ಕರ್ನಾಟಕ

karnataka

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ಗೆ ಕೊನೆಗೂ ಸಿಕ್ತು ಜಾಮೀನು - Arvind Kejriwal

By PTI

Published : Sep 13, 2024, 11:13 AM IST

Updated : Sep 13, 2024, 12:00 PM IST

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ನೀಡಿದೆ. ಈ ಮೂಲಕ ಆಪ್ ಮುಖ್ಯಸ್ಥರಿಗೆ ಆರು ತಿಂಗಳ ಬಳಿಕ ಬಿಗ್ ರಿಲೀಫ್ ಸಿಕ್ಕಿದೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ಗೆ ಜಾಮೀನು ಮಂಜೂರು
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ಗೆ ಜಾಮೀನು ಮಂಜೂರು ಮಾಡಿ ಸುಪ್ರೀಂ ಕೋರ್ಟ್‌ (ETV Bharat)

ನವದೆಹಲಿ:ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿದ್ದ ಆಮ್ ಆದ್ಮಿ ಪಕ್ಷದ (ಆಪ್) ಮುಖ್ಯಸ್ಥ ಹಾಗು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ನೀಡಿತು.

10 ಲಕ್ಷ ರೂ ಬಾಂಡ್, ಎರಡು ಶ್ಯೂರಿಟಿಗಳೊಂದಿಗೆ ಕೇಜ್ರಿವಾಲ್​ಗೆ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮತ್ತು ನ್ಯಾ.ಸೂರ್ಯ ಕಾಂತ್ ದ್ವಿಸದಸ್ಯ ನ್ಯಾಯಪೀಠ ಜಾಮೀನು ಮಂಜೂರು ಮಾಡಿದೆ.

ದೆಹಲಿ ಮದ್ಯ ನೀತಿ ಪ್ರಕರಣ ಸಂಬಂಧ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಕೇಜ್ರಿವಾಲ್, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ದ್ವಿದಸ್ಯ ನ್ಯಾಯಪೀಠ, ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಈಗಾಗಲೇ ಜಾಮೀನು ಸಿಕ್ಕಿರುವುದರಿಂದ ಕೇಜ್ರಿವಾಲ್ ಅವರನ್ನು ಕಸ್ಟಡಿಯಲ್ಲಿ ಇಟ್ಟುಕೊಳ್ಳುವುದು ನ್ಯಾಯದ ಅಪಹಾಸ್ಯವಾಗುತ್ತದೆ ಎಂದು ಅಭಿಪ್ರಾಯಟ್ಟಿತು.

ಕೇಜ್ರಿವಾಲ್ ಬಂಧನ ನ್ಯಾಯಸಮ್ಮತವಲ್ಲ. 22 ತಿಂಗಳುಗಳ ಕಾಲ ಅವರನ್ನು ಸಿಬಿಐ ಬಂಧಿಸಲಿಲ್ಲ. ಆದರೆ, ಇಡಿ ಪ್ರಕರಣದಲ್ಲಿ ಬಿಡುಗಡೆಯಾದ ಬೆನ್ನಲ್ಲೇ ಸಿಬಿಐ ಬಂಧಿಸಿದ ತುರ್ತು ಕ್ರಮ ಅರ್ಥವಾಗುತ್ತಿಲ್ಲ. ಈ ಹಿಂದೆಯೇ ಸಿಬಿಐಗೆ ಪಂಜರದ ಗಿಳಿ ಎಂದು ಕೋರ್ಟ್ ದೂಷಿಸಿತ್ತು. ಅದರಿಂದ ಸಿಬಿಐ ಹೊರಬರಬೇಕಿದೆ ಎಂದು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ತರಾಟೆಗೆ ತೆಗೆದುಕೊಂಡರು. ಆದರೆ ನ್ಯಾ.ಸೂರ್ಯ ಕಾಂತ್ ಅವರು ಸಿಬಿಐ ಕ್ರಮದಲ್ಲಿ ಯಾವುದೇ ಅಕ್ರಮ ಇಲ್ಲ ಎಂದು ತಿಳಿಸಿದರು.

ಜಾಮೀನು ಅರ್ಜಿ ವಿಚಾರಣೆ ವೇಳೆ ಕೋರ್ಟ್​ನಲ್ಲಿದ್ದ ಆಪ್ ನಾಯಕರಾದ ಮನಿಶ್ ಸಿಸೋಡಿಯಾ ಮತ್ತು ಅತಿಶಿ ಅವರು ಜಾಮೀನು ಸಿಗುತ್ತಿದ್ದಂತೆ ಪರಸ್ಪರ ಸಂಭ್ರಮಿಸಿದರು.

ಅಬಕಾರಿ ನೀತಿ ಹಗರಣ ಸಂಬಂಧ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕಳೆದ ವಾರ ಸುಪ್ರೀಂ ಕೋರ್ಟ್ ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಿತ್ತು

ಕೇಜ್ರಿವಾಲ್‌ರನ್ನು ಮೊದಲು ಮಾರ್ಚ್​ನಲ್ಲಿ ಇಡಿ ಬಂಧಿಸಿತ್ತು. ಎರಡು ತಿಂಗಳ ಹಿಂದೆ ಇಡಿ ಪ್ರಕರಣದಲ್ಲಿ ಕೋರ್ಟ್ ಜಾಮೀನು ನೀಡಿತ್ತು. ಆದರೆ ಜುಲೈ 12ರಂದು ಸಿಬಿಐ ಬಂಧಿಸಿದ್ದರಿಂದ ಕೇಜ್ರಿವಾಲ್​ಗೆ ಜೈಲು ವಾಸ ಮುಂದುವರಿದಿತ್ತು. ಇದೀಗ ಆರು ತಿಂಗಳ ಬಳಿಕ ದೆಹಲಿ ಸಿಎಂ ಬಿಡುಗಡೆಯಾಗುತ್ತಿದ್ದಾರೆ.

ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಬೆನ್ನಲ್ಲೇ, ಆಮ್ ಆದ್ಮಿ ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಇಲ್ಲಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು

ಇದನ್ನೂ ಓದಿ: ಮುಕ್ತ ನ್ಯಾಯಾಲಯದಲ್ಲೇ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ: ಹೈಕೋರ್ಟ್ - Prajwal Revanna Sexual Assault Case

Last Updated : Sep 13, 2024, 12:00 PM IST

ABOUT THE AUTHOR

...view details