ಕರ್ನಾಟಕ

karnataka

ETV Bharat / bharat

ದೆಹಲಿ ವಿಧಾನಸಭಾ ಚುನಾವಣೆ: ಸಂಜೆ 5ಕ್ಕೆ ಶೇ 57.70ರಷ್ಟು ವೋಟಿಂಗ್‌ - DELHI ELECTION VOTING

ದೆಹಲಿ ವಿಧಾನಸಭಾ ಚುನಾವಣೆ-2025: ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದ್ದು, ಸಂಜೆ 5 ಗಂಟೆಯ ವೇಳೆಗೆ ಶೇ 57.70ರಷ್ಟು ಮತದಾನ ದಾಖಲಾಗಿದೆ.

delhi-election-33-dot-31-per-cent-turnout-till-1-pm
ದೆಹಲಿ ವಿಧಾನಸಭೆ ಚುನಾವಣೆ (ANI)

By ETV Bharat Karnataka Team

Published : Feb 5, 2025, 3:40 PM IST

Updated : Feb 5, 2025, 5:44 PM IST

ನವದೆಹಲಿ:ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಬಿರುಸಿನಿಂದ ಸಾಗಿದ್ದು, ಸಂಜೆ 5 ಗಂಟೆಯ ಹೊತ್ತಿಗೆ ಶೇ 57.70ರಷ್ಟು ಮತದಾನ ದಾಖಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಬೆಳಗ್ಗೆ 7ರಿಂದ ಆರಂಭವಾದ ಮತದಾನದಲ್ಲಿ ರಾಷ್ಟ್ರಪತಿ ಸೇರಿದಂತೆ ಆಪ್, ಬಿಜೆಪಿ ಹಾಗು ಕಾಂಗ್ರೆಸ್‌ ನಾಯಕರು ಮತದಾನ ಮಾಡಿದ್ದಾರೆ. ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದಂತೆ ಮತದಾನ ಬಹುತೇಕ ಶಾಂತಿಯುತವಾಗಿ ಸಾಗುತ್ತಿದೆ.

ನಕಲಿ ಮತದಾನ ಆರೋಪ ಮಾಡಿದ ಬಿಜೆಪಿ: ದೆಹಲಿಯ ಸೀಲಾಂಪುರ್‌ ಮತ್ತು ಕಸ್ತುರ್ಬಾ ಕ್ಷೇತ್ರಗಳಲ್ಲಿ ನಕಲಿ ಮತದಾನವಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಕೆಲವರು ಬುರ್ಖಾ ಧರಿಸಿ ನಕಲಿ ಮತದಾನ ಮಾಡಲು ಯತ್ನಿಸಿದರು ಎಂದು ಬಿಜೆಪಿ ನಾಯಕರೊಬ್ಬರು ಆರೋಪಿಸಿದ ಬಳಿಕ ಹೈಡ್ರಾಮಾ ನಡೆಯಿತು. ಆದರೆ, ಈ ಕ್ಷೇತ್ರಗಳಲ್ಲಿ ನಕಲಿ ಮತದಾನ ಆಗಿರುವ ವಿಚಾರವನ್ನು ಪೊಲೀಸರು ತಳ್ಳಿ ಹಾಕಿದ್ದಾರೆ.

