ನವದೆಹಲಿ: ಗಮನಾರ್ಹ ರಾಜಕೀಯ ಬೆಳವಣಿಗೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ)ಯ ಮಾಜಿ ಕ್ಯಾಬಿನೆಟ್ ಸಚಿವ ಹಾಗೂ ಪ್ರಮುಖ ದಲಿತ ನಾಯಕ ರಾಜೇಂದ್ರ ಪಾಲ್ ಗೌತಮ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ನಾಯಕ ವೇಣುಗೋಪಾಲ್, ಗೌತಮ್ ಅವರನ್ನು ಪಕ್ಷಕ್ಕೆ ಆತ್ಮೀಯವಾಗಿ ಬರ ಮಾಡಿಕೊಂಡಿದ್ದಾರೆ.
ಹರಿಯಾಣ ವಿಧಾನಸಭಾ ಚುನಾವಣೆ ಹೊತ್ತಲ್ಲಿ ಈ ಪಕ್ಷಾಂತರ ಹೆಚ್ಚು ನಿರ್ಣಾಯಕವಾಗಿದೆ. ಇಂಡಿಯಾ ಮೈತ್ರಿಕೂಟದ ಮೈತ್ರಿ ಪಕ್ಷವಾಗಿರುವ ಎಎಪಿ ಮತ್ತು ಕಾಂಗ್ರೆಸ್ ಹರಿಯಾಣ ವಿಧಾನಸಭೆ ಚುನಾವಣಾಯಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ರಾಜೇಂದ್ರ ಪಾಲ್ ಗೌತಮ್ ಎಎಪಿ ತೊರೆದು ಕಾಂಗ್ರೆಸ್ ಸೇರಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಗೌತಮ್ ಅವರ ಈ ಪಕ್ಷಾಂತರವೂ ಎಎಪಿಗೆ ಹಿನ್ನಡೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. 2025ರ ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಇದು ಕಾಂಗ್ರೆಸ್ಗೆ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.
ವೃತ್ತಿಯಲ್ಲಿ ವಕೀಲರಾಗಿರುವ ರಾಜೇಂದ್ರ ಪಾಲ್ ಗೌತಮ್, ದಲಿತರ ಹಕ್ಕಿನ ಪರ ಧ್ವನಿಯಾಗಿದ್ದಾರೆ. 2014ರಲ್ಲಿ ಎಎಪಿ ಸೇರಿದ್ದ ಇವರು 2020ರ ದೆಹಲಿ ಚುನಾವಣೆಯಲ್ಲಿ ಸೀಮಪುರಿ ಕ್ಷೇತ್ರದಲ್ಲಿ ಗೆಲುವು ಕಂಡಿದ್ದರು. ಎಎಪಿ ಸರ್ಕಾರದಲ್ಲಿ ಸಾಮಾಜಿಕ ಕಲ್ಯಾಣ, ಪ.ಜಾ ಮತ್ತು ಪ.ಪಂ, ಸೇರಿದಂತೆ ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ.