ಮಂಡ್ಯ:ದಾಯಾದಿ ಕಲಹದ ಹಿನ್ನಲೆಯಲ್ಲಿ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ವಿರುದ್ಧ 20 ತಿಂಗಳ ಬಳಿಕ FIR ದಾಖಲಾಗಿದೆ.
ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಿಕ್ಕೇರಿ ಫೊಲೀಸ್ ಠಾಣೆಯಲ್ಲಿ ಕೃಷ್ಣಮೂರ್ತಿ ವಿರುದ್ಧ FIR ದಾಖಲು ಮಾಡಲಾಗಿದ್ದು, ದಾಯಾದಿ ರಂಗರಾಜು ಎಂಬುವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.
ಕಿಕ್ಕೇರಿ ಕೃಷ್ಣಮೂರ್ತಿ ವಿರುದ್ಧ FIR ಕೆಆರ್ಪೇಟೆ ತಾಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ ಆದೇಶದ ಮೇರೆಗೆ ದೂರು ದಾಖಲಾಗಿದ್ದು, 20 ತಿಂಗಳ ಹಿಂದೆ ದಾಯಾದಿ ರಂಗರಾಜು ಎಂಬುವರು ಕೃಷ್ಣಮೂರ್ತಿ ವಿರುದ್ಧ ದೂರು ನೀಡಿದ್ದರು. ಆದರೆ, ಕಿಕ್ಕೇರಿ ಪೊಲೀಸರು ಎನ್ಸಿಆರ್ ದಾಖಲು ಮಾಡಿದ್ದರು. ಇದನ್ನು ಪ್ರಶ್ನೆ ಮಾಡಿ ರಂಗರಾಜು ಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ನ್ಯಾಯಾಲಯದ ಆದೇಶದಂತೆ ಕೃಷ್ಣಮೂರ್ತಿ ಮೇಲೆ ಐಪಿಸಿ ಸೆಕ್ಷನ್ 144, 323, 324, 504, 506 ಹಾಗೂ 34ರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.
2017ರ ಜುಲೈ 5 ರಂದು ಹಣಕಾಸಿನ ವಿಚಾರವಾಗಿ ದಾಯಾದಿ ರಂಗರಾಜು ಮತ್ತು ಕೃಷ್ಣಮೂರ್ತಿ ನಡುವೆ ಗಲಾಟೆ ನಡೆದಿತ್ತು. ಕಲಹದಲ್ಲಿ ನನ್ನ ಮೇಲೆ ಕೃಷ್ಣಮೂರ್ತಿ ಹಲ್ಲೆ ನಡೆಸಿದ್ದಾರೆ ಎಂದು ರಂಗರಾಜು ಕಿಕ್ಕೇರಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಪೊಲೀಸರು ಈ ಸಂಬಂಧ ದೂರು ದಾಖಲಿಸದೆ, ಎನ್ಸಿಆರ್ ಮಾಡಿದ್ದರು. ಇದನ್ನು ಪ್ರಶ್ನೆ ಮಾಡಿ ರಂಗರಾಜು ನ್ಯಾಯಾಲಯದ ಮೆಟ್ಟಿಲೇರಿದ್ದರು.