಿಸಲಾಗುತ್ತಿದೆ ಎಂದು ಹೆರಾತ್ ವಿಶೇಷ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಈಸ್ಟರ್ ಸಂಡೇ ದಾಳಿ ಬಗ್ಗೆ ಮುಂಚಿತವಾಗಿ ತಿಳಿಸಿದ್ದ ಭಾರತ: ಭಯೋತ್ಪಾದಕ ದಾಳಿ ಸಾಧ್ಯತೆಗಳ ಬಗ್ಗೆ ಭಾರತವು ಮಾಹಿತಿ ನೀಡಿದೆ ಎಂದು ಕೆಲ ವರದಿಗಳು ಹೇಳಿವೆ. 2019ರ ಈಸ್ಟರ್ ಸಂಡೇ ಬಾಂಬ್ ಸ್ಫೋಟದ ಮುಂಚೆಯೂ ಭಾರತ ಆ ಬಗ್ಗೆ ಶ್ರೀಲಂಕಾಗೆ ನಿಖರ ಮಾಹಿತಿ ನೀಡಿತ್ತು. ಆದರೆ ಲಂಕಾ ಭದ್ರತಾ ಪಡೆಗಳು ತಕ್ಷಣ ಕಾರ್ಯಾಚರಣೆ ನಡೆಸಲು ವಿಫಲವಾಗಿದ್ದರಿಂದ ಭಯೋತ್ಪಾದಕರು ಅತಿದೊಡ್ಡ ದಾಳಿ ಮಾಡಲು ಸಾಧ್ಯವಾಗಿತ್ತು.

"ಈ ತಿಂಗಳ ಆರಂಭದಲ್ಲಿ ಇಸ್ರೇಲಿ ಪ್ರಜೆಗಳ ಮೇಲೆ ಸಂಭಾವ್ಯ ದಾಳಿಯ ಬಗ್ಗೆ ಶ್ರೀಲಂಕಾದ ಅಧಿಕಾರಿಗಳು ವಿದೇಶಿ ಗುಪ್ತಚರ ಸಂಸ್ಥೆಗಳಿಂದ ಮಾಹಿತಿ ಪಡೆದಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿಯೂ ಇದೇ ರೀತಿಯ ಮಾಹಿತಿಗಳು ಬಂದಿದ್ದವು ಎಂದು ಅವರು ಹೇಳಿದರು" ಎಂದು ಶ್ರೀಲಂಕಾದ ಡೈಲಿ ಮಿರರ್ ವರದಿ ಮಾಡಿದೆ.

ಮಾಹಿತಿಯ ನಿಖರತೆ ಸಾಬೀತಾಗುವವರೆಗೆ ಇದನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಮಾಹಿತಿ ಬಂದ ಕೂಡಲೇ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ ಎಂದು ಅವರು ಪ್ರತಿಪಾದಿಸಿದರು. ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಸಾರ್ವಜನಿಕರಿಗೆ ಮನವಿ ಮಾಡಿದ ಅವರು, ಪ್ರವಾಸಿಗರನ್ನು ರಕ್ಷಿಸಲು ಸಮಗ್ರ ಭದ್ರತಾ ಕ್ರಮಗಳು ಜಾರಿಯಲ್ಲಿವೆ ಎಂದು ಭರವಸೆ ನೀಡಿದರು.

ಶ್ರೀಲಂಕಾದ ಕರಾವಳಿ ಪ್ರದೇಶದ ಪ್ರವಾಸಿ ಸ್ಥಳಗಳಲ್ಲಿ ಯುಎಸ್​ ನಾಗರಿಕರ ಮೇಲೆ ಭಯೋತ್ಪಾದಕ ದಾಳಿಗಳು ನಡೆಯಬಹುದು ಎಂದು ಯುನೈಟೆಡ್ ಸ್ಟೇಟ್ಸ್ ಬುಧವಾರ ಎಚ್ಚರಿಸಿದೆ. ಇಸ್ರೇಲಿ ನಾಗರಿಕರು ತಕ್ಷಣವೇ ಅರುಗಮ್ ಕೊಲ್ಲಿ ಮತ್ತು ಶ್ರೀಲಂಕಾದ ದಕ್ಷಿಣ ಮತ್ತು ಪಶ್ಚಿಮ ಕರಾವಳಿ ಪ್ರದೇಶಗಳನ್ನು ತೊರೆಯುವಂತೆ ಇಸ್ರೇಲ್​ನ ರಾಷ್ಟ್ರೀಯ ಭದ್ರತಾ ಮಂಡಳಿ (ಎನ್ಎಸ್​ಸಿ) ಕರೆ ನೀಡಿದೆ.

ಇದನ್ನೂ ಓದಿ : ಶೇಖ್ ಹಸೀನಾ ಪಕ್ಷದ ವಿದ್ಯಾರ್ಥಿ ಸಂಘಟನೆ ನಿಷೇಧಿಸಿದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ

ABOUT THE AUTHOR

...view details