ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದ ಮಾಂಸಾಹಾರಿ ಪ್ರಾಣಿಗಳಿಗೆ ದನದ ಮಾಂಸ ನೀಡಲು ಚರ್ಚೆ ನಡೆಸುತ್ತೇವೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಮೃಗಾಲಯ ವೀಕ್ಷಣೆ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಜೊತೆ ದನದ ಮಾಂಸ ನೀಡುವ ಬಗ್ಗೆ ಚರ್ಚೆ ಮಾಡುತ್ತೇವೆ. ಮೃಗಾಲಯದ ಅಧಿಕಾರಿಗಳು ದನದ ಮಾಂಸ ಕೊಡುವ ಬಗ್ಗೆ ಮನವಿ ಮಾಡಿದ್ದಾರೆ. ಬುಧವಾರ ಅರಣ್ಯ ಸಚಿವರು ನಮ್ಮ ಕ್ಷೇತ್ರಕ್ಕೆ ಬರ್ತಿದ್ದಾರೆ. ಅವರೊಟ್ಟಿಗೆ ದನದ ಮಾಂಸ ಪೂರೈಕೆಗೆ ವಿನಾಯಿತಿ ನೀಡುವ ಬಗ್ಗೆ ಮಾತನಾಡುತ್ತೀನಿ ಎಂದರು.
ಕೊರೊನಾ ಸಂದರ್ಭದಲ್ಲಿ ತುಂಬಾ ಸಮಸ್ಯೆ ಆಗಿತ್ತು, ಈಗ ಸ್ವಲ್ಪ ಚೇತರಿಕೆ ಆಗ್ತಿದೆ. ಆ ಬಗ್ಗೆ ಮೃಗಾಲಯ ನಿರ್ವಹಣೆ ಕುರಿತು ಮಾಹಿತಿ ಪಡೆಯಲಿಕ್ಕೆ ಬಂದೆ. ಮೊದಲು ಹಣದ ಕೊರತೆ ಇತ್ತು, ಈಗ ಸ್ವಲ್ಪ ಚೇತರಿಕೆ ಆಗಿದೆ. ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದೆ. ಮೊದಲು 59 ಕೋಟಿಯಷ್ಟು ಆದಾಯ ಬರ್ತಿತ್ತು. ಈಗ 17 ಕೋಟಿಯಷ್ಟು ಆದಾಯ ಬರ್ತಿದೆ. ಆದರಿನ್ನೂ 47 ಕೋಟಿಯಷ್ಟು ನಷ್ಟದಲ್ಲಿದ್ದೇವೆ ಎಂದು ಹೇಳಿದರು.