ಕರ್ನಾಟಕ

karnataka

ETV Bharat / international

ಜೈಲಿನಲ್ಲಿ ಕುಟುಂಬಸ್ಥರು, ವಕೀಲರನ್ನು ಭೇಟಿಯಾಗದಂತೆ ಇಮ್ರಾನ್​ ಖಾನ್​ಗೆ ನಿರ್ಬಂಧ

ಜೈಲಿನಲ್ಲಿ ಕುಟುಂಬಸ್ಥರು ಮತ್ತು ಪಕ್ಷದ ನಾಯಕರನ್ನು ಭೇಟಿಯಾಗದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ರಿಗೆ ನಿರ್ಬಂಧ ಹೇರಲಾಗಿದೆ.

By ANI

Published : 4 hours ago

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (ANI)

ರಾವಲ್ಪಿಂಡಿ: ಅಕ್ಟೋಬರ್ 18 ರವರೆಗೆ ಕುಟುಂಬ ಸದಸ್ಯರು, ವಕೀಲರು ಮತ್ತು ಪಕ್ಷದ ನಾಯಕರನ್ನು ಭೇಟಿಯಾಗದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್ ಇ-ಇನ್ಸಾಫ್ (ಪಿಟಿಐ) ಸ್ಥಾಪಕ ಇಮ್ರಾನ್ ಖಾನ್​ರಿಗೆ ನಿಷೇಧ ಹೇರಲಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಪಾಕಿಸ್ತಾನದ ಪಂಜಾಬ್ ಸರ್ಕಾರವು ಇಮ್ರಾನ್​ ವಿರುದ್ಧ ಕಠಿಣ ನಿರ್ಬಂಧಗಳನ್ನು ವಿಧಿಸಿದ್ದು, ಅವರು ಬಂದಿಯಾಗಿರುವ ರಾವಲ್ಪಿಂಡಿಯ ಅಡಿಯಾಲಾ ಜೈಲಿನೊಳಗೆ ಯಾವುದೇ ಸಭೆ ನಡೆಸದಂತೆಯೂ ನಿಷೇಧಿಸಲಾಗಿದೆ. ಖಾನ್ ಸೇರಿದಂತೆ ಅಡಿಯಾಲಾ ಜೈಲಿನ ಇತರ ಎಲ್ಲಾ ಕೈದಿಗಳಿಗೆ ಈ ನಿಷೇಧ ಅನ್ವಯಿಸುತ್ತದೆ ಎಂದು ಎಆರ್​ವೈ ನ್ಯೂಸ್ ವರದಿ ಮಾಡಿದೆ. ಭದ್ರತಾ ಕಾರಣಗಳಿಗಾಗಿ ಇಮ್ರಾನ್ ಖಾನ್ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.

ಅಕ್ಟೋಬರ್ 15 ರಿಂದ 16 ರವರೆಗೆ ಇಸ್ಲಾಮಾಬಾದ್​ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಒಕ್ಕೂಟದ (ಎಸ್ ಸಿಒ) ಶೃಂಗಸಭೆಯ ಹಿನ್ನೆಲೆಯಲ್ಲಿ ಜೈಲಿನ ಭದ್ರತೆಯನ್ನು ಹೆಚ್ಚಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಅಡಿಯಾಲಾ ಜೈಲಿನಲ್ಲಿ ಸಭೆಗಳನ್ನು ನಿಷೇಧಿಸಿರುವುದು ಇದೇ ಮೊದಲಲ್ಲ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಈ ಹಿಂದೆ ಮಾರ್ಚ್​ನಲ್ಲಿ 2 ವಾರಗಳ ಕಾಲ ಇಂಥದೇ ನಿಷೇಧ ಹೇರಲಾಗಿತ್ತು.

ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ)ಯು ಈ ವರ್ಷದ ಆರಂಭದಲ್ಲಿ ಈ ಜೈಲಿನಿಂದ ಹ್ಯಾಂಡ್ ಗ್ರೆನೇಡ್ ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ವಶಪಡಿಸಿಕೊಂಡಿತ್ತು. ಅಡಿಯಾಲಾ ಜೈಲಿನಲ್ಲಿ ಇಂಥ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. 2023 ರ ನವೆಂಬರ್​ನಲ್ಲಿ ಜೈಲಿನಿಂದ ಕೇವಲ 1 ಕಿ.ಮೀ ದೂರದಲ್ಲಿರುವ ಅಡಿಯಾಲಾ ರಸ್ತೆಯ ಬಳಿ ಸ್ಫೋಟಕ ಸಾಧನಗಳಿದ್ದ ಚೀಲವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ರಾಜಧಾನಿ ಇಸ್ಲಾಮಾಬಾದ್​ನಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್ ಅವಳಿ ನಗರಗಳಲ್ಲಿ ಮೊಬೈಲ್ ಫೋನ್ ಸೇವೆಗಳನ್ನು ಮೂರನೇ ದಿನವೂ ಸ್ಥಗಿತಗೊಳಿಸಲಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವು ಇಸ್ಲಾಮಾಬಾದ್ ಮತ್ತು ಲಾಹೋರ್​ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ನ್ಯಾಯಾಂಗದ ಸ್ವಾತಂತ್ರ್ಯ ಕಾಪಾಡುವಂತೆ ಆಗ್ರಹಿಸಿ ಪ್ರತಿಭಟನೆ ಆರಂಭಿಸುವಂತೆ ಪಿಟಿಐ ಅಕ್ಟೋಬರ್ 1 ರಂದು ಹೊಸದಾಗಿ ಕರೆ ನೀಡಿದೆ.

ಇದನ್ನೂ ಓದಿ : ಕರಾಚಿಯಲ್ಲಿ ಆತ್ಮಾಹುತಿ ದಾಳಿ: ಇಬ್ಬರು ಚೀನಿಯರು ಸೇರಿ ಮೂವರು ಸಾವು

ABOUT THE AUTHOR

...view details