ಕರ್ನಾಟಕ

karnataka

ETV Bharat / bharat

ನೌಕಾಪಡೆಗೆ ಈಗ ಐಎನ್‌ಎಸ್ ಸಂಧಾಯಕ್​ ಬಲ: ಕಡಲ್ಗಳ್ಳರಿಗೆ ರಾಜನಾಥ್ ಸಿಂಗ್ ಎಚ್ಚರಿಕೆ ಸಂದೇಶ - ಐಎನ್‌ಎಸ್ ಸಂಧಾಯಕ್​

ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ನೌಕಾನೆಲೆಯಲ್ಲಿ ಐಎನ್‌ಎಸ್ ಸಂಧಾಯಕ್​ ನೌಕೆಯು ಶನಿವಾರ ತನ್ನ ಕಾರ್ಯಾರಂಭ ಮಾಡಿದೆ.

New India Wont Tolerate Piracy and Smuggling says Def Minister Rajnath Singh at commissioning INS Sandhayak
ನೌಕಾಪಡೆಗೆ ಈಗ ಐಎನ್‌ಎಸ್ ಸಂಧಾಯಕ್​ ಬಲ: ಕಡಲ್ಗಳ್ಳರಿಗೆ ರಾಜನಾಥ್ ಸಿಂಗ್ ಎಚ್ಚರಿಕೆ ಸಂದೇಶ

By ETV Bharat Karnataka Team

Published : Feb 3, 2024, 8:19 PM IST

Updated : Feb 3, 2024, 9:46 PM IST

ವಿಶಾಖಪಟ್ಟಣಂ (ಆಂಧ್ರ ಪ್ರದೇಶ): ಸಮುದ್ರದ ಕಡಲ್ಗಳ್ಳತನ ಮತ್ತು ಕಳ್ಳಸಾಗಣೆಯಲ್ಲಿ ತೊಡಗಿರುವವರನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಇದು 'ನವ ಭಾರತ'ದ ಪ್ರತಿಜ್ಞೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಶನಿವಾರ ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ನೌಕಾನೆಲೆಯಲ್ಲಿ ಐಎನ್‌ಎಸ್ ಸಂಧಾಯಕ್​ ನೌಕೆಯ ಕಾರ್ಯಾರಂಭ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತೀಯ ನೌಕಾಪಡೆಯು ಭಾರತೀಯ ಹಡಗುಗಳಿಗೆ ಮಾತ್ರವಲ್ಲದೆ ಸ್ನೇಹಪರ ದೇಶಗಳಿಗೂ ಭದ್ರತೆಯನ್ನು ಒದಗಿಸುತ್ತಿದೆ ಎಂದು ತಿಳಿಸಿದರು. ಹಿಂದೂ ಮಹಾಸಾಗರ ಮತ್ತು ಅರೇಬಿಯನ್ ಸಮುದ್ರದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಭಾರತೀಯ ನೌಕಾಪಡೆಯು ಅರೇಬಿಯನ್ ಸಮುದ್ರದಲ್ಲಿ ದಾಳಿಯ ವೇಳೆ ಹಲವಾರು ವ್ಯಾಪಾರ ಹಡಗುಗಳಿಗೆ ನೆರವು ಕಲ್ಪಿಸಿತ್ತು. ಇದನ್ನು ಉಲ್ಲೇಖಿಸಿ ರಾಜನಾಥ್​ ಈ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ, ಅರೇಬಿಯನ್ ಸಮುದ್ರದಲ್ಲಿ ವ್ಯಾಪಾರಿ ಹಡಗುಗಳ ಅಪಹರಣ ಯತ್ನಗಳ ಕುರಿತಂತೆ ಮಾತನಾಡಿದ ಅವರು, ಗಲ್ಫ್ ಆಫ್ ಅಡೆನ್ ಸೇರಿ ಮುಂತಾದ ಅನೇಕ ಚಾಕ್ ಪಾಯಿಂಟ್‌ಗಳು ಹಿಂದೂ ಮಹಾಸಾಗರದಲ್ಲಿವೆ. ಇದರ ಮೂಲಕ ದೊಡ್ಡ ಪ್ರಮಾಣದ ಅಂತಾರಾಷ್ಟ್ರೀಯ ವ್ಯಾಪಾರ ನಡೆಯುತ್ತದೆ. ಈ ಚಾಕ್ ಪಾಯಿಂಟ್‌ಗಳಲ್ಲಿ ಅನೇಕ ಬೆದರಿಕೆಗಳು ಬರುತ್ತಿವೆ. ಅದರಲ್ಲೂ ಈ ಬೆದರಿಕೆಗಳು ಕಡಲ್ಗಳ್ಳರಿಂದ ಹೆಚ್ಚಾಗಿವೆ ಎಂದು ಹೇಳಿದರು.

