ಕರ್ನಾಟಕ

karnataka

ETV Bharat / state

ಕೊರೊನಾ ದೂರ ಮಾಡು ತಾಯಿ ಎಂದು ಬೇಡಿಕೊಂಡಿದ್ದೇನೆ: ಸಚಿವ ಈಶ್ವರಪ್ಪ

ಆಷಾಢ ಶುಕ್ರವಾರವಾದ ಇಂದು ಸಚಿವ ಕೆ.ಎಸ್​.ಈಶ್ವರಪ್ಪ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ತಾಯಿಯ ದರ್ಶನ ಪಡೆದು ಕೊರೊನಾ ರೋಗ ಆದಷ್ಟು ಬೇಗ ತೊಲಗಿಸುವಂತೆ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು. ಆದರೆ ಜಿಲ್ಲಾಡಳಿತದ ನಿಷೇಧದ ನಡುವೆ ದೇವಿ ದರ್ಶನ ಪಡೆದಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.

By

Published : Jul 10, 2020, 3:10 PM IST

Minister Eshwarappa
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಸಚಿವ ಈಶ್ವರಪ್ಪ

ಮೈಸೂರು:ದೇಶಕ್ಕೆ ಅಂಟಿರುವ ಕೊರೊನಾ ರೋಗದಿಂದಾಗಿ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಈ ಮಹಾಮಾರಿಯನ್ನು ದೂರ ಮಾಡು ಎಂದು ಚಾಮುಂಡಿ ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಸಚಿವ ಕೆ.ಎಸ್​​.ಈಶ್ವರಪ್ಪ ತಿಳಿಸಿದರು.

ಇಂದು ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಷಾಢ ಶುಕ್ರವಾರ ಆದ್ದರಿಂದ ಚಾಮುಂಡೇಶ್ವರಿ ದರ್ಶನ ಪಡೆದು, ತಾಯಿಯ ಆಶೀರ್ವಾದ ಪಡೆದು ಬಂದಿದ್ದೇನೆ. ರಾಜ್ಯಕ್ಕೆ, ದೇಶಕ್ಕೆ, ಪ್ರಪಂಚಕ್ಕೆ ಈ ಕೊರೊನಾ ಒಂದು ಶಾಪವಾಗಿ ಪರಿಣಮಿಸಿದ್ದು, ಜನರಿಗೆ ಬಹಳ ತೊಂದರೆ ಕೊಡುತ್ತಿದೆ. ಈ ಕೊರೊನಾದಿಂದ ಮುಕ್ತಗೊಳಿಸು ಎಂದು ಚಾಮುಂಡಿ ತಾಯಿಯನ್ನು ಪ್ರಾರ್ಥಿಸಿದ್ದೇನೆ. ಕಳೆದ ವರ್ಷ ವಿಪರೀತ ಮಳೆಯಿಂದ ರಾಜ್ಯವೇ ಪ್ರವಾಹಕ್ಕೆ ತುತ್ತಾಗಿತ್ತು. ಅದನ್ನು ಸುಧಾರಿಸುವ ಶಕ್ತಿ ಕೊಟ್ಟವಳು ಚಾಮುಂಡಿ ತಾಯಿ, ಈ ಬಾರಿ ಕೊರೊನಾದಿಂದ ಮುಕ್ತಿಗೊಳಿಸಿ ಜನರಿಗೆ ನೆಮ್ಮದಿ ಕೊಡು ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ಈಶ್ವರಪ್ಪ ತಿಳಿಸಿದರು.

ನಿರ್ಬಂಧದ ನಡುವೆಯೂ ಸಚಿವರ ಪೂಜೆ:

ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರಿಗೆ ಹಾಗೂ ಭಕ್ತರಿಗೆ ಪ್ರವೇಶ ನಿಷೇಧ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇದರ ನಡುವೆಯೂ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಸಚಿವ ಈಶ್ವರಪ್ಪ ಹಾಗೂ ಸಂಸದ ಪ್ರತಾಪ್ ಸಿಂಹ ಜೊತೆ ಹಲವು ಸ್ಥಳೀಯ ನಾಯಕರುಗಳು ಗುಂಪಾಗಿ ದೇವಾಲಯ ಒಳಗೆ ಸಾಮಾಜಿಕ ಅಂತರ ಮರೆತಿದ್ದಾರೆ. ಅಲ್ಲದೇ ನಿಷೇಧದ ನಡುವೆಯೂ ಪೂಜೆ ಸಲ್ಲಿಸಿದ್ದು , ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ABOUT THE AUTHOR

...view details