ಕರ್ನಾಟಕ

karnataka

ETV Bharat / entertainment

'ಜಂಬೂ ಸರ್ಕಸ್' ಟ್ರೇಲರ್ ರಿಲೀಸ್: ಶೀಘ್ರದಲ್ಲೇ ಸಿನಿಮಾ ತೆರೆಗೆ - Jumboo Circus Trailer - JUMBOO CIRCUS TRAILER

ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಪ್ರವೀಣ್ ತೇಜ್ ನಟನೆಯ 'ಜಂಬೂ ಸರ್ಕಸ್'ನ ಟ್ರೇಲರ್ ಬಿಡುಗಡೆಯಾಗಿದೆ.

ಜಂಬೂ ಸರ್ಕಸ್ ಚಿತ್ರತಂಡ
ಜಂಬೂ ಸರ್ಕಸ್ ಚಿತ್ರತಂಡ (ETV Bharat)

By ETV Bharat Karnataka Team

Published : Sep 6, 2024, 10:15 AM IST

'ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ' ಹಾಗೂ 'ಹೊಂದಿಸಿ ಬರೆಯಿರಿ' ಚಿತ್ರಗಳಿಂದ ಸ್ಯಾಂಡಲ್​​ವುಡ್​​ನಲ್ಲಿ ಗುರುತಿಸಿಕೊಂಡಿರುವ ನಟ ಪ್ರವೀಣ್ ತೇಜ್. ಇದೀಗ 'ಜಂಬೂ ಸರ್ಕಸ್' ಚಿತ್ರದ ಬಿಡುಗಡೆ ಖುಷಿಯಲ್ಲಿರುವ ಇವರು ಅಫೀಶಿಯಲ್ ಟ್ರೇಲರ್ ಅನಾವರಣಗೊಳಿಸಿದ್ದಾರೆ. 'ಫ್ರೆಂಡ್ಸ್', 'ಜಾಲಿ ಡೇಸ್', 'ಕೃಷ್ಣ', 'ಬುಲ್ ಬುಲ್'ನಂತಹ ಹಿಟ್ ಚಿತ್ರಗಳ ನಿರ್ದೇಶಕ ಎಂ.ಡಿ.ಶ್ರೀಧರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಸ್ನೇಹ ಹಾಗೂ ಪ್ರೀತಿಯ ಸುತ್ತ ನಡೆಯುವ ಕಥಾಹಂದರ ಒಳಗೊಂಡ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಬಳಿಕ ಚಿತ್ರತಂಡದವರು ಈ ಚಿತ್ರದ ಅನುಭವ ಹಂಚಿಕೊಂಡರು.

ಮೊದಲು ಮಾತನಾಡಿದ ನಿರ್ದೇಶಕ ಎಂ.ಡಿ.ಶ್ರೀಧರ್, "ಆತ್ಮೀಯ ಗೆಳೆಯರಿಬ್ಬರು ಒಂದೇ ಶಾಲೆ, ಕಾಲೇಜ್‌ನಲ್ಲಿ ಓದಿ, ಒಂದೇ ಮಂಟಪದಲ್ಲಿ, ಒಂದೇ ದಿನ ಮದುವೆಯಾಗಿ, ಒಂದೇ ಏರಿಯಾದಲ್ಲಿ ಮನೆ ಮಾಡುತ್ತಾರೆ. ಇವರ ಗೆಳೆತನ ಇಷ್ಟವಿರದ ಹೆಂಡತಿಯರು ಮಕ್ಕಳನ್ನು ವೈರಿಗಳಂತೆ ಬೆಳೆಸುತ್ತಾರೆ. ಸದಾ ಕಚ್ಚಾಡುತ್ತಲೇ ಬೆಳೆದ ನಾಯಕ-ನಾಯಕಿ ಇಬ್ಬರ ನಡುವೆ ಪ್ರೀತಿ ಹೇಗೆ ಹುಟ್ಟುತ್ತದೆ ಎಂಬುದನ್ನು ಚಿತ್ರದಲ್ಲಿ ಕಾಮಿಡಿಯಾಗಿ ಹೇಳಿದ್ದೇವೆ. ಚಿತ್ರವೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇದೇ ತಿಂಗಳ ಮೂರನೇ ವಾರ ಅಥವಾ ಕೊನೆವಾರ ಬಿಡುಗಡೆ ಮಾಡುವ ಯೋಜನೆಯಿದೆ. ಕವಿರಾಜ್ ಬರೆದಿರುವ 2 ಹಾಡುಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಚೆಲ್ಲಾಟ ಚಿತ್ರದಿಂದಲೂ ಅವರು ನಮ್ಮ ಜೊತೆ ಇದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ" ಎಂದರು.

ನಂತರ ನಟಿ ಅಂಜಲಿ ಅನೀಶ್ ಮಾತನಾಡಿ, "ಸಿನಿಮಾ ಪ್ಯಾಷನ್​​ನಿಂದ ಎಂಜಾಯ್ ಮಾಡಿಕೊಂಡು ಸಿನಿಮಾ ಮಾಡಿದ್ದೇವೆ. ಚಿತ್ರದಲ್ಲಿ ನನ್ನದು ಬಜಾರಿ ಥರದ ಪಾತ್ರ. ಜಾಸ್ತಿ ಜಗಳ‌ ಮಾಡ್ತಾಳೆ. ಅವಳಮ್ಮನೇ ಆಕೆಗೆ ಜಗಳ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಅಷ್ಟೇ ಒಳ್ಳೆಯ ಹುಡುಗಿ‌ ಕೂಡ, ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ" ಎಂದು ತಿಳಿಸಿದರು.

