ರಾಮನಗರ:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ನಡೆಸುವಾಗ ಊಹಾಪೋಹ ಸಹಜ. ಯಡಿಯೂರಪ್ಪ ನಮ್ಮ ನಾಯಕರು. ಅವರೇ ನಮ್ಮ ಮುಖ್ಯಮಂತ್ರಿ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಯಾರೇ ಸರ್ಕಾರ ನಡೆಸಿದರೂ ಊಹಾಪೋಹಗಳು ಸಹಜ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು. ಕೋವಿಡ್ ಪರಿಸ್ಥಿತಿಯಲ್ಲೂ ಯಡಿಯೂರಪ್ಪನವರು ಯುವಕರಂತೆ ಕಾರ್ಯನಿರ್ವಹಿಸಿದ್ದಾರೆ. ಅವರೇ ನಮ್ಮ ನಾಯಕರು. ನಮ್ಮದು ಬಲವಾದ ಹೈಕಮಾಂಡ್ ಎಂದರು.
ವಲಸೆ ಕಾರ್ಮಿಕರಿಗೆ 30 ಲಕ್ಷ, ಕ್ವಾರಂಟೈನ್ ತಪಾಸಣೆಗೆ 50 ಲಕ್ಷ, ಲ್ಯಾಬ್ ಮತ್ತು ಆಸ್ಪತ್ರೆಗೆ 2 ಕೋಟಿ 62 ಲಕ್ಷ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಅಡಿಯಲ್ಲಿ ಬಿಡುಗಡೆ ಮಾಡಿದ್ದೇವೆ. ರಾಮನಗರ ಜಿಲ್ಲೆಯಲ್ಲಿನ ಎರಡು ತಾಲೂಕು ಬರ ಪೀಡಿತ ಎಂದು ಘೋಷಣೆಯಾಗಿದೆ. ಒಟ್ಟು 2.71 ಕೋಟಿ ಬಿಡುಗಡೆ ಮಾಡಲಾಗಿದೆ. ಇನ್ನೂ 13.5 ಕೋಟಿ ಜಿಲ್ಲಾಧಿಕಾರಿ ಖಾತೆಯಲ್ಲಿದ್ದು, ಅದನ್ನು ಮತ್ತಿತರ ವಿಕೋಪಗಳಿಗೆ ಬಳಸಲಾಗುವುದು ಎಂದರು.