ಕರ್ನಾಟಕ

karnataka

ನಾಳೆ 'ಗೌರಿ' ತೆರೆಗೆ: ಚಿತ್ರರಂಗಕ್ಕೆ ಮಗನ ಪರಿಚಯಿಸಲು ರೆಡಿಯಾದ ಇಂದ್ರಜಿತ್​ ಲಂಕೇಶ್ - Gowri

By ETV Bharat Entertainment Team

Published : Aug 14, 2024, 6:07 PM IST

ಆಗಸ್ಟ್​​ನಲ್ಲಿ ಸಿನಿ ಸುಗ್ಗಿ ಶುರುವಾಗಿದೆ. ಈಗಾಗಲೇ ದುನಿಯಾ ವಿಜಯ್​ ಅವರ ಭೀಮ ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ನಾಳೆ ಕನ್ನಡದ ಬಹುನಿರೀಕ್ಷಿತ ಚಿತ್ರಗಳಾದ 'ಗೌರಿ' ಹಾಗೂ 'ಕೃಷ್ಣಂ ಪ್ರಣಯ ಸಖಿ' ತೆರೆಗಪ್ಪಳಿಸಲಿದೆ.

Gowri team
'ಗೌರಿ' ಪೋಸ್ಟರ್ ಮತ್ತು ಕಲಾವಿದರು (Samarjit IG, ETV Bharat)

ಸದ್ಯ ಕನ್ನಡ ಚಿತ್ರರಂಗದಲ್ಲಿ 'ಭೀಮ' ಸಿನಿಮಾ ಸಖತ್​​ ಸದ್ದು ಮಾಡುತ್ತಿದೆ. ನಟ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ಕಳೆದ ಶುಕ್ರವಾರ ಬಿಡುಗಡೆ ಆಗಿದ್ದು, ಅತ್ಯುತ್ತಮ ಪ್ರದರ್ಶನ ಮುಂದುವರಿಸಿದೆ. ಥಿಯೇಟರ್​​​ಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿರೋ ನಡುವೆ ಬಂದ ಈ ಸಿನಿಮಾ ಸೂಪರ್​ ಹಿಟ್​​ ಆಗಿ ಬಾಕ್ಸ್​ ಆಫೀಸ್​​ನಲ್ಲಿ ಉತ್ತಮ ವ್ಯವಹಾರ ನಡೆಸಿದೆ. ಗೆಲುವಿನ ನಗೆ ಬೀರಿರುವ ಕನ್ನಡ ಚಿತ್ರರಂಗದಲ್ಲೀಗ ಹಲವು ಸಿನಿಮಾಗಳು ಬಿಡುಗಡೆ ಹೊಸ್ತಿಲಿನಲ್ಲಿದ್ದು, ನಾಳೆ ಬಹುನಿರೀಕ್ಷಿತ ಚಿತ್ರಗಳಾದ 'ಗೌರಿ' ಮತ್ತು 'ಕೃಷ್ಣಂ ಪ್ರಣಯ ಸಖಿ' ಚಿತ್ರಮಂದಿರ ತಲುಪಲಿದೆ.

ಪಿ.ಲಂಕೇಶ್​​ ಪುತ್ರ ಇಂದ್ರಜಿತ್ ಲಂಕೇಶ್ ಅವರು ನಿರ್ದೇಶನದ ಜೊತೆಗೆ ನಿರ್ಮಾಣ ಮಾಡಿರೋ 'ಗೌರಿ' ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ತಮ್ಮ ಈ ಬಹುನಿರೀಕ್ಷಿತ ಚಿತ್ರದ ಮೂಲಕ ಮಗ ಸಮರ್ಜಿತ್ ಲಂಕೇಶ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಈಗಾಗಲೇ ಟ್ರೇಲರ್ ಹಾಗೂ ಹಾಡುಗಳಿಂದ ಭರವಸೆ ಹುಟ್ಟಿಸಿರೋ ಗೌರಿ ಚಿತ್ರದಲ್ಲಿ ಸಮರ್ಜಿತ್ ಜೊತೆ ಸಾನ್ಯಾ ಅಯ್ಯರ್ ರೊಮ್ಯಾನ್ಸ್ ಮಾಡಿದ್ದಾರೆ. ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿರೋ ಈ ಚಿತ್ರ ಚಿತ್ರ ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಅನ್ನೋದು ನಾಳೆ ತಿಳಿಯಲಿದೆ.

