ಕರ್ನಾಟಕ

karnataka

ಮೈಸೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ 3 ವರ್ಷದಲ್ಲಿ 64 ಚಿರತೆ ಸೆರೆ: ಡಿಸಿಎಫ್

By

Published : Feb 9, 2023, 10:22 PM IST

ಸೆರೆಹಿಡಿದ ಚಿರತೆಗಳಿಗೆ ಕಿವಿ ಭಾಗದಲ್ಲಿ ಮೈಕ್ರೋ ಚಿಪ್ ಅಳವಡಿಸಿ ಅರಣ್ಯಗಳಿಗೆ ರವಾನಿಸಲಾಗಿದೆ ಎಂದು ಮೈಸೂರು ಅರಣ್ಯ ವಲಯ ಡಿಸಿಎಫ್ ಮಾಹಿತಿ ನೀಡಿದರು.

mysore forest zone dcf basavaraju
ಮೈಸೂರು ಅರಣ್ಯ ವಲಯದ ಡಿಸಿಎಫ್ ಬಸವರಾಜು

ಮೈಸೂರು: ಮೈಸೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ 64 ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಈ ವರ್ಷದ ಜನವರಿ ತಿಂಗಳಿನಿಂದ ಇಲ್ಲಿಯವರೆಗೆ 4 ಚಿರತೆಗಳನ್ನು ಸೆರೆ ಹಿಡಿಯಲಾಗಿದೆ ಎಂದು ಡಿಸಿಎಫ್ ಬಸವರಾಜು ತಿಳಿಸಿದರು. ಇತ್ತೀಚೆಗೆ ಜಿಲ್ಲೆಯಲ್ಲಿ ಚಿರತೆ, ಹುಲಿ ಹಾಗೂ ಆನೆ ಸೇರಿದಂತೆ ಕಾಡು ಪ್ರಾಣಿಗಳು ಹಾಗೂ ಮಾನವರ ನಡುವಿನ ಸಂಘರ್ಷ ಹೆಚ್ಚಾಗಿದೆ. ಅದರಲ್ಲಿ ಮೈಸೂರು ನಗರ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಇದರಿಂದ ಜನರು ಭಯಭೀತಗೊಂಡಿದ್ದಾರೆ ಎಂದರು.

ಚಿರತೆಗಳು ಜನವಸತಿ ಪ್ರದೇಶಗಳ ಹತ್ತಿರದ ಕುರುಚಲು ಪ್ರದೇಶಗಳಲ್ಲಿ ವಾಸ ಮಾಡುತ್ತವೆ. ಇವುಗಳು ಮಾನವನ ಮೇಲೆ ದಾಳಿ ಮಾಡುವುದು ಕಡಿಮೆ. ಅವುಗಳು ಬೀದಿನಾಯಿ, ನವಿಲು, ಮೊಲ ಸೇರಿದಂತೆ ಹೆಚ್ಚಾಗಿ ಸಣ್ಣ ಪುಟ್ಟ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಆದರೆ ಇತ್ತೀಚೆಗೆ ಚಿರತೆ ದಾಳಿ ಹೆಚ್ಚಾಗಿರುವುದರಿಂದ ಚಿರತೆಗಳ ಸಂಖ್ಯೆ ಹೆಚ್ಚಾಗಿದೆ ಎಂಬ ತೀರ್ಮಾನಕ್ಕೆ ಬರಲು ಆಗುವುದಿಲ್ಲ ಎಂದು ಹೇಳಿದರು.

ನಗರೀಕರಣ ಸೇರಿದಂತೆ ಹಲವು ಕಾರಣಗಳಿಂದ ಚಿರತೆಗಳ ವಾಸಸ್ಥಾನ ಕಡಿಮೆಯಾಗಿದೆ. ಅವು ಆಹಾರಕ್ಕಾಗಿ ಹುಡುಕಾಟ ನಡೆಸುತ್ತಿರುವಾಗ ಜನರು ತಮ್ಮ ಮೊಬೈಲ್‌ಗಳಲ್ಲಿ ಫೋಟೋ ತೆಗೆದು ವೈರಲ್ ಮಾಡುತ್ತಿದ್ದಾರೆ. ಇದರಿಂದ ಜನರು ಗಾಬರಿಗೊಳಗಾಗುತ್ತಿದ್ದಾರೆ. ಅದನ್ನು ಬಿಟ್ಟರೆ ಬೇರೆ ಕಾರಣವಿಲ್ಲ ಎಂದು ಡಿಸಿಎಫ್ ಹೇಳಿದರು.

