ಕರ್ನಾಟಕ

karnataka

ETV Bharat / bharat

ತಿರುಚಿ: ಹಾರಾಟದ ವೇಳೆ ವಿಮಾನದಲ್ಲಿ ಹೈಡ್ರಾಲಿಕ್ ವೈಫಲ್ಯ; 2 ಗಂಟೆಗಳ ಬಳಿಕ ತುರ್ತು ಲ್ಯಾಂಡಿಂಗ್‌, 141 ಪ್ರಯಾಣಿಕರು ಸೇಫ್‌

ತಾಂತ್ರಿಕ ದೋಷದಿಂದಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ತಮಿಳುನಾಡಿನ ತಿರುಚ್ಚಿಯಲ್ಲಿ 2 ಗಂಟೆಗಳ ಕಾಲ ಆಕಾಶದಲ್ಲೇ ಹಾರಾಟ ನಡೆಸಿತು. ಅಂತಿಮವಾಗಿ, ಪೈಲಟ್‌ಗಳು ಸಾಕಷ್ಟು ಕರಸತ್ತು ನಡೆಸಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ.

By ETV Bharat Karnataka Team

Published : 4 hours ago

Updated : 2 hours ago

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ
ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ (ETV Bharat)

ತಿರುಚಿ(ತಮಿಳುನಾಡು): ಇಂದು ಸಂಜೆ 5:40ಕ್ಕೆ ತಿರುಚಿರಾಪಳ್ಳಿಯಿಂದ ಶಾರ್ಜಾಕ್ಕೆ ಹೊರಟ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಹೈಡ್ರಾಲಿಕ್‌ ವೈಫಲ್ಯ ಉಂಟಾಗಿ, ಸುಮಾರು 2 ಗಂಟೆ ಆಕಾಶದಲ್ಲೇ ಹಾರಾಟ ನಡೆಸಿತು. ಅಂತಿಮವಾಗಿ, ಪೈಲಟ್‌ಗಳು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ. ಈ ವಿಮಾನದಲ್ಲಿ 141 ಪ್ರಯಾಣಿಕರಿದ್ದರು.

ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಹೈಡ್ರಾಲಿಕ್ ಸಿಸ್ಟಮ್ ಸಮಸ್ಯೆ ಕಂಡುಬಂದಾಗ ಪೈಲಟ್‌ಗಳು ಚಾಣಾಕ್ಷತನದಿಂದ ಪರಿಸ್ಥಿತಿ ನಿಭಾಯಿಸಿ ವಿಮಾನವನ್ನು ಸುರಕ್ಷಿತವಾಗಿ ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಸುವಲ್ಲಿ ಯಶಸ್ವಿಯಾದರು.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಈ ಬಗ್ಗೆ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ​ ಪೋಸ್ಟ್​ ಮಾಡಿ, "ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂಬ ಸುದ್ದಿ ಕೇಳಿ ನಿಟ್ಟುಸಿರುಬಿಟ್ಟೆ. ವಿಮಾನದಲ್ಲಿ ಲ್ಯಾಂಡಿಂಗ್ ಗೇರ್ ವೈಫಲ್ಯವಾಗಿರುವ ಬಗ್ಗೆ ವಿಷಯ ತಿಳಿದ ತಕ್ಷಣ ನಾನು ದೂರವಾಣಿ ಕರೆ ಮೂಲಕ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ. ಅಗ್ನಿಶಾಮಕ ದಳ, ಆಂಬ್ಯುಲೆನ್ಸ್‌ಗಳು ಮತ್ತು ವೈದ್ಯಕೀಯ ನೆರವು ಸೇರಿದಂತೆ ಎಲ್ಲ ರೀತಿಯ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಅವರಿಗೆ ಸೂಚಿಸಿದೆ. ಎಲ್ಲ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಹೆಚ್ಚಿನ ಸಹಾಯ ಮಾಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ" ಎಂದು ತಿಳಿಸಿದ್ದಾರೆ.

ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕಾಗಿ ವಿಮಾನದ ಕ್ಯಾಪ್ಟನ್ ಮತ್ತು ಸಿಬ್ಬಂದಿಯನ್ನು ಸಿಎಂ ಶ್ಲಾಘಿಸಿದ್ದಾರೆ.

ಜಿಲ್ಲಾಧಿಕಾರಿ ಪ್ರದೀಪ್ ಕುಮಾರ್ ಮಾತನಾಡಿ, "ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿದೆ ಎಂದು ತಿಳಿದ ತಕ್ಷಣ ನಾವು ವಿಮಾನ ನಿಲ್ದಾಣದಲ್ಲಿ 18 ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಿದ್ದೆವು. ಸದ್ಯ ವಿಮಾನ ಸುರಕ್ಷಿತವಾಗಿ ಲ್ಯಾಂಡ್​ ಆಗಿದೆ. ಪ್ರಯಾಣಿಕರನ್ನು ಮತ್ತೊಂದು ವಿಮಾನದಲ್ಲಿ ಅಥವಾ ತಾಂತ್ರಿಕ ದೋಷ ನಿವಾರಣೆಯಾದ ಬಳಿಕ ಅದೇ ವಿಮಾನದಲ್ಲಿ ಕಳುಹಿಸಿಕೊಡಲಾಗುತ್ತದೆ " ಎಂದು ಹೇಳಿದರು.

ತಿರುಚಿರಾಪಳ್ಳಿ ಸರ್ಕಾರಿ ಆಸ್ಪತ್ರೆಯ ಡೀನ್ ಡಾ.ಕುಮಾರವೇಲ್ ಮಾತನಾಡಿ, "ನಾನು ಅಧಿಕಾರಿಗಳನ್ನು ಭೇಟಿ ಮಾಡಿದ್ದೇನೆ, ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ಮತ್ತು ಆರಾಮದಾಯಕವಾಗಿದ್ದಾರೆ. ಅವರಲ್ಲಿ ನಾಲ್ವರು ಮಕ್ಕಳಿದ್ದಾರೆ, ನಾಲ್ಕೈದು ಜನರಿಗೆ ಗಾಲಿಕುರ್ಚಿ ನೆರವು ನೀಡಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ನಿಲ್ಲದ ಆರ್‌ಜಿ ಕರ್ ಪ್ರತಿಭಟನೆ: ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಏಳು ಕಿರಿಯ ವೈದ್ಯರ ಪೈಕಿ ಒಬ್ಬರು ಆಸ್ಪತ್ರೆಗೆ ದಾಖಲು

Last Updated : 2 hours ago

ABOUT THE AUTHOR

...view details