ಕರ್ನಾಟಕ

karnataka

By ETV Bharat Karnataka Team

Published : Mar 21, 2024, 7:04 AM IST

Updated : Mar 21, 2024, 7:27 AM IST

ETV Bharat / entertainment

ಎದ್ದೇಳದ 'ರಂಗನಾಯಕ': ಪ್ರೇಕ್ಷಕರಲ್ಲಿ ಕ್ಷಮೆ ಯಾಚಿಸಿದ ನಟ ಜಗ್ಗೇಶ್

ಜಗ್ಗೇಶ್​ ನಟನೆಯ 'ರಂಗನಾಯಕ' ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಹಿನ್ನಡೆ ಕಂಡಿದೆ.

Jaggesh Opens up about Ranganayaka movie failure
'ರಂಗನಾಯಕ'ನಿಗೆ ಹಿನ್ನೆಡೆ

'ಮಠ', 'ಎದ್ದೇಳು ಮಂಜುನಾಥ' ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಗುರುಪ್ರಸಾದ್. "ನಾನು ಸರಸ್ವತಿ ಪುತ್ರ ಎಂದು ಹೇಳಿಕೊಳ್ಳುವ ನಿರ್ದೇಶಕರ ತಲೆ ಖಾಲಿಯಾಗಿದೆ ಅನಿಸುತ್ತದೆ" ಎಂಬುದೀಗ ಹಲವರಿಂದ ಬರುತ್ತಿರುವ ಟೀಕೆ. ತಮ್ಮ ಸಿನಿಮಾಗಳಲ್ಲಿ ಸಮಾಜದ ಅಂಕುಡೊಂಕುಗಳನ್ನು ಲೇವಡಿ ಮಾಡುತ್ತಾ, ಹಾಸ್ಯದ ಮೂಲಕ ತಿವಿಯುತ್ತಿದ್ದ ಗುರು ಪ್ರಸಾದ್ ಅವರೇ ಈಗ ಟೀಕೆಗಳಿಗೆ ಗುರಿಯಾಗಿದ್ದಾರೆ.

ಹೌದು, ನವರಸನಾಯಕ ಜಗ್ಗೇಶ್ ಕೂಡ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಬಹಳ ವರ್ಷಗಳ ಬಳಿಕ ಜಗ್ಗೇಶ್ ಹಾಗೂ ಗುರು ಪ್ರಸಾದ್ ಮಾಡಿರುವ 'ರಂಗನಾಯಕ' ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವಿತ್ತು. ಆದರೆ ಸಿನಿಮಾಗೆ ಹಿನ್ನಡೆಯಾಗಿದೆ. ನಂಬಲಾಸಾಧ್ಯವಾದರೂ ಇದು ಸತ್ಯ. ಒಂದು ಚಿತ್ರಮಂದಿರ ಹೊರತುಪಡಿಸಿ ಸಂಪೂರ್ಣ ಬೆಂಗಳೂರು ಸುತ್ತಾಡಿದರೂ 'ರಂಗನಾಯಕ'ನ ದರ್ಶನವಾಗುವುದಿಲ್ಲ.

ಜಗ್ಗೇಶ್ ಹಾಗೂ ಗುರು ಪ್ರಸಾದ್ ಹದಿನೈದು ವರ್ಷಗಳ ನಂತರ ಜತೆಯಾಗಿ ಸಿನಿಮಾ ಮಾಡಿರುವುದು ಬೆಟ್ಟದಷ್ಟು ನಿರೀಕ್ಷೆಗೆ ಕಾರಣ. ಹಾಗಂತ ಇದೊಂದೇ ಸಂಗತಿಯಂತೂ ಅಲ್ಲ. ಗುರುಪ್ರಸಾದ್ ಚಿತ್ರದ ಬಿಡುಗಡೆಗೂ ಮುನ್ನ ಆಡಿದ ಕೆಲವು 'ಮಾತು'ಗಳೂ ಕಾರಣವಾಗಿವೆ. ಹೀಗಾಗಿ 'ರಂಗನಾಯಕ' ಮೂಲಕ ನಿಜಕ್ಕೂ ಗುರುಪ್ರಸಾದ್ ಏನನ್ನೋ‌‌ ಹೇಳ ಹೊರಟಿದ್ದಾರೆ ಎಂಬ ಭಾವನೆ ಬಹುತೇಕರಲ್ಲಿ ಮನೆ ಮಾಡಿತ್ತು.

ಆದರೆ ಮೊದಲ ದಿನದ ಮೊದಲ ಶೋ ಮುಗಿಯುವಷ್ಟರಲ್ಲೇ 'ರಂಗನಾಯಕ' ನಿರೀಕ್ಷೆ ಮುಟ್ಟಲಿಲ್ಲ ಅನ್ನೋ ಅಭಿಪ್ರಾಯ ಹಲವರಿಂದ ವ್ಯಕ್ತವಾಯಿತು. ಗುರು ಪ್ರಸಾದ್ ನಿರ್ದೇಶನದ ಬಗ್ಗೆ ಸ್ವತಃ ಜಗ್ಗೇಶ್ ಅಸಮಾಧಾನ ಹೊರಹಾಕಿರುವುದು ಗಾಂಧಿನಗರದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿದೆ‌. ಇತ್ತೀಚೆಗೆ ರಾಯರ ಸನ್ನಿಧಿಯಲ್ಲಿ ಸೋಷಿಯಲ್​ ಮೀಡಿಯಾ ಲೈವ್‌ಗೆ ಬಂದಿದ್ದ ನಟ, ಪ್ರೇಕ್ಷಕರಲ್ಲಿ ಕ್ಷಮೆ ಕೋರಿದ್ದಾರೆ.

