ಫತೇಪುರ್, ಉತ್ತರಪ್ರದೇಶ: ಒಂದೂವರೆ ತಿಂಗಳ ಅವಧಿಯಲ್ಲಿ ಯುವಕನೊಬ್ಬನಿಗೆ ಆರು ಬಾರಿ ಹಾವು ಕಚ್ಚಿರುವ ಅಚ್ಚರಿಯ ಪ್ರಕರಣ ಉತ್ತರಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆದಿದೆ. ಯುವಕನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೂ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದೀಗ ತನಗೆ ಹಾವು 9 ಬಾರಿ ಕಚ್ಚುತ್ತದೆ ಎಂದು ಕನಸು ಕಂಡಿದ್ದು, 9ನೇ ಬಾರಿ ತನ್ನನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಾಗಲ್ಲ ಎಂದು ಯುವಕ ಹೇಳಿಕೊಂಡಿದ್ದಾನೆ.
ಜಿಲ್ಲೆಯ ಮಾಲ್ವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಸೌರಾ ಗ್ರಾಮದ ನಿವಾಸಿ ವಿಕಾಸ್ ದ್ವಿವೇದಿ ಅವರು 34 ದಿನಗಳಲ್ಲಿ ಆರು ಬಾರಿ ಹಾವು ಕಚ್ಚಿಸಿಕೊಂಡಿದ್ದಾರೆ. ಇದು ಅಚ್ಚರಿಯಾದರೂ ಸತ್ಯ. ಹಾವು ಕಡಿತದ ಹಿನ್ನೆಲೆಯಲ್ಲಿ ವಿಕಾಸ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನಗೆ ಹಾವು ಕಚ್ಚಿದಾಗಲೆಲ್ಲಾ ಅದು ಶನಿವಾರ ಅಥವಾ ಭಾನುವಾರವೇ ಆಗಿದೆ ಎಂದು ವಿಕಾಸ್ ದ್ವಿವೇದಿ ಹೇಳಿಕೊಂಡಿದ್ದಾನೆ. ಪ್ರತಿ ಬಾರಿ ಹಾವು ಕಡಿತಕ್ಕೂ ಮುಂಚೆಯೇ ಇದನ್ನು ಅವರು ಅರಿತುಕೊಳ್ಳುತ್ತಾರೆ. ಇದೀಗ ಹಾವು ತನ್ನ ಕನಸಿನಲ್ಲಿ ಬಂದು 9 ಬಾರಿ ಕಚ್ಚುತ್ತದೆ ಎಂದು ಹೇಳಿದ್ದು, 9ನೇ ಬಾರಿಗೆ ಚಿಕಿತ್ಸೆಯಾಗಲಿ, ಮಂತ್ರಾಕ್ಷತೆಯಾಗಲಿ ಹೀಗೆ ಯಾವುದರಿಂದಲೂ ಸಾಧ್ಯವಾಗಲ್ಲ ಎಂದು ವಿಕಾಸ್ ದ್ವಿವೇದಿ ಹೇಳಿಕೊಂಡಿದ್ದಾರೆ. ಹೀಗಾಗಿ ವಿಕಾಸ್ ಭಯವಾಗುತ್ತಿದೆ ಮತ್ತು ಏನಾದರೂ ಅಹಿತಕರ ಲಕ್ಷಣಗಳು ಕಂಡುಬರುತ್ತದೆ ಎಂದು ಹೇಳುತ್ತಿರುತ್ತಾನೆ ಎಂದು ಕುಟುಂಬ ಸದಸ್ಯರು ಸಹ ತಿಳಿಸಿದ್ದಾರೆ.