ಕಸ್ತುರ್ಬಾ ಕ್ಷೇತ್ರದಲ್ಲಿ ನಕಲಿ ಮತದಾನಕ್ಕೆ ಯತ್ನ: ಆದರೆ ಕಸ್ತುರ್ಬಾ ನಗರದಲ್ಲಿ ಇಬ್ಬರು ನಕಲಿ ಮತದಾನಕ್ಕೆ ಯತ್ನಿಸಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಮತದಾರರಿಗೆ ಹಣ ಹಂಚಲಾಗಿದೆ-ಸಿಸೋಡಿಯಾ: ಈ ಮಧ್ಯೆ, ಗ್ರೇಟರ್ ಕೈಲಾಶ್ ಕ್ಷೇತ್ರದ ಆಪ್ ಸ್ಪರ್ಧಿ ಸೌರಭ್ ಭಾರಧ್ವಾಜ್ ಅವರು, ಚಿರಾಗ್ ದಿಲ್ಲಿ ಪ್ರದೇಶದಲ್ಲಿ ಜನ ಮತ ಹಾಕದಂತೆ ತಡೆಯೊಡ್ಡಲಾಗಿದೆ ಎಂದು ಆರೋಪಿಸಿದರು. ಅದೇ ರೀತಿ ಪಕ್ಷದ ಹಿರಿಯ ನಾಯಕ ಮನೀಶ್ ಸಿಸೋಡಿಯಾ, ಜಂಗ್‌ಪುರದಲ್ಲಿ ಮತದಾರರಿಗೆ ಹಣ ಹಂಚಲಾಗಿದೆ ಎಂದು ದೂರಿದರು.

ಕೇಜ್ರಿವಾಲ್ ಮತದಾನ: ಆಮ್ ಆದ್ಮಿ ಪಕ್ಷದ ಸಂಚಾಲಕ ಹಾಗು ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಮತದಾನ ಮಾಡಿದ್ದು, ದೆಹಲಿಯ ಅಭಿವೃದ್ಧಿಗೆ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು. ತಮ್ಮ ಪೋಷಕರು ಮತ್ತು ಸಂಬಂಧಿಕರೊಂದಿಗೆ ಮತಗಟ್ಟೆಗೆ ಆಗಮಿಸಿ ವೋಟ್‌ ಮಾಡಿದರು.

ಉತ್ತಮ ಶಾಲೆಗಳು, ಆಸ್ಪತ್ರೆಗಳು ಮತ್ತು ನಗರದ ಅಭಿವೃದ್ಧಿಗೆ ಮತದಾನ ಮಾಡುವಂತೆ ಅವರು ಮತದಾರಲ್ಲಿ ಕೇಳಿಕೊಂಡರು. ಕೇಜ್ರಿವಾಲ್ ನವದೆಹಲಿ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಸ್ಪರ್ಧಿಸುತ್ತಿದ್ದು, ಈ ಬಾರಿ ಬಿಜೆಪಿಯ ಪರ್ವೆಶ್ ವರ್ಮಾ ಮತ್ತು ಕಾಂಗ್ರೆಸ್‌ನ ಸಂದೀಪ್ ದೀಕ್ಷಿತ್ ಎದುರು ಸ್ಪರ್ಧಿಸುತ್ತಿದ್ದಾರೆ.

ನನ್ನ ಪೋಷಕರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳಿವೆ. ಹೀಗಿದ್ದರೂ ಬೆಳಗ್ಗೆಯಿಂದ ಮತದಾನದ ವಿಚಾರವಾಗಿ ಸಾಕಷ್ಚು ಉತ್ಸುಕರಾಗಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿಕೆ ನೀಡಿದರು. ಮತಗಟ್ಟೆಯಲ್ಲಿ ಪತ್ನಿ ಸುನಿತಾ ಕೇಜ್ರಿವಾಲ್ ಮತ್ತು ಪುತ್ರ ಪುಲ್ಕಿತ್ ಕೇಜ್ರಿವಾಲ್ ಕಾಣಿಸಿಕೊಂಡರು. ಇದೇ ವೇಳೆ, ಕೆಲಸ ಮಾಡುವವರಿಗೆ ಜನ ಮತ ಹಾಕುವ ನಂಬಿಕೆ ಇದೆ ಎಂದು ಹೇಳಿದರು.

