Gastric Problem Solution:ನಮ್ಮಲ್ಲಿ ಅನೇಕರು ಗ್ಯಾಸ್ಟ್ರಿಕ್ ಮತ್ತು ಆ್ಯಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ಪರಿಣಾಮವಾಗಿ ಅವರಿಗೆ ಎದೆನೋವು ಮತ್ತು ಹೃದಯ ಉರಿಯುವ ಅನುಭವವಾಗುತ್ತದೆ. ಇದು ಅವರ ಆತಂಕಕ್ಕೆ ಕಾರಣವಾಗಬಹುದು. ಹಾಗಾದರೆ, ಈ ಸಮಸ್ಯೆ ಏಕೆ ಕಾಡುತ್ತದೆ? ಇದಕ್ಕೆ ಯಾವ ರೀತಿಯ ಆಹಾರಗಳನ್ನು ಸೇವಿಸುವುದು ಒಳ್ಳೆಯದು? ಈ ಸಮಸ್ಯೆ ಕಡಿಮೆ ಮಾಡಲು ಏನು ಮಾಡಬೇಕು ಎನ್ನುವ ಬಗ್ಗೆ ಖ್ಯಾತ ಪೌಷ್ಟಿಕತಜ್ಞೆ ಡಾ. ಜಾನಕಿ ಶ್ರೀನಾಥ್ ವಿವರವಾಗಿ ತಿಳಿಸಿದ್ದಾರೆ.
ಬ್ಯಾಕ್ಟೀರಿಯಾದ ಸೋಂಕು ಮತ್ತು ಅಧಿಕ ಪಿಹೆಚ್ ಲೋಡಿಂಗ್ ಹಾಗೂ ಕೆಲಸ ಒತ್ತಡದಿಂದಲೂ ಕೂಡ ಈ ಸಮಸ್ಯೆ ಉಂಟಾಗಬಹುದು. ಮಸಾಲೆಯುಕ್ತ ಮತ್ತು ಹೆಚ್ಚು ಎಣ್ಣೆ ಇರುವ ಆಹಾರ ಜೊತೆಗೆ ಬಿರಿಯಾನಿಯಂತಹ ಹೆಚ್ಚಿನ ಪ್ರೋಟೀನ್ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಡಾ. ಜಾನಕಿ ಶ್ರೀನಾಥ್ ವಿವರಿಸುತ್ತಾರೆ.
ಈ ಆಹಾರವನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಪ್ರಮಾಣದ ಆಮ್ಲಗಳು ಬಿಡುಗಡೆಯಾಗುತ್ತವೆ. ಅಂತಹ ಆಹಾರವನ್ನು ಆಗಾಗ್ಗೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಮತ್ತು ಎದೆ ನೋವು ಕೂಡ ಉಂಟಾಗುತ್ತದೆ. ಸಮಯಕ್ಕೆ ಸರಿಯಾಗಿ ಊಟ ಮಾಡದಿದ್ದರೂ ಎದೆ ನೋವು, ಉರಿ ಉಂಟಾಬಹುದು. ಆದ್ರೂ ಕೂಡ ಕೆಲವು ಪರೀಕ್ಷೆಗಳ ಮೂಲಕ ಈ ಸಮಸ್ಯೆಗೆ ಕಾರಣವನ್ನು ತಿಳಿಯಬಹುದು. ಆಹಾರದಲ್ಲಿ ಬದಲಾವಣೆಗಳನ್ನು ಮಾಡುವುದು ಅಗತ್ಯ ಎಂದು ವೈದ್ಯರು ತಿಳಿಸುತ್ತಾರೆ.
''ನೀವು ಹೆಚ್ಚು ಮೆಣಸಿನಕಾಯಿ, ಗರಂ ಮಸಾಲ ಮತ್ತು ಕಾಫಿ ಸೇವಿಸಬಾರದು. ಅಲ್ಲದೆ, ಎಣ್ಣೆ, ಪ್ರೋಟೀನ್ ಭರಿತ ಮಟನ್, ಚಿಕನ್, ಗ್ರೇವಿ ಕರಿ ಮತ್ತು ಮಸಾಲ ಕರಿಯಂತಹ ಹೆಚ್ಚು ಆಹಾರ ಪದಾರ್ಥಗಳನ್ನು ಸೇವಿಸಬಾರದು. ಈ ರೀತಿಯ ಆಹಾರ ತಿಂದರೆ, ಆಹಾರಗಳಲ್ಲಿರುವ ಹೆಚ್ಚಿನ ಕೊಬ್ಬಿನ ಅಂಶವು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ. ಹೆಚ್ಚುವರಿ ಆಮ್ಲ ಉತ್ಪತ್ತಿಯಾಗುತ್ತದೆ. ಎದೆ ನೋವು ಉಂಟಾಗುತ್ತದೆ. ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಬದಲಾವಣೆಗಳ ಮೂಲಕ ಈ ಸಮಸ್ಯೆಯನ್ನು ಪರಿಹರಿಸಬಹುದು.''
-ಡಾ. ಜಾನಕಿ ಶ್ರೀನಾಥ್, ಪೌಷ್ಟಿಕತಜ್ಞೆ
ತಾಜಾ ಆಹಾರ ಸೇವಿಸಿ:ಯಕೃತ್ತು ಮತ್ತು ಮೇದೋಜೀರಕ ಗ್ರಂಥಿಯಲ್ಲಿ ಸಾಕಷ್ಟು ಕೊಬ್ಬು ಇದ್ದರೂ ಅದು ಸುಲಭವಾಗಿ ಜೀರ್ಣವಾಗುವುದಿಲ್ಲ. ಹೆಚ್ಚುವರಿ ತೂಕ ಹಾಗೂ ಸೊಂಟದ ಗಾತ್ರವನ್ನು ಕಡಿಮೆ ಮಾಡಬೇಕು. ಹೀಗಾಗಿ ಶುದ್ಧ ಹಾಗೂ ತಾಜಾ ಆಹಾರವನ್ನು ಸೇವಿಸಬೇಕು. ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚು ಒತ್ತಡ ಹೇರುವುದನ್ನು ತಪ್ಪಿಸಬೇಕು. ಆಹಾರವು ಹೊಟ್ಟೆಗೆ ಪ್ರವೇಶಿಸಲು ಗುರುತ್ವಾಕರ್ಷಣೆ ಇರಲೇಬೇಕು. ಅದಕ್ಕಾಗಿಯೇ ಊಟ ಮಾಡಿದ ನಂತರ 10 ರಿಂದ 15 ನಿಮಿಷಗಳ ಕಾಲ ವಾಕಿಂಗ್ ಮಾಡಬೇಕಾಗುತ್ತದೆ ಎಂದು ಡಾ. ಜಾನಕಿ ಶ್ರೀನಾಥ್ ತಿಳಿಸುತ್ತಾರೆ.