ಉಡುಪಿ: ಕರಾವಳಿ ಭಾಗದ ಮೀನುಗಾರರು ಪ್ಯಾಕೇಜ್ ಘೋಷಣೆಗೆ ಬೇಡಿಕೆಯಿರಿಸಿದ್ದಾರೆ. ಆದರೀಗ ರೇಷನ್ ಸಹಿತ ಮೂಲಭೂತ ವ್ಯವಸ್ಥೆಯನ್ನಷ್ಟೇ ಮಾಡಬಹುದು ಅಂತ ಮೀನುಗಾರಿಕೆ, ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.
ಮಣಿಪಾಲದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ವೈಯುಕ್ತಿಕವಾಗಿ ತೆರಳಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಲು ಮೀನುಗಾರರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ತೇವೆ. ಸರ್ಕಾರ ನೆರವು ನೀಡುತ್ತೆ, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸಹಕರಿಸಿ. ಸಚಿವೆ ಶಶಿಕಲಾ ಜೊಲ್ಲೆ ಕೂಡಾ ಮೀನುಗಾರರಿಗೆ ನೆರವು ಕೇಳಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದ್ರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ಡೌನ್ ವೇಳೆ ಜನಸಂದಣಿ ಹೆಚ್ಚಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೂರು ದಿನ ಕಟ್ಟುನಿಟ್ಟಿನ ಕರ್ಫ್ಯೂ ಪಾಲಿಸಲಾಗಿದೆ. ದಿನಸಿ, ಹಾಲು ಖರೀದಿಗೆ ಅವಕಾಶ ನೀಡಲಾಗಿದೆ. ಒತ್ತಡ ಹೆಚ್ಚಾಗಿ ಜನರು ಹೊರ ಬಂದಿರುವುದು ನಿಜ. ಜನರು ಅವಶ್ಯಕ ಸಾಮಾಗ್ರಿಗಳನ್ನು ಪಡೆಯಲು ರಸ್ತೆಗೆ ಬಂದಿದ್ದಾರೆ. ಇವತ್ತು ಸಮಸ್ಯೆ ಆಗಿದೆ ನಿಜ, ಅಗತ್ಯಬಿದ್ದರೆ ಇನ್ನಷ್ಟು ನಿಯಮಗಳನ್ನು ಸಡಿಲ ಮಾಡಲು ಪ್ರಯತ್ನಿಸಿ ಶಾಂತಿಯುತ ವಹಿವಾಟಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.