ಕರ್ನಾಟಕ

karnataka

ಮೈಸೂರು ಯುವ ದಸರಾ: ಶಿವಣ್ಣನ ಹಾಡಿನ ಮೋಡಿಗೆ ಕುಣಿದು ಕುಪ್ಪಳಿಸಿದ ಯುವಕರು

By ETV Bharat Karnataka Team

Published : Oct 19, 2023, 8:33 AM IST

Updated : Oct 19, 2023, 12:16 PM IST

ಮೈಸೂರಿನ ಯುವ ದಸರಾ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್, ಶರಣ್, ದಿವ್ಯ ರಾಮಚಂದ್ರ, ಬಿಗ್​ಬಾಸ್ ಖ್ಯಾತಿಯ ಕಿಶನ್, ಹಾಸ್ಯ ನಟ ಸಾಧುಕೋಕಿಲ ಯುವ ಸಮೂಹಕ್ಕೆ ಮನರಂಜನೆ ನೀಡಿದರು.

actor Shiva rajkumar
ಮೈಸೂರು ಯುವ ದಸರಾ

ಮೈಸೂರು : ಝಗಮಗಿಸುವ ಬೆಳಕಿನ ನಡುವೆ ಡಾ. ಶಿವರಾಜ್ ಕುಮಾರ್ ಅವರ ಓಂ ಚಿತ್ರದ ಮಾಸ್ ಡೈಲಾಗ್, ಮನಮೋಹಕ ನೃತ್ಯ, ಶರಣ್ ಅವರ ಗಾಯನ, ಚಿತ್ರ ನಟ ಸಾಧು ಕೋಕಿಲ ಹಾಸ್ಯಕ್ಕೆ ಯುವ ಸಮೂಹ ಹುಚ್ಚೆದ್ದು ಕುಣಿದು ಕುಪ್ಪಳಿಸಿತು.

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಆಕರ್ಷಣೆ ಹಾಗೂ ಕೇಂದ್ರ ಬಿಂದುವಾದ ಯುವಕರ ಕಣ್ಮನ ಸೆಳೆಯುವ ಯುವ ದಸರಾ ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ ಬಳಿಕ ಸಿನಿಮಾ ನಟರು ಸಮಾರಂಭಕ್ಕೆ ಮೆರಗು ತಂದರು.

ನಟ ಶಿವರಾಜ್ ಕುಮಾರ್

ನಟ ಶಿವರಾಜ್ ಕುಮಾರ್ ಮಾತನಾಡಿ, ಪ್ರತಿಯೊಬ್ಬರು ಯುವ ದಸರಾವನ್ನು ಸಂಭ್ರಮಿಸಿ. ಆದರೆ, ಓದುವ ಸಮಯದಲ್ಲಿ ಓದಬೇಕು. ತಂದೆ ತಾಯಿಗಳಿಗೆ ಗೌರವ ಕೊಡಬೇಕು ಎಂದು ಯುವ ಸಮೂಹಕ್ಕೆ ಕಿವಿ ಮಾತು ಹೇಳುವುದರ ಜೊತೆಗೆ 'ನ್ಯಾಯವೇ ದೇವರು' ಚಿತ್ರದ ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು ಹಾಗೂ 'ಆನಂದ್' ಚಿತ್ರದ ಟುವ್ವಿ ಟುವ್ವಿ ಹಾಗೂ 'ಮುತ್ತಣ್ಣ' ಚಿತ್ರದ ಮುತ್ತಣ್ಣ ಪಿಪಿ ಊದುವ ಎಂಬ ಗೀತೆಯನ್ನು ಹಾಡಿ ನೋಡುಗರನ್ನು ರಂಜಿಸಿದರು.

ಚಿತ್ರನಟ ಶರಣ್ ಮಾತನಾಡಿ, ಮೈಸೂರು ಅಂದರೆ ದಸರಾ, ದಸರಾ ಅಂದರೆ ಯುವ ದಸರಾ, ಯುವ ದಸರಾ ಅಂದರೆ ಯುವ ಮನಸ್ಸುಗಳ ಹಬ್ಬ. ದಸರಾ ನಾಡಿನ ಹಬ್ಬ. ನಾನು ಇಲ್ಲಿಗೆ ಬಂದು ನಿಲ್ಲಲು ನೀವೆ ಕಾರಣ. ದಸರಾ ಸಮಯಕ್ಕೆ ಬರುವ ನನ್ನ ಸಿನಿಮಾಗಳು ಹಿಟ್ ಆಗಲು ನೀವೆ ಕಾರಣ. ಈ ಬಾರಿಯು ನನ್ನ ಸಿನಿಮಾ ಚೂ ಮಂತರ್ ಬರುತ್ತಿದೆ. ಅದನ್ನು ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಮನವಿ ಮಾಡಿದರು.

