ರಾಯಚೂರು: ಬಿಸಿಯೂಟ ನೌಕರರ ಬಾಕಿ ವೇತನ ಪಾವತಿ ಹಾಗು ನೌಕರರ ಮೇಲೆ ಹಾಕಿರುವ ಮೊಕದ್ದಮೆ ವಾಪಸ್ ಪಡೆಯುವಂತೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ರಾಯಚೂರು: ಬಿಸಿಯೂಟ ನೌಕರರ ಬಾಕಿ ವೇತನ ಪಾವತಿಗೆ ಆಗ್ರಹ
ಬಾಕಿ ವೇತನ ಪಾವತಿ ಮತ್ತು ನೌಕರರ ಮೇಲೆ ಹಾಕಿರುವ ಮೊಕದ್ದಮೆಯನ್ನು ವಾಪಸ್ ಪಡೆಯುವಂತೆ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ರಾಯಚೂರು ಜಿಲ್ಲಾ ಕಾರ್ಯಕರ್ತರು ಒತ್ತಾಯಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಬಿಸಿಯೂಟ ಯೋಜನೆಯಡಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ 1.17 ಲಕ್ಷ ಮಹಿಳೆಯರಿಗೆ 2,600 ರೂ. ಗೌರವಧನ ಬಿಟ್ಟರೆ ಬೇರೆ ಯಾವುದೇ ಸವಲತ್ತುಗಳಿಲ್ಲ. ಆದ ಕಾರಣ ಕಳೆದ 5 ತಿಂಗಳಿಂದ ಶಾಲೆಗಳು ಪ್ರರಂಭವಾಗುವವರೆಗೂ ನಿಲ್ಲಿಸಿರುವ ವೇತನ ಪಾವತಿಸಬೇಕು.
ಅಲ್ಲದೆ, ಆಗಸ್ಟ್ 17ರಂದು ಬಿಸಿಯೂಟ ನೌಕರರು ಬೇಡಿಕೆಗಳನ್ನು ಈಡೇರಿಸುವಂತೆ ಶಿಕ್ಷಣ ಸಚಿವರ ಮನೆಯ ಮುಂದೆ ಪ್ರತಿಭಟನೆ ಮಾಡಲಾಗಿತ್ತು. ಈ ವೇಳೆ ಸಂಘಟನೆಯ 70 ಜನ ಮಹಿಳೆಯರ ಮೇಲೆ ಮೊಕದ್ದಮೆ ದಾಖಲಿಸಲಾಗಿತ್ತು. ಈ ಮೊಕದ್ದಮೆಗಳನ್ನು ಕೂಡಲೆ ವಾಪಸ್ ಪಡೆಯಬೇಕು ಹಾಗೂ ಕೋವಿಡ್ ಕೇಂದ್ರಗಳಿಗೆ ಅಡುಗೆ ಮಾಡಿ ಬಡಿಸುತ್ತಿರುವ ನೌಕರರ ವೇತನ ಪಾವತಿ ಮಾಡಬೇಕೆಂದು ಒತ್ತಾಯಿಸಿದರು.