ಕರ್ನಾಟಕ

karnataka

ETV Bharat / state

ದಾರು ಶಿಲ್ಪದಿಂದ ಪ್ರಸಿದ್ಧಿಯಾಗಿದೆ ಇಲ್ಲಿನ ಮಸೀದಿ: ಜಾತಿ, ಧರ್ಮ ಎಲ್ಲವನ್ನೂ ಮೀರಿದ್ದು ಕಲೆ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಜೂರು ಎಂಬಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿ ಶಿಲ್ಪಕಲಾ ವೈಭವದಿಂದ ಕಂಗೊಳಿಸುತ್ತಿದೆ.

By

Published : Mar 10, 2019, 11:19 AM IST

ಬದ್ರಿಯಾ ಜುಮ್ಮಾ ಮಸೀದಿ

ಉಡುಪಿ: ಇಲ್ಲಿನ ಮಸೀದಿಯ ಅದ್ಭುತ ಶಿಲ್ಪಕಲೆಯ ಸೌಂದರ್ಯ ಎಲ್ಲರ ಆಕರ್ಷಿಣಿಯ ಕೇಂದ್ರವಾಗಿದೆ. ಇಸ್ಲಾಂ ಧರ್ಮಿಯರ ಪ್ರಾರ್ಥನಾ ಮಂದಿರಗಳಲ್ಲೇ ಬಲು ಅಪರೂಪದ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಬದ್ರಿಯಾ ಜುಮ್ಮಾ ಮಸೀದಿ

ಪ್ರಾರ್ಥನಾ ಮಂದಿರಗಳು ಶಾಂತಿ ಸಮಾಧಾನ ನೀಡುವ ತಾಣಗಳು. ಅದರ ಒಳಭಾಗದ ವಿನ್ಯಾಸಗಳು ಭಕ್ತಿ ಸ್ಫುರಣೆಯ ಕೇಂದ್ರವಾಗಬೇಕು. ಅಂತಹ ಶಕ್ತಿ ಕಲೆಗಿದೆ. ಜಿಲ್ಲೆಯ ಕಾಪು ತಾಲೂಕಿನ ಮಜೂರು ಎಂಬಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿ ಕಾಷ್ಠ ಶಿಲ್ಪದ ವೈಭವದಿಂದ ಕಂಗೊಳಿಸುತ್ತಿದೆ. ಅತಿ ಅಪರೂಪ ಎಂಬಂತೆ ಇಂಡೋ-ಅರೆಬಿಕ್ ಶೈಲಿಯನ್ನು ಬಳಸಿ ಆಕರ್ಷಣೀಯವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ಯುವ ಪ್ರತಿಭಾವಂತ ಶಿಲ್ಪಿ ಹರೀಶ್ ಆಚಾರ್ಯ ತಮ್ಮ 10 ಜನರ ಬಳಗದೊಂದಿಗೆ ಸುಮಾರು 10 ತಿಂಗಳು ಶ್ರಮ ವಹಿಸಿ ಈ ಸುಂದರ ಪ್ರಾರ್ಥನಾ ಮಂದಿರವನ್ನು ಅಣಿಗೊಳಿಸಿದ್ದಾರೆ. ಇದಕ್ಕಾಗಿ ಊರಿನಲ್ಲೇ ದೊರೆತ ಒಂದು ಸಾವಿರ ಸಿಎಫ್​ಟಿ ಸಾಗುವಾನಿ ಮರಗಳನ್ನೇ ಬಳಸಲಾಗಿದೆ. ಮರಗಳ ಕೆತ್ತನೆಗಳಿಗೆ ಸರಿ ಹೊಂದುವಂತೆ ದುಬೈ ಮುಂತಾದೆಡೆಗಳಿಂದ ಆಕರ್ಷಕ ಲೈಟ್ ಗಳನ್ನು ತರಿಸಲಾಗಿದೆ. ಪ್ರಥಮ ಬಾರಿಗೆ ಮಿಂಬರ್ ಮೆಹರಬ್ ಗಳನ್ನು ಮರದಿಂದ ನಿರ್ಮಿಸಲಾಗಿದೆ. ಮೆಹರಬ್​​ನ ಒಂದು ಭಾಗದ ಹಿಡಿಯ ಒಳಭಾಗದಲ್ಲಿ ಸೂಕ್ಷ್ಮ ಕೆತ್ತನೆಯ ಮಸೀದಿ ಕೆತ್ತಲಾಗಿದೆ. ಸುಂದರ ಕಂಬಗಳು ಅಡ್ಡ ಪಟ್ಟಿಗಳು ಹಳೆಯ ದೇವಾಲಯಗಳ ಶಿಲಾ ಕೆತ್ತನೆಯನ್ನು ನೆನಪಿಸುತ್ತದೆ.

