ಕಾರವಾರ:ಕೊರೊನಾ ಕರ್ಪ್ಯೂ ಹಿನ್ನೆಲೆ ಬೆಳಗ್ಗೆ ಸೀಮಿತ ಅವಧಿಗೆ ಮಾತ್ರ ಅವಶ್ಯಕ ವಸ್ತುಗಳ ಮಾರಾಟಕ್ಕೆ ಅನುವು ಮಾಡಿದ್ದು, ಕಾರವಾರದಲ್ಲಿ ಇದೀಗ ಬೀದಿ ಬೀದಿಗೆ ತೆರಳಿ ವಾಹನ ಮೂಲಕ ವ್ಯಾಪಾರ ನಡೆಸಲು ಅನುಮತಿ ನೀಡುವಂತೆ ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.
ಜನ ಬರುವ ಹೊತ್ತಿಗೆ ಮಾರುಕಟ್ಟೆ ಬಂದ್: ವಾಹನ ಮೂಲಕ ವ್ಯಾಪಾರ ನಡೆಸಲು ಅನುಮತಿಗೆ ಆಗ್ರಹ
ಕಾರವಾರದಲ್ಲಿ ಕಳೆದ ವರ್ಷದಂತೆ ಬೀದಿ ಬೀದಿಗೆ ತೆರಳಿ ವ್ಯಾಪಾರ ನಡೆಸಲು ಅನುಮತಿ ಹಾಗೂ ಪಾಸ್ ವ್ಯವಸ್ಥೆ ಕಲ್ಪಿಸುವಂತೆ ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.
14 ದಿನಗಳ ಕಾಲ ಸರ್ಕಾರ ವಿಧಿಸಿರುವ ಕೊರೊನಾ ಕರ್ಪ್ಯೂ ಹಿನ್ನೆಲೆ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ಬಳಿಕ ಸಂಪೂರ್ಣ ಬಂದ್ ಆಗಲಿದೆ. ಇದರಿಂದ ನಿತ್ಯ ಜನರು ಮಾರುಕಟ್ಟೆಗಳಿಗೆ ಮುತ್ತಿಗೆ ಹಾಕಿಕೊಳ್ಳುತ್ತಿರುವುದು ಒಂದೆಡೆಯಾದರೇ ಇನ್ನೊಂದೆಡೆ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುವುದು ವ್ಯಾಪಾರಸ್ಥರಿಗೆ ದೊಡ್ಡ ಸವಾಲಾಗಿದೆ.
ಆದರೂ ನಗರದಲ್ಲಿ ಕಳೆದ ಎರಡು ದಿನ ವ್ಯಾಪಾರ ಆರಂಭಿಸಿದಾಗ ಕೊನೆ ಕ್ಷಣದಲ್ಲಿ ಜನರು ಬಂದು ಮುತ್ತಿಗೆ ಹಾಕಿಕೊಳ್ಳುತ್ತಿದ್ದಾರೆ. ಇಲ್ಲಿನ ಜನ ಎದ್ದು ಮಾರುಕಟ್ಟೆಗೆ ಬರುವುದೇ 10 ಗಂಟೆ ಬಳಿಕ. ಆದರೆ, ಅಂಗಡಿ ತೆರೆದು ತರಕಾರಿಗಳನ್ನು ಸುರಿಯುವ ಹೊತ್ತಿಗೆ ಪೊಲೀಸರು ಅಂಗಡಿ ಮುಚ್ಚುವಂತೆ ಸೂಚಿಸುತ್ತಿದ್ದು, ವ್ಯಾಪಾರ ಮಾಡುವುದು ಕಷ್ಟವಾಗಿದೆ. ಆದ್ದರಿಂದ ನಮಗೆ ಕಳೆದ ವರ್ಷದಂತೆ ಬೀದಿ ಬೀದಿಗೆ ತೆರಳಿ ವ್ಯಾಪಾರ ನಡೆಸಲು ಅನುಮತಿ ಹಾಗೂ ಪಾಸ್ ವ್ಯವಸ್ಥೆ ಕಲ್ಪಿಸುವಂತೆ ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.