'ರಂಗನಾಯಕ'ನಿಗೆ ಹಿನ್ನೆಡೆ

''ಮೊನ್ನೆ ಒಂದು ಚಿತ್ರ ಮಾಡ್ದೆ. ನಿಮಗೆ ನೋವಾಗಿದೆ. ನನ್ನ ತಪ್ಪಿಲ್ಲ. ನಂಬಿಕೆ ಜಾಸ್ತಿ. ಆ ಚಿತ್ರ ನನ್ನದಲ್ಲ. ನಿರ್ದೇಶಕರನ್ನು ನಂಬಿ ಕೆಲಸ ಮಾಡಿದೆ. ಆತನಿಗೆ ಒಂದು ಆಸೆಯಿತ್ತೇನೋ. ಅದರ ಪ್ರಕಾರ ನನ್ನ ಕರ್ತವ್ಯ ನಿರ್ವಹಿಸಿದ್ದಾನೆ. ಅದಕ್ಕೂ ನನಗೂ ಸಂಬಂಧವಿಲ್ಲ. ನೋವಾಗಿದ್ದರೆ ಕ್ಷಮೆ ಇರಲಿ. ಒಳ್ಳೊಳ್ಳೆ ಸಿನಿಮಾ ಕೊಟ್ಟಿದ್ದೇನೆ. ಸದ್ಯ ಯಾರದ್ದೋ ಅಪರಾಧಕ್ಕೆ ನನ್ನ ಮೇಲೆ ಬೇಸರ ಬೇಡ. ನನ್ನ ವೃತ್ತಿಯಲ್ಲಿ ಸಣ್ಣಪುಟ್ಟ ದೋಷಗಳಾಗಿದ್ದರೆ ಕ್ಷಮೆ ಇರಲಿ'' -ನಟ ಜಗ್ಗೇಶ್​​.

ಗುರು ಪ್ರಸಾದ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರು. ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿಯೇ ಸಿನಿಮಾ ಮಾಡಬೇಕಿಲ್ಲ, ಗಟ್ಟಿ ಕಥೆಯೊಂದಿದ್ದರೆ ಸಾಕು ಎಂಬ ಮಾತನ್ನು ಸಾಬೀತು ಮಾಡಿದವರು. ಜನಮೆಚ್ಚುಗೆಯ ಚಿತ್ರವನ್ನು ಕಟ್ಟಿ ನಿಲ್ಲಿಸಬಹುದು ಎಂಬುದನ್ನು ತೋರಿಸಿಕೊಟ್ಟವರು ಗುರುಪ್ರಸಾದ್. ಸಂಭಾಷಣೆಕಾರನಾಗಿರುವ ಗುರುಪ್ರಸಾದ್‌ ಅದ್ಭುತ ಮಾತುಗಾರ ಕೂಡ ಹೌದು. ತಮ್ಮ ಮಾತುಗಳಿಂದ ಎಂಥವರನ್ನೂ ಮೋಡಿ ಮಾಡಬಲ್ಲ ಸಾಮರ್ಥ್ಯ ಇವರಲ್ಲಿದೆ. ಇದಕ್ಕೆ ಪೂರಕವಾಗಿ ದ್ವಂದ್ವಾರ್ಥ ಅಂದರೆ ಕೇವಲ ಪೋಲಿ ಮಾತಲ್ಲ ಎಂಬುದನ್ನೂ ಹೇಳಿಕೊಟ್ಟವರು ಕೂಡಾ ಅವರೇ.

ಇದನ್ನೂ ಓದಿ:ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಡಬ್ಬಿಂಗ್​ ಪೂರ್ಣ: ಬಿಡುಗಡೆಗೆ ಸಿದ್ಧತೆ

ಆದರೆ ಹೊಸ ಸಿನಿಮಾದಲ್ಲಿ ಗುರುಪ್ರಸಾದ್ ಎಲ್ಲಿ ಎಡವಿದರೋ ಗೊತ್ತಿಲ್ಲ. ಪ್ರತಿಭೆಯನ್ನು ಪಕ್ಕಕ್ಕೆ ಇಟ್ಟು ತಲೆ ಹರಟೆ ಜಾಸ್ತಿ ಮಾಡಿದ್ದರ ಪರಿಣಾಮವೇ 'ರಂಗನಾಯಕ' ಸೋಲು ಕಂಡಿದೆ ಎನ್ನುವ ಮಾತು ಗಾಂಧಿನಗರದ ಮಂದಿಯದ್ದು.

ಇದನ್ನೂ ಓದಿ:ಮುಂದಿನ ತಿಂಗಳು 'ಕಾಂತಾರ ಪ್ರೀಕ್ವೆಲ್'​​ ಶೂಟಿಂಗ್​ ಶುರು: ಅದ್ಧೂರಿ ಸೆಟ್​ ನಿರ್ಮಾಣ

Last Updated : Mar 21, 2024, 7:27 AM IST

For All Latest Updates

ABOUT THE AUTHOR

...view details