ಕರ್ನಾಟಕ

karnataka

By

Published : Dec 28, 2021, 7:33 PM IST

Updated : Dec 28, 2021, 7:48 PM IST

ETV Bharat / state

ಬಿಜೆಪಿಗೆ ಹೆಸರು ಬರಬಾರದೆಂದು ಕಾಂಗ್ರೆಸ್​ ಪಾದಯಾತ್ರೆ ಹಮ್ಮಿಕೊಂಡಿದೆ : ಸಚಿವ ವಿ.ಸೋಮಣ್ಣ

ಮೇಕೆದಾಟು ಯೋಜನೆ ನಿನ್ನೆ ಮೊನ್ನೆಯದ್ದಲ್ಲ. ಮಾಜಿ ಪ್ರಧಾನಿ ದೇವೇಗೌಡರು‌ ಸಿಎಂ ಆದಾಗಿನಿಂದಲೂ ಇದೆ. ಇದೀಗ ಒಂದು ಹಂತಕ್ಕೆ ಬಂದಿದೆ. ಮೇಕೆದಾಟು ಆಗಬೇಕು ಎಂಬುದು ಎಲ್ಲರ ಆಶಯವಾಗಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

somanna
ಸೋಮಣ್ಣ

ರಾಮನಗರ :ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸುವ ಮೂಲಕ ರಾಜಕೀಯ ಮಾಡುತ್ತಿದೆ. ಈ ಹಿಂದೆ ಅವರೇ ಸರ್ಕಾರದಲ್ಲಿ ಇದ್ದರೂ ಈ ಯೋಜನೆ ಆರಂಭಿಸಿಲ್ಲ. ಈಗ ಕಾನೂನು ತೊಡಕು ಮುಗಿಸಿ, ತಾಂತ್ರಿಕ ಸಮಸ್ಯೆಗಳನ್ನ ಮುಗಿಸಿ ಒಂದು ಹಂತಕ್ಕೆ ಬಂದಿದೆ. ಇದನ್ನ ತಿಳಿದುಕೊಂಡು ಬಿಜೆಪಿಗೆ ಹೆಸರು ಬರಬಾರದು ಎಂದು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ಮಾತನಾಡಿದ ಅವರು, ಡಿ‌ ಕೆ ಶಿವಕುಮಾರ್ ಕನಕಪುರ ತಾಲೂಕಿನವರಾಗಿರೋದರಿಂದ ಅವರ ಕರ್ತವ್ಯ ಮಾಡುತ್ತಿದ್ದಾರೆ. ಈ ಯೋಜನೆ ಆರಂಭಿಸುತ್ತೇವೆ ಎಂದು ಈಗಾಗಲೇ ಸಿಎಂ ಅವರು ಹೇಳಿದ್ದಾರೆ. ಹೀಗಾಗಿ, ಈ ಯೋಜನೆ ಜಾರಿ ಮಾಡುತ್ತೇವೆ. ಜನರಿಗೆ ಅನುಕೂಲವಾಗುವ ಯೋಜನೆಗಳನ್ನ ಸರ್ಕಾರ ಮಾಡುತ್ತದೆ ಎಂದರು.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ

ಮೇಕೆದಾಟು ಯೋಜನೆ ನಿನ್ನೆ ಮೊನ್ನೆಯದ್ದಲ್ಲ..

ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಇದೆ. ಏನೋ ಮಾಡುತ್ತಿದ್ದಾರೆ. ಮೇಕೆದಾಟು ಯೋಜನೆ ನಿನ್ನೆ ಮೊನ್ನೆಯದ್ದಲ್ಲ. ಮಾಜಿ ಪ್ರಧಾನಿ ದೇವೇಗೌಡರು‌ ಸಿಎಂ ಆದಾಗಿನಿಂದಲೂ ಇದೆ. ಇದೀಗ ಒಂದು ಹಂತಕ್ಕೆ ಬಂದಿದೆ. ಮೇಕೆದಾಟು ಆಗಬೇಕು ಎಂಬುದು ಎಲ್ಲರ ಆಶಯವಾಗಿದೆ. ಕಾನೂನು ಚೌಕಟ್ಟಿನಲ್ಲಿ ಯೋಜನೆ ಮಾಡಬೇಕಾಗಿದ್ದು, ಕಾನೂನು ಮೀರಲು ಯಾರಿಂದಲೂ ಸಾಧ್ಯವಿಲ್ಲ. ಇದೀಗ ಕಾಂಗ್ರೆಸ್‌ನವರಿಗೆ ಜ್ಞಾನೋದಯ ಆಗಿದೆ ಎಂದು ಸಚಿವರು ಕಿಡಿ ಕಾರಿದರು.

2ನೇ ಅಲೆಯಲ್ಲಾದಂತೆ 3ನೇ ಅಲೆಯಲ್ಲಾಗಬಾರದು..

ರಾಜ್ಯದಲ್ಲಿ ನೈಟ್ ಕರ್ಫೂ ಇಂದಿನಿಂದ ಜಾರಿಯಾಗಿದೆ. ಸಾರ್ವಜನಿಕರು ಹಾಗೂ ವಿರೋಧಪಕ್ಷದವರು ಆಕ್ರೋಶ ವ್ಯಕ್ರಪಡಿಸುವುದು ಸಹಜ. ಎರಡನೇ ಅಲೆಯಲ್ಲಿ ಆದ ಘಟನೆಗಳು ಮೂರನೇ ಅಲೆಯಲ್ಲಿ ಆಗಬಾರದು ಎಂಬುದು ನಮ್ಮ ಚಿಂತನೆ. ಸಿ ಟಿ ರವಿ ಅವರು ಯಾವ ರೀತಿ ಹೇಳಿದ್ದಾರೆ ನನಗೆ ಗೊತ್ತಿಲ್ಲ. ಸಿಎಂ ಅವರೂ ಸರಿಯಾದ ಕ್ರಮ ತೆಗೆದುಕೊಂಡಿದ್ದಾರೆ. ಇದಕ್ಕೆ ಸಾರ್ವಜನಿಕರು ಸಹಕಾರ ಕೊಡಬೇಕು ಎಂದರು.

ಇದನ್ನೂ ಓದಿ: ನೈಟ್ ಕರ್ಫ್ಯೂ : ಸರ್ಕಾರದ ಆದೇಶಕ್ಕೆ ಶಾಸಕ ಸಿ ಟಿ ರವಿ ಅಸಮಾಧಾನ

ಸಿಎಂ ಬದಲಾವಣೆ ಊಹಾಪೋಹ..

ಮುಖ್ಯಮಂತ್ರಿ ‌ಬದಲಾಗುತ್ತಾರೆಂಬುದು ಕೇವಲ ಊಹಾಪೋಹ ಅಷ್ಟೇ.. ಆಡಳಿತ ಯಂತ್ರ ನಿಷ್ಕ್ರಿಯಗೊಳಿಸಲು ಮಾಡುವ ಪಿತೂರಿ ಅದು. ಸಿಎಂ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಅರುಣ್ ಸಿಂಗ್ ಅವರು ಸಿಎಂ ಆಗಿ ಇವರೇ ಮುಂದುವರೆಯಲಿದ್ದಾರೆಂದು ಹೇಳಿದ್ದಾರೆ. ಬಸವರಾಜ್ ಬೊಮ್ಮಾಯಿ ಯಶಸ್ವಿಯಾಗಿ ಎರಡು ಅಧಿವೇಶನ ನಡೆಸಿದ್ದಾರೆ. ಯಡಿಯೂರಪ್ಪ ಸ್ವ-ಪ್ರೇರಣೆಯಿಂದ ರಾಜೀನಾಮೆ ಕೊಟ್ಟಿದ್ದಾರೆ. 2023ರ ಚುನಾವಣೆ ಕೂಡ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

Last Updated : Dec 28, 2021, 7:48 PM IST

ABOUT THE AUTHOR

...view details