ಕರ್ನಾಟಕ

karnataka

ಅಮೋಘ ನಿರೂಪಣಾ ಶೈಲಿಯ ಮೂಲಕ ಕನ್ನಡ ಭಾಷೆ ಬೆಳಗಿಸಿದ ಅಪರ್ಣಾ - Aparna

By ETV Bharat Karnataka Team

Published : Jul 12, 2024, 11:02 AM IST

ಕಳೆದೆರಡು ವರ್ಷಗಳಿಂದ ನಾಲ್ಕನೇ ಹಂತದ ಶ್ವಾಸಕೋಶದ ಕ್ಯಾನ್ಸರ್​ ವಿರುದ್ಧ ಛಲಬಿಡದೆ ಹೋರಾಡುತ್ತಿದ್ದ ನಟಿ ಅಪರ್ಣಾ ಗುರುವಾರ ಇಹಲೋಕ ತ್ಯಜಿಸಿದ್ದಾರೆ.

Famous Kannada Anchor and actor Aparna died by Lung cancer
ಅಪರ್ಣಾ (ETV Bharat)

ಬೆಂಗಳೂರು:ಕಾರ್ಯಕ್ರಮಗಳ ನಿರೂಪಣೆ ಎಂದರೆ ಅಪರ್ಣಾ ಎನ್ನುವಷ್ಠರ ಮಟ್ಟಿಗೆ ರಾಜ್ಯದಲ್ಲಿ ಮನೆ ಮಾತಾದವರು ಅಪರ್ಣಾ. ತಮ್ಮ ಸ್ಪಷ್ಟ, ಶುದ್ಧ ಕನ್ನಡ ಭಾಷೆಯ ಅಮೋಘ ನಿರೂಪಣಾ ಶೈಲಿಯಿಂದ ಅಪಾರ ಜನಮನ್ನಣೆ ಗಳಿಸಿದರು. ಮೂಲತಃ ಚಿಕ್ಕಮಗಳೂರಿನ ಪಂಚನಹಳ್ಳಿಯವರಾದ ಅಪರ್ಣಾ 1966ರ ಅಕ್ಟೋಬರ್​ನಲ್ಲಿ ಜನಿಸಿದರು. ನಾರಾಯಣ ಸ್ವಾಮಿ-ಪದ್ಮಾವತಿ ದಂಪತಿಯ ಮಗಳಾದ ಇವರು ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿ. ಕುಮಾರಪಾರ್ಕ್​ನಲ್ಲಿ ಪ್ರಾಥಮಿಕ ಮತ್ತು ಎಂಇಎಸ್​ ಕಾಲೇಜಿನಲ್ಲಿ ಸಮಾಜಶಾಸ್ತ್ರ ಪದವಿ ಶಿಕ್ಷಣ ಪಡೆದಿದ್ದರು.

ಅಪರ್ಣಾ (ETV Bharat)

ಅರ್ಪಣಾ ಅವರ ತಂದೆ ನಾರಾಯಣ ಸ್ವಾಮಿ ಪತ್ರಿಕೆಯೊಂದರಲ್ಲಿ ಸಿನಿಮಾ ಪುರವಣಿ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಾರಾಯಣ್​ ಸ್ವಾಮಿ ಅವರಿಗೆ ಖ್ಯಾತ ಸಿನಿಮಾ ನಿರ್ದೇಶಕ ಪುಟ್ಟಣ್ಣ ಕಣಗಾಲ್​ ಪರಿಚಯವಿತ್ತು. ಈ ಹಿನ್ನೆಲೆಯಲ್ಲಿ ಕಣಗಲ್‌ ಅವರು ಅಪರ್ಣಾ ಪ್ರತಿಭೆ ಗುರುತಿಸಿ ಸಿನಿಮಾದಲ್ಲಿ ಅವಕಾಶ ನೀಡಿದ್ದರು. ಹೀಗೆ, 1984ರಲ್ಲಿ 'ಮಸಣದ ಹೂವು' ಚಿತ್ರದಿಂದ ತಮ್ಮ ಸಿನಿಮಾ ಪಯಣ ಆರಂಭಿಸಿದ ಅಪರ್ಣಾ ನಂತರದಲ್ಲಿ 'ಇನ್ಸ್​​ಪೆಕ್ಟರ್​ ವಿಕ್ರಂ', 'ನಮ್ಮೂರ ರಾಜ', 'ಸಾಹನ ವೀರ', 'ಡಾಕ್ಟರ್​ ಕೃಷ್ಟ' ಸೇರಿದಂತೆ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದರು. ಹಿರಿಯ ನಟರಾದ ವಿಷ್ಣುವರ್ಧನ್​, ಅಂಬರೀಶ್, ರವಿಚಂದ್ರನ್​, ಟೈಗರ್​ ಪ್ರಭಾಕರ್​ ಹಾಗು ಶಿವ ರಾಜ್‌ಕುಮಾರ್​​ ಸೇರಿದಂತೆ ಹಲವು ನಟರೊಂದಿಗೂ ಬೆಳ್ಳಿತೆರೆಯಲ್ಲಿ ಮಿಂಚಿದರು. ಇವರ ನಟನೆಯ ಕೊನೆಯ ಚಿತ್ರ 'ಗ್ರೇ ಗೇಮ್ಸ್'​ ಆಗಿತ್ತು.

