ಮೈಸೂರು: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಕರೆ ನೀಡಿದ್ದ ಬಂದ್ಗೆ ತಾಲ್ಲೂಕು ಆಡಳಿತದಿಂದ ಅನುಮತಿ ಇಲ್ಲದಿದ್ದರು ಸ್ವಯಂ ಪ್ರೇರಿತರಾಗಿ ನಂಜನಗೂಡು ಪಟ್ಟಣದಲ್ಲಿ ಬಂದ್ ವಾತಾವರಣ ಉಂಟಾಗಿದ್ದು, ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬಂದೋಬಸ್ತ್ ಮಾಡಿದ್ದಾರೆ.
ಇಂದು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪಿಗಳನ್ನು ಬಂಧಿಸುವಂತೆ ಶ್ರೀ ಕಂಠೇಶ್ವರ ಭಕ್ತರ ಹೆಸರಿನಲ್ಲಿ ಕರೆ ನೀಡಿದ್ದ ನಂಜನಗೂಡು ಬಂದ್ಗೆ ತಾಲ್ಲೂಕು ಆಡಳಿತ ಯಾವುದೇ ಅನುಮತಿ ನೀಡಿಲ್ಲ. ಆದರೂ ಸ್ವಯಂ ಪ್ರೇರಿತರಾಗಿ ನಂಜನಗೂಡು ಪಟ್ಟಣದಲ್ಲಿ ಬೆಳಗಿನಿಂದಲೇ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಪರ-ವಿರೋಧ ದೂರು ದಾಖಲು:ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಶ್ರೀ ಕಂಠೇಶ್ವರ ಉತ್ಸವ ಮೂರ್ತಿ ಬರುವಾಗ ಅದರ ಮೇಲೆ ನೀರನ್ನು ಎರಚಲಾಗಿತ್ತು ಎಂಬ ವಿಡಿಯೋ ವೈರಲ್ ಆಗಿತ್ತು. ಅದು ಅಶುದ್ಧ ನೀರು ಎಂದು ನಂಜನಗೂಡು ಶ್ರೀ ಕಂಠೇಶ್ವರ ಭಕ್ತರು ಆರೋಪಿಸಿ ಈ ಘಟನೆಗೆ ಸಂಬಂಧಿಸಿದ ವ್ಯಕ್ತಿಗಳನ್ನು ಬಂಧಿಸಬೇಕು ಎಂದು ದೂರು ದಾಖಲು ಮಾಡಿದ್ದರು. ಇತ್ತ ಆ ರೀತಿಯ ಘಟನೆ ನಡೆದಿಲ್ಲ ಎಂದು ಮತ್ತೊಂದು ಸಂಘಟನೆಯವರು ಪ್ರತಿದೂರು ನೀಡಿದ್ದು, ಇದರ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ನಂಜನಗೂಡಿನ ಶ್ರೀ ಕಂಠೇಶ್ವರ ಭಕ್ತ ಮಂಡಳಿಯ ಹೆಸರಿನಲ್ಲಿ ಜನವರಿ 4ರಂದು ನಂಜನಗೂಡು ಬಂದ್ ಕರೆಯಲಾಗಿದೆ ಎಂದು ಪ್ರಚಾರವಾಗಿತ್ತು. ಈ ಬಗ್ಗೆ ನಿನ್ನೆ ಅಪರ ಜಿಲ್ಲಾಧಿಕಾರಿ ಲೋಕನಾಥ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿ, ಬಂದ್ಗೆ ಅನುಮತಿ ನಿರಾಕರಿಸಿತ್ತು.