ಕರ್ನಾಟಕ

karnataka

By

Published : Jun 14, 2023, 1:46 PM IST

Updated : Jun 14, 2023, 2:22 PM IST

ETV Bharat / state

ಉತ್ತರ ಕನ್ನಡ: ಅಕ್ರಮ ನಾಟಾ ಸಾಗಣೆ ಪ್ರಕರಣದಲ್ಲಿ ಐವರು ಡಿಆರ್ ಎಫ್ಓಗಳು ಅಮಾನತು

ಅಕ್ರಮವಾಗಿ ನಾಟ ಸಾಗಿಸುತ್ತಿದ್ದ 4 ಜನರನ್ನು ಅರಣ್ಯಾಧಿಕಾರಿಗಳು ಬಂಧಿಸಿ, ಇದರಲ್ಲಿ ಶಾಮೀಲಾಗಿದ್ದ ಐದು ಮಂದಿ ಡಿಆರ್​ಎಫ್​ಒಗಳನ್ನು ಅಮಾನತ್ತು ಮಾಡಲಾಗಿದೆ. ಮತ್ತೊಂದೆಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಅಕ್ರಮ ನಾಟಾ ಸಾಗಾಟ ಪ್ರಕರಣ
ಅಕ್ರಮ ನಾಟಾ ಸಾಗಾಟ ಪ್ರಕರಣ

ಕಾರವಾರ (ಉತ್ತರ ಕನ್ನಡ): ಮುಂಡಗೋಡದಿಂದ ಶಿರಸಿಗೆ ಅಕ್ರಮ ನಾಟ ಸಾಗಣೆ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳು ಭಾಗಿಯಾದ ಹಿನ್ನೆಲೆಯಲ್ಲಿ ಐದು ಮಂದಿ ಡಿಆರ್​ಎಫ್​ಒಗಳನ್ನು ಜಿಲ್ಲಾ ಅರಣ್ಯ ಮುಖ್ಯಾಧಿಕಾರಿ ವಸಂತ್‌ ರೆಡ್ಡಿ (CCF) ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಶಿರಸಿಯ ಸುರೇಶ್ ವಡ್ಡರ್, ಮಾರುತಿ ಸೋರಗಾವಿ, ಮಹೇಶ್ ಬೋರ್ಕರ್, ಹನುಮಂತ ಬಂಡಿವಡ್ಡರ್, ಗುರುಚಂದ್ರ ಎಮ್. ಬ್ಯಾಳಿ ಅಮಾನತುಗೊಂಡ ಡಿ.ಆರ್.ಎಫ್.ಒ ಗಳು. ವಲಯ ಅರಣ್ಯ ಅಧಿಕಾರಿ ಜಿ.ಟಿ ರೇವಣಕರ್ ವಿರುದ್ಧ ಕ್ರಮಕ್ಕೆ ರಾಜ್ಯ ಅರಣ್ಯ ಮುಖ್ಯಸ್ಥರಿಗೆ ಶಿಫಾರಸು ಮಾಡಿದ್ದಾರೆ. ಮುಂಡಗೋಡು ಡಿಪೋದಿಂದ ಎರಡು ಲಾರಿ ಮೂಲಕ 30 ಲಕ್ಷಕ್ಕೂ ಹೆಚ್ಚು ಮೌಲ್ಯದ 52 ಮರದ ದಿಮ್ಮಿಗಳನ್ನು ಎರಡು ಲಾರಿ ಮೂಲಕ ಶಿರಸಿಯ ಸಾಮಿಲ್ ಒಂದಕ್ಕೆ ಸಾಗಿಸಲಾಗುತಿತ್ತು.

ವಿಷಯ ತಿಳಿದ ಶಿರಸಿ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿ ನಾಟು ಸಮೇತ ಮುಂಡಗೋಡಿನ ನಾಲ್ಕು ಜನರನ್ನು ಬಂಧಿಸಿದ್ದರು. ಬಂಧಿತರ ಹೇಳಿಕೆ ಪಡೆದು ತನಿಖೆ ನಡೆಸಿದ ಯಲ್ಲಾಪುರ ಡಿಎಫ್​ಓ ಎಸ್.ಜಿ ಹೆಗಡೆ ಅರಣ್ಯಾಧಿಕಾರಿಗಳೇ ಇದರಲ್ಲಿ ಶಾಮೀಲಾಗಿರುವ ವಿಷಯವನ್ನು ಬೆಳಕಿಗೆ ತಂದಿದ್ದು, ಶಿರಸಿ ವಲಯ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಅನಧಿಕೃತವಾಗಿ 52 ಮರದ ದಿಮ್ಮಿಗಳನ್ನು ಎರಡು ಲಾರಿಗಳ ಮೂಲಕ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಶಿರಸಿ ಅರಣ್ಯ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡು ನಾಲ್ವರು ಆರೋಪಿಗಳಾದ ಮುಂಡಗೋಡ ಗಣೇಶನಗರದ ನಿವಾಸಿ ಕಲ್ಲಪ್ಪ ಬಸಪ್ಪ ಕೆಂಗಾಪುರ, ದೇಶಪಾಂಡೆನಗರದ ನಿವಾಸಿಗಳಾದ ಹೈದರ ಅಲಿ ಮಹ್ಮದ ಹನೀಫ್, ಗುಲಾಮ್ ಹುಸೇನ್​ ಗಾಜಿಪೂರ, ಮಹ್ಮದ್ ಸೊಹೆಲ್ ಶೇಖ್ ಬಂಧಿತ ಆರೋಪಿಗಳಾಗಿದ್ದು, ಸಾಗಣೆಗೆ ಬಳಸಿದ ಎರಡು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಮುಂಡಗೋಡನಿಂದ ಅನಧಿಕೃತವಾಗಿ ಸಾಗವಾನಿ, ದಾಮಣ, ಮತ್ತಿ, ಕಿಂದಳ ಜಾತಿಯ ಮರದ ದಿಮ್ಮಿಗಳನ್ನು ಅಕ್ರಮವಾಗಿ ಪೀಠೋಪಕರಣ ಹಾಗೂ ಗೃಹ ನಿರ್ಮಾಣಕ್ಕೆ ಬಳಕೆ ಮಾಡಲು ಅರಣ್ಯಾಧಿಕಾರಿಗಳೇ ಶಾಮಿಲ್​ ಆಗಿ ಕೊಂಡೊಯ್ಯುತ್ತಿದ್ದರು ಎಂಬುದಾಗಿ ತನಿಖೆಯಿಂದ ತಿಳಿದುಬಂದಿದೆ.

