ಕರ್ನಾಟಕ

karnataka

ಮೆಟ್ಟೂರು ಜಲಾಶಯದಲ್ಲಿ ಕಡಿಮೆಯಾದ ನೀರು: ತಮಿಳುನಾಡಿನಲ್ಲಿ ರೈತರ ಪ್ರತಿಭಟನೆ - Cauvery water

By ETV Bharat Karnataka Team

Published : Aug 29, 2024, 7:23 PM IST

ಕರ್ನಾಟಕದಿಂದ ಕಾವೇರಿ ನೀರು ಬಿಡುಗಡೆಗೆ ಆಗ್ರಹಿಸಿ ತಮಿಳುನಾಡಿನಲ್ಲಿ ರೈತರು ಪ್ರತಿಭಟನೆಗೆ ಸಜ್ಜಾಗಿದ್ದಾರೆ.

ಮೆಟ್ಟೂರು ಜಲಾಶಯ (ಸಂಗ್ರಹ ಚಿತ್ರ)
ಮೆಟ್ಟೂರು ಜಲಾಶಯ (ಸಂಗ್ರಹ ಚಿತ್ರ) (IANS)

ಚೆನ್ನೈ: ಮೆಟ್ಟೂರು ಜಲಾಶಯಕ್ಕೆ ನೀರಿನ ಒಳಹರಿವು ಕಡಿಮೆಯಾಗಿರುವ ಮಧ್ಯೆ ಕಾವೇರಿ ಜಲ ವಿವಾದ ನ್ಯಾಯಮಂಡಳಿ (ಸಿಡಬ್ಲ್ಯೂಡಿಟಿ) ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪ್ರತಿ ತಿಂಗಳು ಕರ್ನಾಟಕದಿಂದ ಕಾವೇರಿ ನೀರು ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ತಮಿಳುನಾಡಿನ ಕಾವೇರಿ ನದಿಪಾತ್ರದ ರೈತರು ಸಿದ್ಧತೆ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿದ ನಾಗಪಟ್ಟಿಣಂನ ರೈತ ಮುಖಂಡ ಉಮೇಶ್ ರಾಜ್, ಕಾವೇರಿ ನೀರಿಗಾಗಿ ತಮಿಳುನಾಡಿನ ಕಾವೇರಿ ನದಿ ಪಾತ್ರದ ಜಿಲ್ಲೆಗಳ ರೈತರು ಬೃಹತ್ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಲಿದ್ದಾರೆ ಎಂದು ಹೇಳಿದರು.

ಮಾನ್ಸೂನ್ ಮಳೆ ಚೆನ್ನಾಗಿ ಸುರಿದ ಸಂದರ್ಭದಲ್ಲಿ ಕಬಿನಿ ಮತ್ತು ಕೃಷ್ಣರಾಜ ಸಾಗರ (ಕೆಆರ್ ಎಸ್) ಜಲಾಶಯಗಳು ಪೂರ್ಣ ತುಂಬಿದಾಗ ಕರ್ನಾಟಕ ಕಾವೇರಿ ನೀರು ಬಿಡುಗಡೆ ಮಾಡಿತ್ತು.

ಕರ್ನಾಟಕದ ಕಬಿನಿ ಮತ್ತು ಕೃಷ್ಣರಾಜ ಸಾಗರ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿದಾಗ ಮೆಟ್ಟೂರು ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಗರಿಷ್ಠ ಸಾಮರ್ಥ್ಯ 120 ಟಿಎಂಸಿ ಅಡಿಗೆ ತಲುಪಿತ್ತು. ನಂತರ ಜಲಾಶಯದಿಂದ ನೀರು ಬಿಡುಗಡೆ ಮಾಡಲಾರಂಭಿಸಿದ ನಂತರ ಗುರುವಾರದ ವೇಳೆಗೆ ಮೆಟ್ಟೂರು ಜಲಾಶಯದಲ್ಲಿ ಕೇವಲ 88 ಟಿಎಂಸಿ ಅಡಿ ನೀರು ಸಂಗ್ರಹವಿದೆ.

ಮೆಟ್ಟೂರು ಜಲಾಶಯಕ್ಕೆ ಆಗಸ್ಟ್ 18 ರಂದು 17,162 ಕ್ಯೂಸೆಕ್ ನೀರಿನ ಒಳಹರಿವು ಇದ್ದರೆ, ಆಗಸ್ಟ್ 28 ರಂದು ಹತ್ತು ದಿನಗಳ ನಂತರ ಅದು 4,551 ಕ್ಯೂಸೆಕ್​ಗೆ ಇಳಿದಿದೆ.

ತಮಿಳುನಾಡಿನ ಭತ್ತದ ಕಣಜ ಎಂದು ಕರೆಸಿಕೊಳ್ಳುವ ತಂಜಾವೂರಿನ ಭತ್ತದ ಕೃಷಿಕ ಎಂ.ಆರ್.ಪಳನಿವೇಲ್ ಐಎಎನ್ಎಸ್ ಜೊತೆ ಮಾತನಾಡಿ, "ತಂಜಾವೂರು, ತಿರುವರೂರು, ನಾಗಪಟ್ಟಿಣಂ ಮತ್ತು ಮೈಲಾಡುತುರೈ ಜಿಲ್ಲೆಗಳಲ್ಲಿ ಭತ್ತದ ಕೃಷಿಗಾಗಿ ಸುಮಾರು 10.30 ಲಕ್ಷ ಎಕರೆಗಳಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ" ಎಂದು ಹೇಳಿದರು. ಅನೇಕ ರೈತರು ಪ್ರತಿಭಟನೆ ಆರಂಭಿಸಿದ್ದಾರೆ ಎಂದು ಅವರು ಹೇಳಿದರು.

ಸೆಪ್ಟೆಂಬರ್ ತಿಂಗಳಿಗೆ ತಮಿಳುನಾಡಿಗೆ 36.14 ಟಿಎಂಸಿ ಅಡಿ ನೀರು ಸಿಗಬೇಕಿದ್ದು, ಮೆಟ್ಟೂರಿನಲ್ಲಿರುವ ಪ್ರಸ್ತುತ ನೀರು ಭತ್ತದ ಕೃಷಿಗೆ ಸಾಕಾಗುವುದಿಲ್ಲ ಎಂದು ಅವರು ತಿಳಿಸಿದರು. (ಐಎಎನ್​ಎಸ್​)

ಇದನ್ನೂ ಓದಿ : 'ದಿ ಡೈರಿ ಆಫ್ ಪಶ್ಚಿಮ ಬಂಗಾಳ' ಚಿತ್ರಕ್ಕೆ ತಡೆ ನೀಡಲು ಹೈಕೋರ್ಟ್​ ನಿರಾಕರಣೆ - Diary of West Bengal

ABOUT THE AUTHOR

...view details