ಉಡುಪಿ:ಕೆಸರು ಗದ್ದೆಯಲ್ಲಿ ಕೊಬ್ಬಿದ ಕೋಣಗಳ ಓಟ, ತುಳುನಾಡಿನ ಅಪ್ಪಟ ಜನಪದ ಆಟ ಅಂದರೆ ಅದು ಕರಾವಳಿಯ ಕಂಬಳ. ಪ್ರತಿಬಾರಿ ಕಂಬಳದಲ್ಲಿ ಒಂದಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ. ಈ ಬಾರಿ ಪುಟ್ಟ ಪೋರಿಯೊಬ್ಬಳು ಕಂಬಳ ಗದ್ದೆಗೆ ಇಳಿದು ಎಲ್ಲರ ಗಮನಸೆಳೆದಿದ್ದಾಳೆ.
ಕೆಸರು ಗದ್ದೆಯ ಆಟ ಕಂಬಳ, ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವೆರೆಗೂ ಎಲ್ಲ ವಯೋಮಾನದವರನ್ನೂ ತನ್ನತ್ತ ಆಕರ್ಷಿಸುತ್ತದೆ. ಈ ವರ್ಷದ ಕಂಬಳದಲ್ಲಿ ಬಾಲಕಿಯೊಬ್ಬಳು ಭಾಗಿಯಾಗಿದ್ದು, ಎಲ್ಲರ ಗಮನ ಸೆಳೆದಿದ್ದಾಳೆ. ತಲೆಗೊಂದು ಮುಂಡಾಸು ಬಿಗಿದು ತನ್ನ ಮನೆಯ ಕೋಣಗಳ ಜೊತೆಗೆ ಕಂಬಳ ಗದ್ದೆಗೆ ಇಳಿದು ಹೊಸ ಅಧ್ಯಾಯ ಬರೆದಿದ್ದಾಳೆ ತುಳುನಾಡ ಪೊಣ್ಣು. ಈ ಬಾಲೆಯ ಹೆಸರು ಚೈತ್ರಾ. ಕುಂದಾಪುರದ ಬೋಳಂಬಳ್ಳಿ ಗ್ರಾಮದ ಪರಮೇಶ್ವರ ಭಟ್ ಮತ್ತು ರಮ್ಯಾ ದಂಪತಿಯ ಹಿರಿಯ ಪುತ್ರಿ. 11 ವರ್ಷದ ಚೈತ್ರಾ ಆರನೇ ತರಗತಿ ಓದುತ್ತಿದ್ದಾಳೆ. ತಾನು ಕೂಡ ಕಂಬಳದಲ್ಲಿ ಕೋಣಗಳನ್ನು ಓಡಿಸಬೇಕು, ಕಂಬಳ ಕ್ಷೇತ್ರದ ಹುಸೇನ್ ಬೋಲ್ಟ್ ಶ್ರೀನಿವಾಸ ಗೌಡರಂತೆ ಮಿಂಚಬೇಕು ಅಂತ ಕನಸು ಕಾಣುತ್ತಿದ್ದಾಳೆ. ಇದಕ್ಕಾಗಿ ಮನೆಯ ಗದ್ದೆಯಲ್ಲಿ ಪ್ರಾಕ್ಟೀಸ್ ಕೂಡ ನಡೆಸುತ್ತಿದ್ದಾಳಂತೆ.