ಹಣಕ್ಕಾಗಿ ಸಂಬಂಧಿ ಹತ್ಯೆ ಮಾಡಿದ್ದವನಿಗೆ ಜೀವಾವಧಿ ಶಿಕ್ಷೆ..ಹಣಕ್ಕಾಗಿ ಸಂಬಂಧಿಯನ್ನೇ ಕೊಲೆ ಮಾಡಿದ್ದವನಿಗೆ ಶಿರಸಿ ನಗರದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ. 2016ರ ಆ.11ರಂದು ಕಾನಸೂರ- ಹಿರೆಕ್ಕೆ ರಸ್ತೆ ಹಾಲ್ಗಣಿ ಬಸ್‌ಸ್ಟಾಪ್ ಹತ್ತಿರ ಬೈಕ್‌ನಲ್ಲಿ ತೆರಳುತ್ತಿದ್ದ ಶರತ್​ ಆಚಾರಿ ಎನ್ನುವಾತನನ್ನು ಅಡ್ಡಗಟ್ಟಿ, ಡ್ರಾಪ್ ಪಡೆಯುವ ನೆಪದಲ್ಲಿ ಬೈಕ್ ಹತ್ತಿದ್ದ ಆರೋಪಿತರಾದ ಭರತ್‌ಸಿಂಗ್ ಹಾಗೂ ದಿಲ್‌ರಾಜ್ ಆತನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದರು. ಬಳಿಕ ಆತನ ಬಳಿ ಇದ್ದ ನಗದು ದೋಚಿ ಪರಾರಿಯಾಗಿದ್ದರು.

ಈ ಕುರಿತು ಕಲಂ 302 ಜೊತೆ 34 ಐಪಿಸಿ ಅಡಿಯಲ್ಲಿ ಆರೋಪಿ ದಿಲ್‌ರಾಜ್ ವಿರುದ್ಧ ಅಂದಿನ ಇನ್ಸೆಸ್ಪೆಕ್ಟರ್ ಜಯರಾಮ ಗೌಡ ತನಿಖೆ ಕೈಗೊಂಡು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪಿ ಭರತ್‌ಸಿಂಗ್ ಪ್ರಕರಣ ದಾಖಲಾದಾಗಿನಿಂದ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಪ್ರತ್ಯೇಕ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿ ನ್ಯಾಯಾಲಯದ ಮುಂದೆ ವಿಚಾರಣೆಯ ಹಂತದಲ್ಲಿದೆ. ಸದ್ಯ ದಿಲ್‌ರಾಜ್ ವಿರುದ್ಧ ಸರ್ಕಾರದ ಪರವಾಗಿ ಸರ್ಕಾರಿ ವಕೀಲ ರಾಜೇಶ್ ಎಂ.ಮಳಗಿಕರ್ ಅವರು ತಮ್ಮ ಸುದೀರ್ಘ ವಾದ ಮಂಡಿಸಿದ್ದರು.

ಆರೋಪಿಯ ವಿರುದ್ಧ ಸಾಕ್ಷ್ಯಾಧಾರ ಹಾಗೂ ವಕೀಲರ ವಾದ ಪರಿಗಣಿಸಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಶಿರಸಿ ಪೀಠಾಧೀನ ನ್ಯಾಯಾಧೀಶ ಕಿರಣ್ ಶಿಕ್ಷೆ ಪ್ರಕಟಿಸಿದ್ದಾರೆ. ವಿಧಿಸಿರುವ ದಂಡದಲ್ಲಿ 1 ಲಕ್ಷ ರೂ. ಮೃತರ ಕುಟುಂಬದವರಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ಆದೇಶಿಸಿದ್ದಾರೆ.

ಇದನ್ನೂ ಓದಿ:Davanagere crime: ಪ್ರಿಯಕರನೊಂದಿಗೆ ಸೇರಿ ಪತಿ ಕಥೆ ಮುಗಿಸಿದ ಪತ್ನಿ.. ಇಬ್ಬರು ಆರೋಪಿಗಳ ಬಂಧನ

Last Updated : Jun 14, 2023, 2:22 PM IST

ABOUT THE AUTHOR

...view details