ಶರಣ್

ಬಳಿಕ, ಶರಣ್ ಅವರು ಶಂಕರ್ ನಾಗ್ ಅಭಿನಯದ 'ಗೀತಾ' ಚಿತ್ರದ ಜೊತೆ ಜೊತೆಯಲ್ಲಿ ಇರುವೆನು ಹೀಗೆ, ಮತ್ತು ತಮ್ಮದೆ ಅಧ್ಯಕ್ಷ ಚಿತ್ರದ ಕೈನಾಗೆ ಮೈಕ್ ಇಟ್ರೆ ನಾನ್ ಸ್ಟಾಪ್ ಭಾಷಣ ಹಾಗೂ ರ‍್ಯಾಂಬೊ 2 ಚಿತ್ರದ ಚುಟು ಚುಟು ಗೀತೆಯನ್ನು ಹಾಡಿ ಯುವ ಸಮೂಹಕ್ಕೆ ಮನರಂಜನೆ ನೀಡಿದರು.

ದಿವ್ಯ ರಾಮಚಂದ್ರ ಅವರು ಕೆ ಜಿ ಎಫ್ ಚಿತ್ರದ ಜೋಕೆ ನಾನು ಬಳ್ಳಿಯ ಮಿಂಚು ಹಾಡನ್ನು ಹಾಡುವ ಮೂಲಕ ಯುವ ಸಮೂಹಕ್ಕೆ ಸಂಗೀತದ ಮುದ ಸವಿಯುವಂತೆ ಮಾಡಿದ್ರೆ, ವ್ಯಾಸರಾಜ ಸೋಸಲೇ ಅವರು ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರದ ನೋಡು ಕತ್ತು ಎತ್ತಿ, ಎಷ್ಟು ಹೊತ್ತು ನೋಡ್ತಿ ಹಾಡಿನ ಮೂಲಕ ಸಭಿಕರ ಗಮನ ಸೆಳೆದರು.

ಮೈಸೂರು ಯುವ ದಸರಾ

ಇನ್ನು ಬಿಗ್​ಬಾಸ್ ಖ್ಯಾತಿಯ ಕಿಶನ್ ಅವರು ಕಾಂತರ ಚಿತ್ರದ ಸಿಂಗಾರ ಸಿರಿಯೇ‌ ಹಾಗೂ ದರ್ಶನ್ ಅಭಿನಯದ ರಾಬರ್ಟ್‌ ಚಿತ್ರದ ಬಾ ಬಾ ನಾ ರೆಡಿ ಹಾಗೂ ಜೆಮ್ಸ್ ಚಿತ್ರದ ಗೀತೆಗೆ ಅದ್ಭುತವಾಗಿ ಹೆಜ್ಜೆ ಹಾಕಿದರು. ಜೊತೆಗೆ ಯುವ ಸಮೂಹವನ್ನು ರಂಜಿಸುವುದರ ಜೊತೆಗೆ ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ನೃತ್ಯದ ಮೂಲಕ ತಮ್ಮ ಪ್ರೀತಿಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ, ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಮಾ ಲಾಟ್ಕರ್, ಸುನೀಲ್ ಬೋಸ್, ಹಾಸ್ಯನಟ ಸಾಧುಕೋಕಿಲ ಸೇರಿದಂತೆ ಇತರರು ಹಾಜರಿದ್ದರು.

ಇದನ್ನೂ ಓದಿ :ಶಿವಮೊಗ್ಗದಲ್ಲಿ ಗುರುಕಿರಣ್ ಮೋಡಿ... ಹಿಂದಿ ಹಾಡು ಹಾಡಿದ ಸಂಸದ ರಾಘವೇಂದ್ರ

Last Updated : Oct 19, 2023, 12:16 PM IST

ABOUT THE AUTHOR

...view details