ಸಾಹಿತಿ ಕವಿರಾಜ್ ಮಾತನಾಡಿ, "ಈಗ ಕನ್ನಡ ಪ್ರೇಕ್ಷಕ ಒಳ್ಳೆಯ ಸಂದೇಶ ನೀಡಿದ್ದಾರೆ. ಮನರಂಜನೆ ಇದ್ದರೆ ಖಂಡಿತ ಸಿನಿಮಾ‌ ಗೆಲ್ಲುತ್ತೆ. ಶ್ರೀಧರ್ ಅವರಲ್ಲಿ ಬೇರೆಯದೇ ರೀತಿ ಕಾಮಿಡಿ ಸೆನ್ಸ್ ಇದೆ. ಪ್ರವೀಣ್ ತೇಜ್​ಗೆ ಭರವಸೆಯ ನಾಯಕನಾಗುವ ಎಲ್ಲಾ ಲಕ್ಷಣಗಳಿವೆ. ನಿರ್ಮಾಪಕರೂ ತೀರ್ಥಹಳ್ಳಿ ಕಡೆಯವರು. ಎಲ್ಲರೂ ಪ್ರೀತಿಯಿಂದ ಸಿನಿಮಾ‌ ಮಾಡಿದ್ದೇವೆ. ಸಿನಿಮಾ ಹಿಟ್ ಆಗಬೇಕು" ಎಂದರು.

ಕಾರ್ಯಕಾರಿ ನಿರ್ಮಾಪಕಿ ಸುಪ್ರೀತಾ ಶೆಟ್ಟಿ ಮಾತನಾಡಿ, "ನಿರ್ಮಾಪಕ ಸುರೇಶ್ ಸಿನಿಮಾ ಬಗ್ಗೆ ಪ್ರೀತಿ ಇಟ್ಟಿರುವ ವ್ಯಕ್ತಿ. ನಾವು ಅವರ ಜೊತೆ ನಿಂತಿದ್ದೇವೆ. ಸೀರಿಯಲ್​ಗೆ ಕಥೆ ಮಾಡುವಾಗ ಹೊಳೆದ ಕಾನ್ಸೆಪ್ಟ್ ಇದು. ಪ್ಯಾಮಿಲಿ ಒರಿಯಂಟೆಂಡ್ ಚಿತ್ರ. ಒಳ್ಳೆಯ ಸಿನಿಮಾ‌ ಮಾಡಿರುವ ಈ ನಿರ್ಮಾಪಕ‌ರು ಗೆದ್ದರೆ ಇನ್ನಷ್ಟು ಚಿತ್ರ ಮಾಡಲು ಶಕ್ತಿ ಸಿಗುತ್ತದೆ" ಎಂದರು.

ಕಾಮಿಡಿ ಕಲಾವಿದೆ ನಯನಾ ಮಾತನಾಡುತ್ತಾ, "ಸಿನಿಮಾದಲ್ಲಿ ಪಾತ್ರ ಹೇಗಿದೆಯೊ ಹಾಗೇ ನಟಿಸು ಅಂದಿದ್ದರು. ನಾನು ಜಾಸ್ತಿ ಮಾತನಾಡುತ್ತೇನೆ. ಕಡಿಮೆ ಮಾತನಾಡು ಎಂದು ನಿರ್ದೇಶಕರು ಸಲಹೆ ನೀಡಿದ್ದರು. ಚಿತ್ರದಲ್ಲಿ ಸ್ನೇಹಿತರಿಗೆ ಬತ್ತಿ ಇಡೋದೇ ನಾನು. ಒಳ್ಳೆಯ ಚಿತ್ರ ಬರಲ್ಲ ಎನ್ನುವ ಮಾತಿದೆ‌. ಇದು ಪೈಸಾ ವಸೂಲ್ ಚಿತ್ರ" ಎಂದು ಭರವಸೆ ನೀಡಿದರು.

ಪ್ರವೀಣ್ ತೇಜ್, ಅಂಜಲಿ ಅಲ್ಲದೇ ಮುಖ್ಯ ಪಾತ್ರಗಳಲ್ಲಿ ಸ್ವಾತಿ, ಲಕ್ಷ್ಮೀ ಸಿದ್ದಯ್ಯ, ಅಚ್ಚುತ್ ಕುಮಾರ್, ರವಿಶಂಕರ್ ಗೌಡ, ಅವಿನಾಶ್, ಕಾಮಿಡಿ ಶೋನ ಜಗಪ್ಪ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಎ.ವಿ ಕೃಷ್ಣಕುಮಾರ್ ಕ್ಯಾಮರಾ ವರ್ಕ್ ಇದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಜಯಂತ್ ಕಾಯ್ಕಿಣಿ, ಡಾ.ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರೋದ್ಯಮದಲ್ಲಿ ತೊಡಗಿಕೊಂಡಿರುವ ಹೆಚ್.ಸಿ.ಸುರೇಶ್ ಮಹತಿ ಕಂಬೈನ್ಸ್ ಮೂಲಕ ಜಂಬೂ ಸರ್ಕಸ್ ಎಂಬ ಚಲನಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರಮೋದ್ ಶೆಟ್ಟಿ ಅವರ ಪತ್ನಿ ಸುಪ್ರೀತಾ ಶೆಟ್ಟಿ ಸಹ ನಿರ್ಮಾಪಕಿಯಾಗಿ ಕೈಜೋಡಿಸಿದ್ದಾರೆ.

ಇದನ್ನೂ ಓದಿ: ದರ್ಶನ್​ ಭೇಟಿಯಾದ ವಿಜಯಲಕ್ಷ್ಮಿ: ಜೈಲು ಮುಂದೆ ಮಹಿಳಾ ಅಭಿಮಾನಿಯ ಹೈಡ್ರಾಮಾ - Vijayalakshmi met Darshan

ABOUT THE AUTHOR

...view details