ಈ ಸಿನಿಮಾ ಎಂಬ ಕ್ರಿಯೇಟಿವ್ ಜಗತ್ತಿನಲ್ಲಿ ಸಕ್ಸಸ್ ಆಗೋದು ಸುಲುಭದ ಕೆಲಸವಲ್ಲ. ತಾನು ಎಷ್ಟೇ ಕ್ರಿಯೇಟಿವ್ ಆಗಿದ್ರೂ, ಹಣಕಾಸು ವಿಚಾರಕ್ಕೆ ಪ್ರಾಣವನ್ನ ಕಳೆದುಕೊಂಡಿರುವ ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಚಿತ್ರರಂಗ ನೋಡಿದೆ. ಇದೀಗ ಕಿರುತೆರೆ ಹಾಗು 'ಅಶೋಕ ಬ್ಲೇಡ್' ಸಿನಿಮಾ ನಿರ್ದೇಶಕ ವಿನೋದ್ ದೋಂಡಾಲೆ ಆತ್ಮಹತ್ಯೆ ಮಾಡಿಕೊಂಡಿದ್ದು, ವಿಚಾರ ಆಪ್ತರು ಹಾಗು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಷ್ಟಕ್ಕೂ ವಿನೋದ್ ದೋಂಡಾಲೆ ಆತ್ಮಹತ್ಯೆ ಕಾರಣ ಏನು ಎಂಬುದರ ಬಗ್ಗೆ ವಿನೋದ್ ಅವರ ಆಪ್ತರಲ್ಲಿ ಒಬ್ಬರಾಗಿರುವ ಸಂಭಾಷಣೆಗಾರ ವಿರೇಂದ್ರ ಮಲ್ಲಣ್ಣ ಮಾತನಾಡಿದ್ದಾರೆ. "ನಿರ್ದೇಶಕ ವಿನೋದ್ ಸಾವಿಗೆ ಕಾರಣ ಅವರೇ ಶುರು ಮಾಡಿದ ಅಶೋಕ ಬ್ಲೇಡ್ ಎಂಬ ಸಿನಿಮಾ. ಆ ಚಿತ್ರ ಅವರ ಸಾವಿಗೆ ಕಾರಣ ಆಗಿದೆ. ಪಿ.ಶೇಷಾದ್ರಿ ಅವರ ಜೊತೆ 8 ವರ್ಷ ಸಿನಿಮಾ, ಧಾರಾವಾಹಿಗಳನ್ನು ಮಾಡಿ ನಂತರ ಮುಕ್ತ ಧಾರಾವಾಹಿಗೆ ಟಿ.ಎನ್. ಸೀತಾರಾಮ್ ಸರ್ ಜೊತೆಯಾದವರು ವಿನೋದ್. ಅಲ್ಲಿಂದ ನರಹರಿರಾವ್, ದೀಪಕ್ ಮತ್ತು ವಿನೋದ್ ಸೇರಿ ತಮ್ಮದೇ ಪ್ರೊಡಕ್ಷನ್ ಹೌಸ್ ಕಟ್ಟಿದರು. ಒಬ್ಬ ಕ್ಯಾಮರಾಮ್ಯಾನ್, ಒಬ್ಬ ನಿರ್ದೇಶಕ, ಮತ್ತೊಬ್ಬ ಪ್ರೊಡಕ್ಷನ್ ಮ್ಯಾನೇಜರ್. ಈ ಕಾಂಬಿನೇಶನ್ ವರ್ಕ್ ಆಗುವ ಸಮಯದಲ್ಲಿ ದೀಪಕ್ ಇಲ್ಲವಾದರು." ಎಂದು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.