ತುಮಕೂರು:ಮಹಾಲಯ ಅಮಾವಾಸ್ಯೆಯ ದಿನ ಸಿಎಂ ಯಡಿಯೂರಪ್ಪ ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಗ್ರಾಮದ ಹೊನ್ನಮ್ಮದೇವಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಈ ವೇಳೆ ಮುಖ್ಯಮಂತ್ರಿ ಅವರ ಗನ್ ಮ್ಯಾನ್ ದೇಗುಲದಿಂದ ಎರಡು ವಿಶೇಷ ತೆಂಗಿನಕಾಯಿಗಳನ್ನು ಕೆಂಪು ವಸ್ತ್ರದಲ್ಲಿ ತೆಗೆದುಕೊಂಡು ಬಂದಿದ್ದು ನೆರೆದಿದ್ದವರ ಚರ್ಚೆಗೆ ಒಳಗಾಗಿತ್ತು.
ಸಿಎಂ ಹಾಗೂ ತೆಂಗಿನಕಾಯಿ ರಹಸ್ಯ....ಏನಿದು ದೇವಿ ಪೂಜೆ!!
ಮಹಾಲಯ ಅಮಾವಾಸ್ಯೆ ದಿನ ಸಿಎಂ ಯಡಿಯೂರಪ್ಪ ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಗ್ರಾಮದ ಹೊನ್ನಮ್ಮದೇವಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಎರಡು ವಿಶೇಷ ತೆಂಗಿನ ಕಾಯಿಗಳನ್ನು ಪಡೆದಿದ್ದರು. ದೇಗುಲದ ಮೂಲಗಳ ಪ್ರಕಾರ ಯಡಿಯೂರಪ್ಪ ಅವರ ಸಮಸ್ಯೆಗಳಿಗೆ ಪರಿಹಾರ ಸಿಗಲೆಂದು ತೆಂಗಿನಕಾಯಿಗಳಿಗೆ ಒಂದು ತಿಂಗಳ ಕಾಲ ದೇಗುಲದಲ್ಲಿ ಪೂಜೆ ಸಲ್ಲಿಸಲಾಗಿತ್ತು ಎಂದು ಹೇಳಲಾಗಿದೆ.
ಆದರೆ ಹೊನ್ನಮ್ಮ ದೇವಿ ದೇಗುಲದ ಮೂಲಗಳ ಪ್ರಕಾರ ಎರಡು ತೆಂಗಿನಕಾಯಿಗಳನ್ನು ಒಂದು ತಿಂಗಳಿನಿಂದ ನಿರಂತರವಾಗಿ ದೇವಿಯ ಗರ್ಭಗುಡಿಯಲ್ಲಿ ಇರಿಸಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಮಹಾಲಯ ಅಮಾವಾಸ್ಯೆಯ ದಿನದಂದು ಅದನ್ನು ಪ್ರಸಾದ ರೂಪದಲ್ಲಿ ದೇಗುಲಕ್ಕೆ ಬಂದು ತೆಗೆದುಕೊಂಡು ಹೋಗುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಿಳಿಸಲಾಗಿತ್ತು. ಅಲ್ಲದೆ ಆ ತೆಂಗಿನ ಕಾಯಿಗಳನ್ನು ಮನೆಯಲ್ಲಿ ಇಟ್ಟು ಪೂಜೆ ಸಲ್ಲಿಸುವಂತೆ ದೇಗುಲದ ಅರ್ಚಕರು ಸೂಚನೆ ನೀಡಿದ್ದರು ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿಗಳು ಬಂದ ಸಂದರ್ಭದಲ್ಲಿ ತೆಂಗಿನಕಾಯಿಗಳ ಕುರಿತು ದೇಗುಲದ ಅರ್ಚಕರು ಹಾಗೂ ಧರ್ಮದರ್ಶಿಗಳು ಬಹಿರಂಗಪಡಿಸಿರಲಿಲ್ಲ. ಇದೀಗ ದೇಗುಲದ ಮೂಲಗಳ ಪ್ರಕಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಮಸ್ಯೆಗಳಿಗೆ ಪರಿಹಾರ ಸಿಗಲೆಂದು ನಿರಂತರವಾಗಿ ಒಂದು ತಿಂಗಳ ಕಾಲ ಹೊನ್ನಮ್ಮ ದೇವಿ ದೇಗುಲದ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸಲಾಗಿತ್ತು ಎಂದು ಹೇಳಲಾಗಿದೆ.