ಸುನಿತಾ ಕೇಜ್ರಿವಾಲ್ ಪ್ರತಿಕ್ರಿಯಿಸಿ, ಜನರ ಬುದ್ಧಿವಂತರಿದ್ದಾರೆ. ಅವರು ಸೂಕ್ತ ಆಯ್ಕೆ ಮಾಡಲಿದ್ದಾರೆ. ಗೂಂಡಾಗಿರಿಯನ್ನು ಜನ ಸಹಿಸಿಕೊಳ್ಳುವುದಿಲ್ಲ ಎಂದರು.

ಆಮ್ ಆದ್ಮಿ ಪಾರ್ಟಿ ಸತತ ಮೂರನೇ ಬಾರಿಗೆ ದೆಹಲಿಯ ಅಧಿಕಾರದ ಚುಕ್ಕಾಣಿ ಹಿಡಿಯುವ ತವಕದಲ್ಲಿದೆ. ಬಿಜೆಪಿ ಚುನಾವಣೆ ಗೆಲ್ಲಲು ಗೂಂಡಾಗಿರಿ ನಡೆಸುತ್ತಿದೆ ಎಂದು ಆಪ್ ನಾಯಕರು ಪ್ರಚಾರದ ಸಂದರ್ಭದಲ್ಲಿ ಆರೋಪಿಸಿದ್ದರು.

ಆಪ್‌ ವಿರುದ್ಧ ರಾಹುಲ್ ಗಾಂಧಿ ಟೀಕೆ: ದೆಹಲಿಯಲ್ಲಿ ಅತಿ ದೊಡ್ಡ ಹಗರಣ ಮಾಡಿದವರು ಈಗ ಶುದ್ಧ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ನವದೆಹಲಿ ವಿಧಾನಸಭಾ ಕ್ಷೇತ್ರದ ನಿರ್ಮಲ್‌ ಭವನ್‌ ಮತಗಟ್ಟೆಯಲ್ಲಿ ಬೆಳಗ್ಗೆ ರಾಹುಲ್ ಮನತದಾನ ಮಾಡಿದರು.

ಉಪ ರಾಷ್ಟ್ರಪತಿ ಜಗದೀಪ್​ ಧನ್‌ಕರ್​, ಸಿಜೆಐ ಸಂಜೀವ್​ ಖನ್ನಾ, ಕೇಂದ್ರ ಸಚಿವರಾದ ಜೈಶಂಕರ್, ಹರ್ದೀಪ್​ ಸಿಂಗ್​ ಪುರಿ, ಕಾಂಗ್ರೆಸ್​ ನಾಯಕರಾದ ಸೋನಿಯಾ ಗಾಂದಿ, ಪ್ರಿಯಾಂಕಾ ಗಾಂಧಿ ವಾದ್ರಾ, ದೆಹಲಿ ಸಿಎಂ ಆತಿಶಿ ಸೇರಿದಂತೆ ಹಲವರು ಮತದಾನ ಮಾಡಿದ್ದಾರೆ.

ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, 13,766 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಕಣದಲ್ಲಿ 699 ಅಭ್ಯರ್ಥಿಗಳಿದ್ದಾರೆ.

2020ರ ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ ಶೇ 62.59ರಷ್ಟು ಮತದಾನವಾಗಿತ್ತು. 2024ರ ಲೋಕಸಭೆಯಲ್ಲಿ ಶೇ 56ರಷ್ಟು ಮತದಾನವಾಗಿತ್ತು.

ಇದನ್ನೂ ಓದಿ: ದೆಹಲಿ ಚುನಾವಣೆ: ಮತದಾನ ಮಾಡಿದ ರಾಷ್ಟ್ರಪತಿ ಮುರ್ಮು, ರಾಹುಲ್ ಗಾಂಧಿ, ಕೇಂದ್ರ ಸಚಿವ ಪುರಿ

ಇದನ್ನೂ ಓದಿ:ತಮಿಳುನಾಡಿನ ಈರೋಡ್​, ಅಯೋಧ್ಯೆಯ ಮಿಲ್ಕಿಪುರ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ

Last Updated : Feb 5, 2025, 5:44 PM IST

ABOUT THE AUTHOR

...view details