ಕರ್ನಾಟಕ

karnataka

ರಾಜಕೀಯ ಲಾಭಕ್ಕಾಗಿ ಮಹಾರಾಷ್ಟ್ರ ಚುನಾವಣೆ ಮುಂದೂಡಲು ಸಂಚು: ಸಂಜಯ್ ರಾವತ್ - Maharastra Assembly Polls

By ETV Bharat Karnataka Team

Published : Aug 19, 2024, 2:43 PM IST

ಲಡ್ಕಿ ಬಹಿನ್ ಯೋಜನೆಯ ರಾಜಕೀಯ ಲಾಭ ಪಡೆಯುವುದಕ್ಕಾಗಿ ಮಹಾಯುತಿ ಸರ್ಕಾರವು ಮಹಾರಾಷ್ಟ್ರದಲ್ಲಿ ಚುನಾವಣೆಗಳು ವಿಳಂಬವಾಗುವಂತೆ ಸಂಚು ಮಾಡಿದೆ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ.

ಶಿವಸೇನೆ ಯುಬಿಟಿ ಸಂಸದ ಸಂಜಯ್ ರಾವತ್
ಶಿವಸೇನೆ ಯುಬಿಟಿ ಸಂಸದ ಸಂಜಯ್ ರಾವತ್ (IANS)

ಮುಂಬೈ: ಮಹಾಯುತಿ ಸರ್ಕಾರ ಜಾರಿಗೆ ತಂದಿರುವ ಲಡ್ಕಿ ಬಹಿನ್ ಯೋಜನೆಯು ಮತದಾರರಿಗೆ ಆಮಿಷ ಒಡ್ಡುವಂತಿದೆ ಮತ್ತು ಮಹಾರಾಷ್ಟ್ರದಲ್ಲಿ ಚುನಾವಣೆ ಘೋಷಿಸಲು ಚುನಾವಣಾ ಆಯೋಗ ವಿಳಂಬ ಮಾಡುತ್ತಿರುವುದು ಆಡಳಿತ ಪಕ್ಷಕ್ಕೆ ಲಾಭ ಮಾಡಿಕೊಡುವಂತಿದೆ ಎಂದು ಶಿವಸೇನೆ ಯುಬಿಟಿ ಸಂಸದ ಸಂಜಯ್ ರಾವತ್ ಸೋಮವಾರ ಆರೋಪಿಸಿದ್ದಾರೆ.

"ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದೆ. ಈ ಸಂಸ್ಥೆ ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಎಲ್ಲಿದೆ? ಡಿಸೆಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುವುದಾದರೆ ಅದು ಆಡಳಿತದಲ್ಲಿರುವ ಪಕ್ಷಕ್ಕೆ ಅನುಕೂಲವಾಗಲಿದೆ. ಆದರೆ ಈಗಲೇ ಚುನಾವಣೆ ನಡೆದರೆ ತಾವು ಸೋಲುತ್ತೇವೆ ಎಂಬ ಭಯ ಆಡಳಿತದಲ್ಲಿರುವ ಪಕ್ಷಗಳಿಗಿದೆ. ಅದಕ್ಕಾಗಿಯೇ ಅವರು ಚುನಾವಣೆ ಮುಂದೂಡುವ ಈ ತಂತ್ರ ಮಾಡಿದ್ದಾರೆ" ಎಂದು ರಾವತ್ ಹೇಳಿದರು.

ಡಿಸೆಂಬರ್​ನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಬಹುದು ಎಂಬ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು. ಪ್ರಸ್ತುತ ವಿಧಾನಸಭೆಯ ಅವಧಿ ನವೆಂಬರ್ 26ರಂದು ಕೊನೆಗೊಳ್ಳುತ್ತಿದ್ದರೂ, ಡಿಸೆಂಬರ್​ನಲ್ಲಿ ಚುನಾವಣೆ ನಡೆಯುವವರೆಗೆ ಕೇಂದ್ರವು ರಾಷ್ಟ್ರಪತಿ ಆಡಳಿತವನ್ನು ಹೇರಬಹುದು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

"ಚುನಾವಣಾ ಆಯೋಗವು ಹರಿಯಾಣ, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗಳನ್ನು ಘೋಷಿಸಿದೆ. ಆದರೆ ಜಾರ್ಖಂಡ್ ಮತ್ತು ಮಹಾರಾಷ್ಟ್ರದಲ್ಲಿ ಘೋಷಣೆ ಮಾಡಿಲ್ಲ. ಹೇಮಂತ್ ಸೊರೆನ್ ಅವರ ಪಕ್ಷವನ್ನು ಒಡೆಯುವ ಸಲುವಾಗಿ ಕೇಂದ್ರದಲ್ಲಿನ ಆಡಳಿತ ಪಕ್ಷವು ಜಾರ್ಖಂಡ್ ಚುನಾವಣೆಯನ್ನು ಮುಂದೂಡಿದೆ. ಚಂಪೈ ಸೊರೆನ್ ಬಿಜೆಪಿಗೆ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರದಲ್ಲೂ ರಾಜಕೀಯ ಲಾಭಕ್ಕಾಗಿ ಚುನಾವಣೆಯನ್ನು ಮುಂದೂಡುವ ಪ್ರಯತ್ನಗಳು ನಡೆಯುತ್ತಿವೆ" ಎಂದು ರಾವತ್ ಹೇಳಿದರು.

"ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಮತ್ತು ಸರ್ಕಾರ ಸಿದ್ಧವಾಗಿಲ್ಲ ಎಂದರೆ ದೇಶದಲ್ಲಿ ಸರ್ವಾಧಿಕಾರದ ಆಡಳಿತ ನಡೆದಿದೆ ಎಂದರ್ಥ. ಸಂವಿಧಾನ ಎಲ್ಲಿದೆ? ಇದಕ್ಕೆ ಯಾರ ಬಳಿಯಾದರೂ ಉತ್ತರವಿದೆಯೇ" ಎಂದು ರಾವತ್ ಪ್ರಶ್ನಿಸಿದರು.

ಎನ್ ಸಿಪಿ (ಎಸ್​ಪಿ) ಶರದ್ ಪವಾರ್ ಕೂಡ ವಿಧಾನಸಭಾ ಚುನಾವಣೆ ವಿಳಂಬದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಲಡ್ಕಿ ಬಹಿನ್ ಯೋಜನೆಯಿಂದಾಗಿಯೇ ಚುನಾವಣೆಗಳನ್ನು ಮುಂದೂಡಲಾಗಿದೆಯೇ ಎಂಬುದು ನನಗೆ ಸ್ಪಷ್ಟವಿಲ್ಲ. ಈ ಪ್ರಶ್ನೆಯನ್ನು ಚುನಾವಣಾ ಆಯೋಗಕ್ಕೆ ಕೇಳಬೇಕಾಗಿದೆ. ಪ್ರಧಾನಿ ಮೋದಿ ಆಗಸ್ಟ್ 15ರಂದು ಕೆಂಪು ಕೋಟೆಯಿಂದ ಮಾಡಿದ ಭಾಷಣದಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆಯನ್ನು ಪ್ರಸ್ತಾಪಿಸಿದರು. ಅಂದರೆ ಎಲ್ಲಾ ಚುನಾವಣೆಗಳು ಏಕಕಾಲದಲ್ಲಿ ನಡೆಯಬೇಕು ಎಂದು ಪ್ರಧಾನಿ ಒತ್ತಾಯಿಸಿದರು. ಮರುದಿನವೇ ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಗಳನ್ನು ಘೋಷಿಸಲಾಯಿತು. ಆದರೆ ಮಹಾರಾಷ್ಟ್ರದ ಚುನಾವಣೆ ಮಾತ್ರ ಘೋಷಣೆಯಾಗಲಿಲ್ಲ. ಹೀಗಾಗಿ ಪ್ರಧಾನಿ ಹೇಳುವುದಕ್ಕೆಲ್ಲ ಮಹತ್ವ ನೀಡುವ ಅಗತ್ಯವಿಲ್ಲ. ಪ್ರಧಾನಿ ಮಾತನಾಡುವುದೊಂದು, ಮಾಡುವುದು ಇನ್ನೊಂದು" ಎಂದು ಪವಾರ್ ಹೇಳಿದರು.

ಇದನ್ನೂ ಓದಿ: ಇಂಡಿಯಾ ಒಕ್ಕೂಟದ ಓಲೈಕೆ ರಾಜಕಾರಣದಿಂದ ಸಿಎಎ ಅಡಿಯಲ್ಲಿ ಪೌರತ್ವ ಕೋರುವವರಿಗೆ ಲಭಿಸದ ನ್ಯಾಯ: ಅಮಿತ್ ಶಾ - Amit Shah

ABOUT THE AUTHOR

...view details