ಕನ್ನಡ ಭಾಷಾ ಸೌಂದರ್ಯ ಹೆಚ್ಚಿಸಿದ ನಿರೂಪಕಿ:1993ರಿಂದ 2010ರವರೆಗೆ ರೇಡಿಯೋ ಆರ್​​ಜೆ ಆಗಿಯೂ ಕಾರ್ಯ ನಿರ್ವಹಿಸಿದರು. 90ರ ದಶಕದಲ್ಲಿ ದೂರದರ್ಶನ, ಆಕಾಶವಾಣಿ ಕಾರ್ಯಕ್ರಮಗಳ ನಿರೂಪಣಾ ಶೈಲಿ ಅಪರ್ಣಾ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟವು. ಸರ್ಕಾರದ ಕಾರ್ಯಕ್ರಮಗಳು, ವಿವಿಧ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಅಪರ್ಣಾ ನಿರೂಪಣೆಯೇ ಇರುತ್ತಿತ್ತು.

ಅಪರ್ಣಾ (ETV Bharat)

ಸತತ 8 ಗಂಟೆ ಕಾರ್ಯಕ್ರಮ ನಿರೂಪಣೆ!: ನಿರೂಪಣೆ ಎಂದರೆ ಕೇವಲ ಮಾತಲ್ಲ; ಕನ್ನಡದ ಕಂಪು, ಸಾಹಿತ್ಯ ಧಾರೆ ಎಂದು ಭಾಷಾ ಶ್ರೀಮಂತಿಕೆಯನ್ನು ತೋರಿಸಿಕೊಟ್ಟವರು ಅಪರ್ಣಾ. ಇದೇ ಕಾರಣಕ್ಕೆ ನಿರೂಪಣಾ ಲೋಕದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಕೀರ್ತಿ ಅವರದಾಯಿತು. 1998ರಲ್ಲಿ ದೀಪಾವಳಿ ಕಾರ್ಯಕ್ರಮದಲ್ಲಿ ಸತತ 8 ಗಂಟೆ ಕಾಲ ನಿರೂಪಣೆ ನಿರ್ವಹಿಸಿದ ದಾಖಲೆಯೂ ಅಪರ್ಣಾ ಹೆಸರಿನಲ್ಲಿದೆ.

ನಮ್ಮ ಮೆಟ್ರೋದಲ್ಲಿ ಅಪರ್ಣಾ ಧ್ವನಿ: ಇನ್ನು, ಕಿರುತೆರೆಯ 'ಮೂಡಲಮನೆ', 'ಮುಕ್ತ' ಸೇರಿದಂತೆ ಹಲವು ಧಾರವಾಹಿಗಳಲ್ಲಿ ಜನರಿಗೆ ಮತ್ತಷ್ಟು ಹತ್ತಿರವಾದರು. ಶುದ್ಧ ಕನ್ನಡ ಸಾಹಿತ್ಯದ ಗಾಂಭೀರ್ಯದೊಂದಿಗೆ ಹಾಸ್ಯವೂ ನಟಿಯಲ್ಲಿದೆ ಎಂಬುದು ಪರಿಚಯವಾಗಿದ್ದು, ಕಿರುತೆರೆಯ 'ಮಜಾ ಟಾಕೀಸ್'​ನಲ್ಲಿ. ಮೊದಲ ಬಾರಿಗೆ ಕಾಮಿಡಿ ಶೋನಲ್ಲಿ ಅಪರ್ಣಾರನ್ನು ಕಂಡ ಜನರು ಹುಬ್ಬೇರಿಸಿದ್ದುಂಟು. ಈ ಕಾರ್ಯಕ್ರಮದಲ್ಲಿ ವರಲಕ್ಷ್ಮಿಯಾಗಿ ಜನರ ಮನಸ್ಸು ಗೆದ್ದರು. ಈ ನಡುವೆ ಕನ್ನಡದ ರಿಯಾಲಿಟಿ ಶೋ 'ಬಿಗ್​ಬಾಸ್'​ ಮೊದಲ ಸೀಸನ್​ನಲ್ಲೂ ಅಪರ್ಣಾ ಸ್ಪರ್ಧಿಯಾಗಿ ರಾಜ್ಯದ ಜನರ ಗಮನ ಸೆಳೆದಿದ್ದರು. ಬೆಂಗಳೂರಿನ 'ನಮ್ಮ ಮೆಟ್ರೋ'ಗೂ ಧ್ವನಿಯಾದರು.

ಆದರೆ, ಕಳೆದೆರಡು ವರ್ಷಗಳಿಂದ ನಾಲ್ಕನೇ ಹಂತದ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾದರು. ಛಲಬಿಡದೆ ಹೋರಾಡುತ್ತಲೇ ಇಹಲೋಕ ತ್ಯಜಿಸಿದರು. ಅಪರ್ಣಾ ನಟಿ, ನಿರೂಪಕಿ ಮಾತ್ರವೇ ಅಲ್ಲ, ಸೃಜನಶೀಲ ಮನಸ್ಸಿನ ಕನ್ನಡದ ಶ್ರೇಷ್ಠ ಕುಡಿ.

ಇದನ್ನೂ ಓದಿ: ಖ್ಯಾತ ನಿರೂಪಕಿ ಅಪರ್ಣಾ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ

ABOUT THE AUTHOR

...view details