ಬದ್ರಿಯಾ ಜುಮ್ಮಾ ಮಸೀದಿ

ನೂರು ವರ್ಷಕ್ಕಿಂತಲೂ ಅಧಿಕ ಇತಿಹಾಸವಿರುವ ಕಾಪು ಮಜೂರಿನ ಬದ್ರಿಯಾ ಜುಮ್ಮಾ ಮಸೀದಿ ಸದ್ಯ ಆಕರ್ಷಕ ದಾರು ಶಿಲ್ಪದಿಂದ ಪ್ರಸಿದ್ಧಿಯಾಗಿದೆ. ಒಳಾಂಗಣ ಪ್ರವೇಶಿಸುತ್ತಿದ್ದಂತೆ ಸುಂದರ ಗಾಜಿನ ಬಾಗಿಲು ಭವ್ಯ ಕಾಷ್ಠ ಶಿಲ್ಪ ಪ್ರಾಂಗಣವನ್ನು ಅನಾವರಣಗೊಳಿಸುತ್ತದೆ.

ಈ ಹಿಂದೆ ಕಾಸರಗೋಡು ಬಾರ್ಕೂರುನಲ್ಲಿ ಈ ರೀತಿಯ ದಾರು ಶಿಲ್ಪದ ಮಸೀದಿಗಳು ಇದ್ದವು. ಆದ್ರೆ, ಈ ರೀತಿಯ ಮರದ ಕೆತ್ತನೆಗಳನ್ನು ಬಳಸಿದ ಮೊದಲ‌ ಮಸೀದಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ಪ್ರಾರ್ಥನಾ ಮಂದಿರದ ಕೆತ್ತನೆಯಲ್ಲಿ ಮಸೀದಿ, ಮೀನಾರ್, ಗುಂಬಜ್, ನಕ್ಷತ್ರ ಹೀಗೆ ಹಲವು ಆಕಥರಿಯನ್ನು ಮೂಡಿಸಲಾಗಿದೆ. ಮಸೀದಿಯ ಯುವಕರ ದಫ್ ತಂಡ ರಾಜ್ಯಮಟ್ಟದ ನೂರಾರು ಪ್ರಶಸ್ತಿಗಳನ್ನು ಪಡೆದಿದೆ. ಅಷ್ಟೇ ಅಲ್ಲದೆ ಇಲ್ಲಿನ ಯುವಕರ ತಂಡ ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿಯೂ ಹೆಸರುವಾಸಿಯಾಗಿದೆ.

ಜಾತಿ, ಧರ್ಮ, ದೇಶ, ಭಾಷೆ ಎಲ್ಲವನ್ನೂ ಮೀರಿದ್ದು ಕಲೆ. ಮನಸಿಗೆ‌ ಸುಖ ಮತ್ತು ಶಾಂತಿಯನ್ನು ಕೊಡುವ ಏಕೈಕ ಸಾಧನ ಕಲೆ. ಇಂತಹ ಕಾಷ್ಠ ಶಿಲ್ಪ ಕಲೆ ಮಸೀದಿಯಲ್ಲಿರಲಿ, ಮಂದಿರದಲ್ಲಿರಲಿ ಪ್ರಾರ್ಥನೆ ಸಲ್ಲಿಸುವವನ ಚಿತ್ತದಲ್ಲಿ ಏಕಾಗ್ರತೆ, ನೆಮ್ಮದಿಯನ್ನು ತುಂಬುತ್ತೆ ಅನ್ನೋದು ಮಾತ್ರ ಸುಳ್ಳಲ್ಲ.

ABOUT THE AUTHOR

...view details