ಕರ್ನಾಟಕ

karnataka

By

Published : Aug 16, 2020, 12:10 AM IST

ETV Bharat / state

ಲಿಂಗಸುಗೂರು: ಬಗೆಹರಿಯದ ನಡುಗಡ್ಡೆ ಜನರ ಸ್ಥಳಾಂತರ ಸಮಸ್ಯೆ!

ಲಿಂಗಸುಗೂರು ತಾಲ್ಲೂಕಿನ ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶದ ಕುಟುಂಬಗಳ ಸ್ಥಳಾಂತರ ಮೂರು ದಶಕಗಳಿಂದ ಇಂದಿಗೂ ಪರಿಹಾರ ಕಾಣದೆ ಹೋಗಿದ್ದು, ಸಂತ್ರಸ್ತ ಕುಟುಂಬಸ್ಥರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

lingasuguru
ನಡುಗಡ್ಡೆ ಜನರ ಸ್ಥಳಾಂತರ ಸಮಸ್ಯೆ

ಲಿಂಗಸುಗೂರು: ನಡುಗಡ್ಡೆ ಜನರ ಸ್ಥಳಾಂತರ ವರ್ಷದಿಂದ ವರ್ಷಕ್ಕೆ ಕಗ್ಗಂಟಾಗುತ್ತಾ ಹೊರಟಿದ್ದು, ಕಳೆದ ಮೂರು ದಶಕಗಳಿಂದಲೂ ಇವರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ತಾಲ್ಲೂಕಿನ ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶಗಳಾದ ಮ್ಯಾದಾರಗಡ್ಡಿ, ಕರಕಲಗಡ್ಡಿ, ವಂಕಮ್ಮನಗಡ್ಡಿ ಜನರ ಶಾಶ್ವತ ಸ್ಥಳಾಂತರ, ಕಡದರಗಡ್ಡಿ ಕೆಲ ಕುಟುಂಬಗಳ ಸ್ಥಳಾಂತರವೂ ಕೂಡ ಮೂರು ದಶಕಗಳಿಂದ ಇಂದಿಗೂ ಪರಿಹಾರ ಕಾಣದೆ ಹೋಗಿದ್ದು, ಸಂತ್ರಸ್ತ ಕುಟುಂಬಸ್ಥರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಬಗೆಹರಿಯದ ನಡುಗಡ್ಡೆ ಜನರ ಸ್ಥಳಾಂತರ ಸಮಸ್ಯೆ

ಇವರು ಶತ ಶತಮಾನಗಳಷ್ಟು ವರ್ಷಗಳಿಂದ ನಡುಗಡ್ಡೆಗಳಲ್ಲಿ ವಾಸಿಸುತ್ತ ಬಂದಿದ್ದಾರೆ. ಆದರೆ, ಕಳೆದ 38 ವರ್ಷಗಳ ಹಿಂದೆ ನಿರ್ಮಾಣಗೊಂಡ ನಾರಾಯಣಪುರ ಅಣೆಕಟ್ಟು ಶಾಪವಾಗಿ ಪರಿಣಮಿಸಿದೆ. ಪ್ರವಾಹ ಆಧರಿಸಿ ಹೆಚ್ಚುವರಿ ನೀರು ನದಿಗೆ ಬಿಡುತ್ತಿರುವುದು ಭಾರೀ ಸಮಸ್ಯೆ ತಂದೊಡ್ಡಿದೆ ಎಂಬುದು ಸಂತ್ರಸ್ತ ಕುಟುಂಬಸ್ಥರ ಅಂಬೋಣವಾಗಿದೆ.

