ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಅಚ್ಚುಕಟ್ಟಾಗಿ ನೀಡಲಾಗಿದ್ದು, ಕಾರವಾರ ಲಸಿಕಾ ಕೇಂದ್ರದಲ್ಲಿ 42 ಮಂದಿ ಲಸಿಕೆ ಸ್ವೀಕರಿಸಲು ಆಗಮಿಸಿದ್ದಾರೆ.
ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ತೆರೆಯಲಾಗಿರುವ ಕೋವಿಡ್ ಲಸಿಕಾ ಕೇಂದ್ರದಲ್ಲಿ ಗ್ರೂಪ್ ಡಿ ನೌಕರ ಬಾಲಚಂದ್ರ ಶಿರೋಡಕರ್ ಎನ್ನುವವರಿಗೆ ಮೊದಲ ಲಸಿಕೆಯನ್ನ ನೀಡಲಾಯಿತು. ಜಿಲ್ಲೆಯ 11 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಪ್ರಾರಂಭವಾಗಿದ್ದು, ವೈದ್ಯರು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಪ್ರಥಮ ಹಂತದಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತಿದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಹೊನ್ನಾವರದಲ್ಲಾದ ತಾಂತ್ರಿಕ ಸಮಸ್ಯೆ ಹೊರತುಪಡಿಸಿ ಉಳಿದ ಎಲ್ಲ ಕೇಂದ್ರಗಳಲ್ಲಿ ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ನಿಗದಿಯಂತೆ ನೊಂದಾಯಿಸಿಕೊಂಡು ಸ್ವ ಇಚ್ಚೆಯಿಂದ ಆಗಮಿಸಿದವರಿಗೆ ಲಸಿಕೆ ನೀಡಲಾಗುತ್ತಿದೆ. ಲಸಿಕೆ ನೀಡಿದ ಬಳಿಕ 30 ನಿಮಿಷಗಳವರೆಗೆ ಲಸಿಕೆ ಪಡೆದುಕೊಂಡವರನ್ನು ವೀಕ್ಷಣೆ ಮಾಡಲಾಗುತ್ತಿದ್ದು, ಯಾವುದೇ ರೀತಿಯ ಸಮಸ್ಯೆಯಾಗದಿರುವುದನ್ನು ಖಾತರಿಪಡಿಸಿಕೊಂಡು ಕಳುಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಸಿಡಿ ಆರೋಪ, ಆಪರೇಷನ್ ಕಮಲದಲ್ಲಿ ಹಣದ ಪ್ರಭಾವದ ಬಗ್ಗೆ ತನಿಖೆಯಾಗಲಿ: ಸಿದ್ದರಾಮಯ್ಯ ಒತ್ತಾಯ
ಇನ್ನು ವ್ಯಾಕ್ಸಿನೇಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕಿ ರೂಪಾಲಿ ನಾಯ್ಕ್ ಪ್ರತಿಕ್ರಿಯಿಸಿ, ಕೊರೊನಾ ಮಹಾಮಾರಿ ನಿರ್ಮೂಲನೆ ಮಾಡುವ ಸಂಬಂಧ ದೇಶದಾದ್ಯಂತ ಲಸಿಕೆ ನೀಡಲಾಗುತ್ತಿದೆ. ಇಂತಹ ಸಂಜೀವಿನಿಗೆ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದು, ದೇಶದ ಜನರಿಗೆ ಲಭ್ಯವಾಗಲಿದೆ. ಯಾವುದೇ ಭಯ ಇಲ್ಲದೇ ಲಸಿಕೆಯನ್ನು ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.