ಇಂಡೋ-ಪೆಸಿಫಿಕ್ ವಲಯದಲ್ಲಿ ಸೂಪರ್ ಪವರ್ ಆಗಿ ಭಾರತದ ಪಾತ್ರವನ್ನು ಐಎನ್‌ಎಸ್ ಸಂಧಾಯಕ್ ಮತ್ತಷ್ಟು ಬಲಪಡಿಸುತ್ತದೆ. ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ಭಾರತೀಯ ನೌಕಾಪಡೆಗೆ ಸಹಾಯ ಮಾಡುತ್ತದೆ ಎಂದು ಸಚಿವ ರಾಜನಾಥ್ ತಿಳಿಸಿದರು. ಇತ್ತೀಚೆಗೆ ಐಎನ್‌ಎಸ್ ಇಂಫಾಲ್ ಕಾರ್ಯಾರಂಭದ ಸಂದರ್ಭದಲ್ಲೂ ಭಾರತವು ಸಾಗರಗಳ ಆಳದಲ್ಲಿ ನೀಚ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಪತ್ತೆ ಮಾಡುತ್ತದೆ. ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಅವರು ಎಚ್ಚರಿಸಿದ್ದರು.

ಐಎನ್‌ಎಸ್ ಸಂಧಾಯಕ್ ನೌಕೆಯು ಸುರಕ್ಷಿತ ಸಮುದ್ರ ಸಂಚರಣೆಯನ್ನು ಸಕ್ರಿಯಗೊಳಿಸಲು ಬಂದರುಗಳು, ನ್ಯಾವಿಗೇಷನಲ್ ಚಾನಲ್‌ಗಳು, ಮಾರ್ಗಗಳು, ಕರಾವಳಿ ಪ್ರದೇಶಗಳು ಮತ್ತು ಆಳವಾದ ಸಮುದ್ರಗಳ ಪೂರ್ಣ ಪ್ರಮಾಣದ ಹೈಡ್ರೋಗ್ರಾಫಿಕ್ ಸಮೀಕ್ಷೆಗಳನ್ನು ಕೈಗೊಳ್ಳುತ್ತದೆ. ಈ ನೌಕೆಯನ್ನು ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್​ನಲ್ಲಿ ನಿರ್ಮಿಸಲಾಗಿದೆ. 3,400 ಟನ್‌ಗಳ ಸಾಮರ್ಥ್ಯದ ನೌಕೆಯು 110 ಮೀಟರ್ ಉದ್ದ ಇದೆ. ಸೈಡ್ ಸ್ಕ್ಯಾನ್ ಸೋನಾರ್‌ಗಳು, ಡೇಟಾ ಸ್ವಾಧೀನ ಮತ್ತು ಸಂಸ್ಕರಣಾ ವ್ಯವಸ್ಥೆ, ರಿಮೋಟ್ ಚಾಲಿತ ವಾಹನ ಸೇರಿ ಇತರ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ.

ಐಎನ್‌ಎಸ್ ಸಂಧಾಯಕ್​ ನೌಕೆಯ ಕಾರ್ಯಾರಂಭ ಸಮಾರಂಭದಲ್ಲಿ ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಮತ್ತು ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ಇದನ್ನೂ ಓದಿ:ಎಲ್.ಕೆ. ಅಡ್ವಾಣಿಗೆ ಭಾರತ ರತ್ನ ಘೋಷಣೆ: ಪ್ರಧಾನಿ ಮೋದಿ ಅಭಿನಂದನೆ

Last Updated : Feb 3, 2024, 9:46 PM IST

ABOUT THE AUTHOR

...view details