ಸರ್ಕಾರ ಎರಡು ದಶಕಗಳಿಂದ ಪ್ರವಾಹದ ಭೀಕರತೆ ಅರಿತು ಶಾಶ್ವತ ಸ್ಥಳಾಂತರ ಭರವಸೆ ನೀಡುತ್ತ ಬಂದಿದೆ. ಸಚಿವ, ಸಂಸದರು, ಶಾಸಕರು, ಸರ್ಕಾರದ ಕಾರ್ಯದರ್ಶಿ, ಶಾಸಕರು ಅಧಿಕಾರಿಗಳ ತಂಡ ನೀಡುತ್ತ ಬಂದಿರುವ ಭರವಸೆಗಳಿಂದ ಜನತೆ ರೋಸಿ ಹೋಗಿದ್ದಾರೆ. ಕೃಷ್ಣಾ ಪ್ರವಾಹದಲ್ಲಿ ಜೀವ ಕಳೆದುಕೊಂಡ ಕುಟುಂಬಗಳು ದಶಕ ಕಳೆದರು ಪರಿಹಾರ ಪಡೆದಿಲ್ಲ. ಮನೆಗಳ ನಿರ್ಮಾಣಕ್ಕೆ ಸರ್ಕಾರಿ ಜಮೀನಿನಲ್ಲಿ ಭೂಮಿ ಪೂಜೆ ಮಾಡುತ್ತಾರೆ. ಒಂದೇ ವಾರದಲ್ಲಿ ತಡೆಯಾಜ್ಞೆ ಬರುತ್ತಿದ್ದು ದೊಂಬರಾಟವಾಗಿ ಪರಿಣಮಿಸಿದೆ.

ನಡುಗಡ್ಡೆ ಗ್ರಾಮವಾದ ಯಳಗುಂದಿ ಬಳಿ ಕಂದಾಯ ಇಲಾಖೆಯ ಸರ್ಕಾರಿ ಜಮೀನೊಂದಿದೆ. ಅದರಲ್ಲಿ ಓರ್ವ ವ್ಯಕ್ತಿಗೆ ಕಂದಾಯ ಇಲಾಖೆಯಿಂದ ಸ್ವಲ್ಪ ಜಮೀನು ಮಂಜೂರು ಆಗಿದೆ ಎಂದು ತಂಟೆ ತಗೆಯುತ್ತ ಬಂದಿದ್ದಾರೆ. ಮಂಜೂರು ಮಾಡಿದ, ಸರ್ವೇ ಮಾಡುವ ಅಧಿಕಾರ ಹೊಂದಿದ ಇಲಾಖೆಯ ನಿರ್ಲಕ್ಷ್ಯವೇ ವಿಳಂಬ ಧೋರಣೆಗೆ ನಿದರ್ಶನವಾಗಿದೆ. ಓರ್ವ ವ್ಯಕ್ತಿಗೆ ಮಂಜೂರಾದ ಜಮೀನು ಎಲ್ಲಿಯದು? ಚಕಬಂದಿ ಏನು? ಎಷ್ಟು ಎಕರೆ? ಯಾರಿಗೆ ಮಂಜೂರು ಅಗಿದೆ ಎಂಬುದರ ಮೇಲೆ ನಿರ್ಣಯಿಸಬಹುದು. ಇಡಿ ನಡುಗಡ್ಡೆ ಸಂತ್ರಸ್ತ ಕುಟುಂಬಗಳ ಸ್ಥಳಾಂತರಕ್ಕೆ ಕಾರಣ ಆದ ವ್ಯಕ್ತಿಗೆ ಆಡಳಿತ, ರಾಜಕೀಯ ವ್ಯವಸ್ಥೆ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ರೈತ ಸಂಘಟನೆಗಳ ಆರೋಪವಾಗಿದೆ.

ಭೂ ಕಂದಾಯ ಕಾಯ್ದೆ, ಸರ್ಕಾರಿ ಭೂಮಿ ಹಂಚಿಕೆ ಮಾಡುವ ಅಧಿಕಾರ ಹೊಂದಿದ ಅಧಿಕಾರಿಗಳು ಸಣ್ಣ ಪುಟ್ಟ ಕಾರಣಕ್ಕೆ ಬಳಕೆ ಮಾಡುತ್ತಾರೆ. ಅದರೆ, ಸಂತ್ರಸ್ತರ ಸ್ಥಳಾಂತರಕ್ಕೆ ಅಧಿಕಾರ ಬಳಕೆಗೆ ಮುಂದಾಗದಿರುವ ಅಧಿಕಾರಿಗಳ ತಾತ್ಸಾರ ಮನೋಭಾವಕ್ಕೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದಲ್ಲಿ ನಮಗೆ ನ್ಯಾಯ ಸಿಗಲ್ಲ ಎಂಬುದು ಸಂತ್ರಸ್ತರ ಅಳಲಾಗಿದೆ.

ABOUT THE AUTHOR

...view details