ಮಗನ ಮೊದಲ ಸಿನಿಮಾ ಆಗಿರೋ ಹಿನ್ನೆಲೆಯಲ್ಲಿ ಸ್ಯಾಂಡಲ್​ವುಡ್​ನ ಸ್ಟೈಲಿಶ್​​, ಕ್ರಿಯೇಟಿವ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ರಚಾರ ಮಾಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಪ್ರೀ ರಿಲೀಸ್ ಈವೆಂಟ್​ ಅನ್ನು ಬೆಂಗಳೂರಿನ ಮಾಲ್​ ಒಂದರಲ್ಲಿ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಸಮಾರಂಭಕ್ಕೆ ಸಾಕ್ಷಿಯಾದ ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ್ದರು. ಅದಕ್ಕೂ ಮುನ್ನ ಚಿಕ್ಕ ಸುದೀಪ್​​ ಅವರು ಚಿತ್ರತಂಡಕ್ಕೆ ಶುಭ ಕೋರಿದ್ದರು.

ಸಮರ್ಜಿತ್ ಲಂಕೇಶ್ ಹಾಗೂ ಸಾನ್ಯಾ ಅಯ್ಯರ್ ಇದೇ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಅಗಿರುವ ಕಂಟೆಂಟ್​ಗಳಲ್ಲಿ ಇವರಿಬ್ಬರ ಕೆಮಿಸ್ಟ್ರಿ ವರ್ಕ್ ಔಟ್ ಆಗಿರೋದು ಗೊತ್ತಾಗುತ್ತದೆ. ಸಮರ್ಜಿತ್​​, ಸಾನ್ಯಾ ಜೊತೆಗೆ ನೀನಾಸಂ ಅಶ್ವಥ್, ಮಾನಸೀ ಸುಧೀರ್, ಸಂಪತ್‍ ಮೈತ್ರೇಯಾ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಎ.ಜೆ ಶೆಟ್ಟಿ ಮತ್ತು ಕೃಷ್ಣಕುಮಾರ್ ಅವರ ಕ್ಯಾಮರಾ ಕೈಚಳಕವಿದೆ.​ ಮಾಸ್ತಿ ಮಂಜು, ರಾಜಶೇಖರ್, ಮಧು ಸಂಭಾಷಣೆ ಬರೆದಿದ್ದಾರೆ. ರವಿವರ್ಮಾ, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ನಾಳೆ ಗೋಲ್ಡನ್​​ ಸ್ಟಾರ್ ಗಣೇಶ್ ಅವರ​ ಕೃಷ್ಣಂ ಪ್ರಣಯ ಸಖಿ ಜೊತೆ ಗೌರಿ ಕೂಡ ಬಿಡುಗಡೆ ಆಗಲಿದ್ದು, ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಸಿಗಲಿದೆ.

ನಾಳೆ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸಿನಿಮಾಗಳು:

  • ಗೌರಿ (ಕನ್ನಡ)
  • ಕೃಷ್ಣಂ ಪ್ರಣಯ ಸಖಿ (ಕನ್ನಡ)
  • ಸ್ತ್ರೀ 2 (ಬಾಲಿವುಡ್​)
  • ಖೇಲ್ ಖೇಲ್ ಮೇ (ಬಾಲಿವುಡ್​)
  • ವೇದಾ (ಬಾಲಿವುಡ್​)
  • ತಂಗಲನ್ (ತಮಿಳು)
  • ಡಬಲ್ ಐಸ್ಮಾರ್ಟ್ ಶಂಕರ್ (ತೆಲುಗು)
  • ಮಿಸ್ಟರ್ ಬಚ್ಚನ್ (ತೆಲುಗು)
  • ನೂನಕುಝಿ (ಮಲಯಾಳಂ)
  • ರಘು ತಾತಾ (ತೆಲುಗು).

ಇದನ್ನೂ ಓದಿ:ಅಂದು 'ಮುಂಗಾರು ಮಳೆ' ಇಂದು 'ಕೃಷ್ಣಂ ಪ್ರಣಯ ಸಖಿ': ಬಾಕ್ಸ್ ಆಫೀಸ್‌ನಲ್ಲಿ 'ಗಣಿ'ಗಾರಿಕೆಗೆ ರೆಡಿ - Krishnam Pranaya Sakhi

ABOUT THE AUTHOR

...view details