ಟಿ.ನರಸೀಪುರದಲ್ಲಿ ಸೆರೆ ಸಿಕ್ಕ ಚಿರತೆಯ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಭಾಗದಲ್ಲಿ ಸುಮಾರು 4 ಜನರನ್ನು ಕೊಂದಿದ್ದು ಇದೇ ಚಿರತೆಯೇ ಎನ್ನುವುದರ ಬಗ್ಗೆ ಪ್ರಯೋಗಾಲಯದಿಂದ ವರದಿ ಬಂದ ನಂತರ ಕಾರಣ ತಿಳಿಯಲಿದೆ. ಸಾಮಾನ್ಯವಾಗಿ ಚಿರತೆ ಮೊದಲು ತಲೆಭಾಗವನ್ನು ತಿನ್ನುವುದಿಲ್ಲ. ಆದರೆ ಟಿ.ನರಸೀಪುರದಲ್ಲಿ ಕೊಂದ ಬಾಲಕನ ತಲೆಭಾಗ ತಿಂದಿರುವುದು ಅಪರೂಪದ ಪ್ರಕರಣ ಎಂದು ತಿಳಿಸಿದರು.

ಮೈಕ್ರೋಚಿಪ್​ ಅಳವಡಿಕೆ: ಸೆರೆಹಿಡಿದ ಚಿರತೆಗಳಿಗೆ ಕಿವಿ ಭಾಗದಲ್ಲಿ ಮೈಕ್ರೋಚಿಪ್ ಅಳವಡಿಸಿ, ದೂರದ ಅರಣ್ಯ ಭಾಗಗಳಿಗೆ ಬಿಡಲಾಗುವುದು. ಟಿ.ನರಸೀಪುರ ಭಾಗದ ಬನ್ನೂರು ಹಾಗೂ ಸೋಸಲೆ ಹೋಬಳಿಯಲ್ಲಿ ಚಿರತೆ ದಾಳಿಯ ಬಗ್ಗೆ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಚಿರತೆ ಸೆರೆಗೆ ಬೋನ್‌ಗಳ ಕೊರತೆ ಇಲ್ಲ ಎಂದರು.

ಮೈಸೂರು ಅರಣ್ಯ ಇಲಾಖೆಯ ವಲಯ ವ್ಯಾಪ್ತಿಯಲ್ಲಿ 20 ಬೋನ್‌ಗಳಿದ್ದು, ಹೊಸದಾಗಿ 30 ಬೋನ್ ಗಳನ್ನು ತರಿಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೇವೆ. ಸೆರೆಗಾಗಿ ಕಾರ್ಯಪಡೆ ರಚಿಸಲಾಗಿದೆ. ಮುಂದಿನ ವಾರ ವಾಹನಗಳು ಬರಲಿವೆ. ಚಿರತೆ ಕಾರ್ಯಪಡೆ ಮೈಸೂರು ವಲಯ ವ್ಯಾಪ್ತಿ ಮುಂದಿನ ವಾರದಿಂದ ಕಾರ್ಯಾಚರಣೆ ನಡೆಸಲಿದೆ ಎಂದು ಮಾಹಿತಿ ನೀಡಿದರು.

ಪ್ರಾಣಿಗಳಿಂದ ಪ್ರಕೃತಿ ಸಮತೋಲನ: ಪ್ರಾಣಿಗಳು ಇರುವುದರಿಂದ ಪ್ರಕೃತಿಯಲ್ಲಿ ಸಮತೋಲನ ಉಂಟಾಗುತ್ತದೆ. ಹುಲಿ ಇರುವುದರಿಂದ ನದಿ ನೀರಿನ ಸೆಲೆ ಹೆಚ್ಚಾಗಿ ಅರಣ್ಯ ಬೆಳೆಯಲು ಕಾರಣವಾಗುತ್ತದೆ. ಅದೇ ರೀತಿ ಚಿರತೆ ಸೇರಿದಂತೆ ಹಲವು ಪ್ರಾಣಿಗಳು ಇರುವುದರಿಂದ ಪ್ರಕೃತಿಯ ಸಮತೋಲನಕ್ಕೆ ಸಹಾಯವಾಗಿದೆ. ಬರೀ ಮನುಷ್ಯ ಇದ್ದರೆ ಮಾತ್ರ ಮಾತ್ರ ಪ್ರಯೋಜನ ಎಂದು ತಿಳಿಯಬಾರದು. ಪರಿಸರದಲ್ಲಿ ಪ್ರಾಣಿಗಳೂ ಸಹ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿವೆ ಎಂದು ರಣಹದ್ದು, ತೋಳ, ನರಿ ಉದಾಹರಣೆ ನೀಡಿದ ಅವರು, ಈ ಪ್ರಾಣಿ, ಪಕ್ಷಿಗಳಿಂದ ಪ್ರಕೃತಿಗೆ ಆಗುವ ಅನುಕೂಲಗಳ ಬಗ್ಗೆ ಅರಿವು ಮೂಡಿಸಿದರು.

ಇದನ್ನೂಓದಿ:ಆದಿಯೋಗಿ ಪ್ರತಿಮೆ ನಿರ್ಮಾಣ ಪ್ರಶ್ನಿಸಿದ್ದ ಪಿಐಎಲ್ ವಜಾ

ABOUT THE AUTHOR

...view details